Get Updates
Get notified of breaking news, exclusive insights, and must-see stories!

ಬದುಕನ್ನು ಹುಡುಕಿಕೊಂಡು ಸುರಕ್ಷಿತ ತಾಣಗಳತ್ತಗುಜರಾತಿಗಳ ಗುಳೆ

ಅಹಮದಾಬಾದ್‌ : ದುರಂತದ ಬಗ್ಗೆ ಒಂದೆರಡು ಹನಿ ಕಣ್ಣೀರಿಗೂ ಬಿಡುವು ಕೊಡದ, ಗಳಿಗೆಗೊಮ್ಮೆ ನಡುಗುತ್ತಿರುವ ಬದುಕು, ಕಣ್ಣೆದುರೇ ಜೀವ ಕಳಕೊಂಡ ಕಳ್ಳುಬಳ್ಳಿಗಳಿಗೆ ಸಂಸ್ಕಾರ ಮಾಡಲಿಕ್ಕೂ ಸಾಧ್ಯವಾಗದ ಅಸಹಾಯಕತೆ, ಸಾಂಕ್ರಾಮಿಕ ರೋಗಗಳ ಭೀತಿ - ಬದುಕು ಇಷ್ಟು ದುರ್ಬರವೆಂದು ಗುಜರಾತಿಗಳು ಯಾವತ್ತೂ ಯೋಚಿಸಿರಲಿಕ್ಕಿಲ್ಲ . ಕನಸಿನಲ್ಲಿ ಕಾಣದ್ದೀಗ ಎದುರಿಗೆ ಧುತ್ತೆಂದು ನಿಂತಿದೆ. ಕಂಗಾಲಾದ ಜನ ಬದುಕನ್ನು ಹುಡುಕಿಕೊಂಡು ದೂರದ ಮುಂಬಯಿ, ನವದೆಹಲಿ, ಬೆಂಗಳೂರು, ಬರೋಡಾಗಳತ್ತ ಸಾಮೂಹಿಕ ವಲಸೆ ಹೊರಟಿದ್ದಾರೆ. ಅದು ಬದುಕಿಗಾಗಿ ಹೊರಟ ಗುಳೆ.

ಜನರನ್ನು ಹೊತ್ತುಕೊಂಡು ಓಡುತ್ತಿರುವ ಟೆಂಪೊ, ಲಾರಿಗಳ ಚಿತ್ರಗಳೀಗ ಕಛ್‌ನ ಭುಜ್‌, ಅಹಮದಾಬಾದ್‌ ಮುಂತಾದ ಪ್ರದೇಶಗಳಲ್ಲಿ ಸರ್ವೇ ಸಾಮಾನ್ಯ. ಮುಖ್ಯಮಂತ್ರಿ ಕೇಶುಭಾಯಿ ಪಟೇಲ್‌ಗೆ ದಿಕ್ಕೇ ತೋಚುತ್ತಿಲ್ಲ . ಮತ್ತೊಮ್ಮೆ ಭೂಕಂಪ ಸಂಭವಿಸಬಹುದೆನ್ನುವ ಹವಾಮಾನ ಇಲಾಖೆಯ ನಿರ್ದೇಶಕರ ಭೀತಿಗೆ ಮುಖ್ಯಮಂತ್ರಿಗಳೂ ದನಿಗೂಡಿಸಿದ್ದಾರೆ. ಸಾಧ್ಯವಿರುವ ಎಲ್ಲಾ ಪರಿಹಾರ ಕಾರ್ಯಕ್ರಮಗಳನ್ನು ಕೈಗೊಂಡಿದ್ದೇವೆ ಎನ್ನುವ ಅವರು, ಪರಿಹಾರ ಕಾರ್ಯಗಳಿಗಾಗಿ 500 ಕೋಟಿ ರುಪಾಯಿಗಳ ನೆರವು ನೀಡುವಂತೆ ಕೇಂದ್ರಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಪ್ರತಿಕ್ರಿಯೆಯೆಂಬಂತೆ ವಾಜಪೇಯಿ, ಉದಾರ ನೆರವು ನೀಡುವಂತೆ ಮತ್ತೊಮ್ಮೆ ಮಹಾಜನತೆಯಲ್ಲಿ ಮನವಿ ಮಾಡಿದ್ದಾರೆ.

ಬೂದಿಗೊಂಡ ಭುಜ್‌ನಲ್ಲಿ ಅವಶೇಷಗಳಂತೆ ಜೀವ ಉಳಿಸಿಕೊಂಡಿರುವ ಕೆಲವೇ ನಾಗರಿಕರು, ತಮ್ಮ ಬಂಧು ಬಳಗ, ಈ ಕಾಲದವರೆಗೆ ಸಂಪಾದಿಸಿದ ಆಸ್ತಿ ಎಲ್ಲವನ್ನೂ ತೊರೆದು ದಕ್ಕುವ ಸುರಕ್ಷಿತ ತಾಣಗಳತ್ತ ತೆರಳುತ್ತಿದ್ದಾರೆ. ಸಾವಿರಾರು ನಿರ್ಗತಿಕರು, ಮುಖ್ಯವಾಗಿ ರೈತರು ಕಾಲ್ನಡಿಗೆಯಲ್ಲೇ ತಮ್ಮ ಹಳ್ಳಿಗಳನ್ನು ತೊರೆಯುತ್ತಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮುಂದಿನ 24 ಗಂಟೆಗಳಲ್ಲಿ ಮತ್ತೊಂದು ತಲ್ಲಣಗೊಳಿಸುವಂಥ ಭೂಕಂಪ ಗುಜರಾತ್‌ನ ಮೇಲೆ ಅಪ್ಪಳಿಸಬಹುದೆಂದು ಹವಾಮಾನ ಇಲಾಖೆ ನೀಡಿರುವ ಎಚ್ಚರಿಕೆಯ ಹಿನ್ನೆಲೆಯಲ್ಲಿ ಜನರ ಗುಳೆ ಆರಂಭವಾಗಿದೆ. ಮುಖ್ಯಮಂತ್ರಿ ಕೇಶುಭಾಯಿ ಕೂಡ, ಮತ್ತೊಂದು ಆಘಾತ ಎದುರಿಸಲು ಜನತೆ ಸಿದ್ಧವಾಗಿರಬೇಕೆಂದು ಹೇಳಿಕೆ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+