ಎಲ್ಲಿದ್ದಾರೆ ಪ್ರತಿಭಾವಂತ ಕನ್ನಡ ವಿದ್ಯಾರ್ಥಿಗಳು? ಸಿಂಧ್ಯಾ ವಿಷಾದ
*ಉದಾತ್ ಡಿ. ಭಾರದ್ವಾಜ್
ಬೆಂಗಳೂರು : ಕನ್ನಡ ನೆಲದಲ್ಲೇ ಕನ್ನಡ ಮಾಧ್ಯಮ ವಿದ್ಯಾರ್ಥಿಗಳನ್ನು ಹುಡುಕಿ ಪ್ರಶಸ್ತಿ ನೀಡಬೇಕಾದ ಪರಿಸ್ಥಿತಿ ನೆಲೆಗೊಂಡಿದೆ ಎಂದು ವಿಧಾನಸಭೆಯ ಜನತಾದಳ ಸಂಯುಕ್ತ ಪಕ್ಷದ ಮುಖಂಡ ಪಿಜಿಆರ್ ಸಿಂಧ್ಯಾ ಕಳವಳ ವ್ಯಕ್ತ ಪಡಿಸಿದ್ದಾರೆ.
ಅ.ನ.ಕೃ ಪ್ರತಿಷ್ಠಾನ ಮತ್ತು ನಿರ್ಮಾಣ್ ಶೆಲ್ಟರ್ಸ್ ಸ್ವಯಂ ಸೇವಾ ಸಂಸ್ಥೆ ಇತ್ತೀಚೆಗೆ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು. ಇಂದಿನ ಶೈಕ್ಷಣಿಕ ಸನ್ನಿವೇಶದಲ್ಲಿ ಮಾಹಿತಿ ತಂತ್ರಜ್ಞಾನಕ್ಕೆ ಎಲ್ಲಿಲ್ಲದ ಮಹತ್ವ ನೀಡಲಾಗುತ್ತಿದೆ. ಈ ಕ್ಷೇತ್ರಕ್ಕೆ ಇಂಗ್ಲೀಷ್ ಅನಿವಾರ್ಯವೆಂಬ ಭ್ರಮೆಯನ್ನು ಬಿತ್ತಲಾಗುತ್ತಿದೆ ಎಂದರು.
ಚೀನಾ, ಜಪಾನ್, ಜರ್ಮನಿಯಂತಹ ದೇಶಗಳು ಇಂಗ್ಲಿಷಿನ ಹಂಗಿಲ್ಲದೆ ತಾಂತ್ರಿಕ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿವೆ. ಈ ಅಂಶವನ್ನು ನಾವು ಗಮನಿಸಬೇಕು. ತಾಂತ್ರಿಕ ಪ್ರಗತಿಗೆ ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಬಲಿಕೊಡಬೇಕಾದ ಅಗತ್ಯವಿಲ್ಲ . ಈ ನಿಟ್ಟಿನಲ್ಲಿ ಅ.ನ.ಕೃ . ಪ್ರತಿಷ್ಠಾನ ಮತ್ತು ನಿರ್ಮಾಣ್ ಶೆಲ್ಟರ್ಸ್ ಹಮ್ಮಿಕೊಂಡಿರುವ ಇಂತಹ ಯೋಜನೆ ಸ್ತುತ್ಯ ಎಂದ ಸಿಂಧ್ಯ, ಆಡಳಿತ ಸುಧಾರಣೆಗೆ ಮಹತ್ವಪೂರ್ಣ ಸಲಹೆಗಳನ್ನು ನೀಡಿರುವ ಹಾರ್ನಳ್ಳಿ ರಾಮಸ್ವಾಮಿ ವರದಿ, ಆಡಳಿತ ಭಾಷೆ ಅನುಷ್ಠಾನದ ಬಗ್ಗೆ ಚಕಾರ ಎತ್ತದಿರುವುದು ಆಶ್ಚರ್ಯ ಎಂದು ನುಡಿದರು.
ಕನ್ನಡ ಮಾಧ್ಯಮದ ವಿದ್ಯಾರ್ಥಿಗಳನ್ನು ಹುಡುಕಿ ಪ್ರೋತ್ಸಾಹಿಸಿದ ಸಂಸ್ಥೆಗಳನ್ನು ಯೋಜನೆಯ ಫಲಾನುಭವಿ ವಿದ್ಯಾರ್ಥಿಗಳು ಇಂಗ್ಲಿಷ್ನಲ್ಲೇ ಅಭಿನಂದಿಸಿದ ವಿಪರ್ಯಾಸವೂ ಸಮಾರಂಭದಲ್ಲಿ ನಡೆಯಿತು. ಹಿರಿಯ ಶಿಕ್ಷಣ ತಜ್ಞ ಎಚ್ಚೆನ್ ಮಧ್ಯೆ ಪ್ರವೇಶಿಸಿ ಈ ಹುಚ್ಚುಚ್ಚಾರಕ್ಕೆ ತಡೆ ಹಾಕಿದರು.
ಅಂದಿನ ಸಮಾರಂಭದಲ್ಲಿ ಒಟ್ಟು 25 ವಿದ್ಯಾರ್ಥಿಗಳಿಗೆ ಸುಮಾರು ಒಂದೂವರೆ ಲಕ್ಷ ರುಪಾಯಿ ವಿದ್ಯಾರ್ಥಿ ವೇತನ ವಿತರಿಸಲಾಯಿತು.