ಶಾಶ್ವತ ಪ್ರಕೃತಿ ವಿಕೋಪ ನಿರ್ವಹಣಾ ಪ್ರಾಧಿಕಾರ ರಚನೆ ಸಲಹೆ
ಬೆಂಗಳೂರು : ಪೋಖ್ರಾನ್ನಲ್ಲಿ ಭಾರತ ನಡೆಸಿದ ಅಣ್ವಸ್ತ್ರ ಪರೀಕ್ಷೆಯಿಂದಲೇ ಗುಜರಾತ್ನಲ್ಲಿ ಜನವರಿ 26ರಂದು ಭೀಕರ ಭೂಕಂಪ ಸಂಭವಿಸಿದೆ ಎಂಬುದು ತಪ್ಪು ಕಲ್ಪನೆ, ಅಣು ಪರೀಕ್ಷೆಗೂ - ಭೂಕಂಪಕ್ಕೂ ಸಂಬಂಧ ಇಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಮುರಳಿ ಮನೋಹರ ಜೋಷಿ ಸೋಮವಾರ ಬೆಂಗಳೂರಿನಲ್ಲಿ ತಿಳಿಸಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ರಾಣ್ ಆಫ್ ಕಛ್ ಪ್ರದೇಶ ಭೌಗೋಳಿಕವಾಗಿ ಸೂಕ್ಷ್ಮವಾದ ಭೂ ಭಾಗವಾಗಿದ್ದು, ಪೋಖ್ರಾನ್ನಲ್ಲಿ ನಡೆಸಲಾದ ಎರಡು ಅಣ್ವಸ್ತ್ರ ಪರೀಕ್ಷೆಗಳಿಗೂ ಈ ಪ್ರಕೃತಿ ವಿಕೋಪಕ್ಕೂ ಒಂದಕ್ಕೊಂದು ಸಂಬಂಧವಿಲ್ಲ ಎಂದು ಅವರು ಪ್ರತಿಪಾದಿಸಿದರು.
ಶಾಶ್ವತ ಪ್ರಕೃತಿ ವಿಕೋಪ ನಿರ್ವಹಣಾ ಪ್ರಾಧಿಕಾರ : ರಾಷ್ಟ್ರದಲ್ಲಿ ಪದೇಪದೇ ಸಂಭವಿಸುತ್ತಿರುವ ಚಂಡಮಾರುತ, ಭೂಕಂಪವೇ ಮೊದಲಾದ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ತುರ್ತಾಗಿ ಹಾಗೂ ಸೂಕ್ತವಾಗಿ ಕಾರ್ಯ ನಿರ್ವಹಿಸಲು ಶಾಶ್ವತ ಪ್ರಕೃತಿ ವಿಕೋಪ ನಿರ್ವಹಣಾ ಪ್ರಾಧಿಕಾರ ಒಂದನ್ನು ರಚಿಸಬೇಕು ಎಂದೂ ಅವರು ಸಲಹೆ ಮಾಡಿದರು.
ಇದಕ್ಕೂ ಮುನ್ನ ಏಷಿಯನ್ ಮತ್ತು ಫೆಸಿಪಿಕ್ ತಂತ್ರಜ್ಞಾನ ವರ್ಗಾವಣೆ ಕೇಂದ್ರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಭೂಕಂಪದಿಂದ ಉಂಟಾಗುವ ತೀವ್ರ ಹಾನಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಆವಿಷ್ಕಾರಗಳನ್ನು ಮಾಡಬೇಕೆಂದು ವಿಜ್ಞಾನಿಗಳಿಗೆ ಹಾಗೂ ತಂತ್ರಜ್ಞರಿಗೆ ಕರೆ ನೀಡಿದರು. ಭೂಕಂಪದ ತೀವ್ರತೆಯನ್ನು ತಡೆದುಕೊಳ್ಳುವ ಕಟ್ಟಡ ನಿರ್ಮಾಣಗಳ ಬಗ್ಗೆ ಕೂಡ ಅಧ್ಯಯನ ನಡೆಸಬೇಕೆಂದು ಅವರು ಅಭಿಪ್ರಾಯಪಟ್ಟರು. (ಯು.ಎನ್.ಐ)