ಗುಜರಾತ್ ಭೂಕಂಪ : ಮರಳಿ ಮಣ್ಣಿಗೆ 25 ಸಾವಿರ ಮಂದಿ
ಅಹಮದಾಬಾದ್ : ಗುಜರಾತ್ನಲ್ಲಿ ಮರಳಿ ಮಣ್ಣಿಗೆ ಸೇರುತ್ತಿರುವವರ ಸಂಖ್ಯೆ ಮುಂದುವರಿಯುತ್ತಿದ್ದು , ಈವರೆಗೆ ಕನಿಷ್ಠ 25 ಸಾವಿರ ಮಂದಿ ಭೂಕಂಪಕ್ಕೆ ಬಲಿಯಾಗಿದ್ದಾರೆ ಹಾಗೂ ಅಹಮದಾಬಾದ್, ಭುಜ್, ಅಂಜಾರ್ ಮತ್ತು ಕಛ್ ಪ್ರಾಂತ್ಯಗಳಲ್ಲಿ ಸುಮಾರು 1 ಲಕ್ಷ ಮಂದಿ ಕಟ್ಟಡಗಳ ಅವಶೇಷಗಳಡಿ ಸಿಕ್ಕಿಬಿದ್ದಿದ್ದಾರೆಂದು ಇತ್ತೀಚಿನ ವರದಿಗಳು ತಿಳಿಸಿವೆ.
ಸೋಮವಾರ ಬೆಳಿಗ್ಗೆ ಕೂಡ ಭುಜ್ ಪ್ರದೇಶದಲ್ಲಿ ಭೂಕಂಪಗಳ ಹಾವಳಿ ಮರುಕಳಿಸಿತು. ಈ ಕಂಪನಗಳ ತೀವ್ರತೆಯನ್ನು ದೆಹಲಿಯಲ್ಲಿನ ರಿಕ್ಟರ್ ಮಾಪಕಗಳು 3.5 ಮತ್ತು 4.6 ಎಂದು ದಾಖಲಿಸಿರುವುದಾಗಿ ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ.
ಗುಜರಾತಿಗೆ ಪ್ರಧಾನಿ ಭೇಟಿ : ಸಂಪುಟದ ಸಹೋದ್ಯೋಗಿಗಳು ಹಾಗೂ ಉನ್ನತ ಅಧಿಕಾರಿಗಳೊಂದಿಗೆ ಪ್ರಧಾನಿ ವಾಜಪೇಯಿ, ಭೂಕಂಪದ ತಾಂಡವಕ್ಕೆ ತುತ್ತಾದ ಭುಜ್ ಮತ್ತು ಕಛ್ ಪ್ರದೇಶಗಳ ವೈಮಾನಿಕ ಸಮೀಕ್ಷೆ ಯನ್ನು ಸೋಮವಾರ ನಡೆಸಿದರು.
ಈ ನಡುವೆ ಸೇನೆ ಹಾಗೂ ಖಾಸಗಿ ಸಂಘ ಸಂಸ್ಥೆಗಳು ಪರಿಹಾರ ಕಾರ್ಯದಲ್ಲಿ ಎಡೆಬಿಡದೆ ತೊಡಗಿವೆ. ವಿದೇಶಿ ನೆರವು ಕೂಡ ಸೋಮವಾರ ಗುಜರಾತನ್ನು ಮುಟ್ಟಿದೆ. ಕಾಂಡ್ಲಾ ಬಂದರಿನಲ್ಲಿ ಎರಡು ಹಡಗುಗಳನ್ನು ಆಸ್ಪತ್ರೆಗಳಾಗಿ ಪರಿವರ್ತಿಸಲಾಗಿದೆ.
ಸೇಲಂ ವರದಿ : ತಮಿಳುನಾಡಿನ ಹೊಸೂರು, ಕೃಷ್ಣಗಿರಿ ಹಾಗೂ ಕರ್ನಾಟಕದ ಕೆಲ ಭಾಗಗಳಲ್ಲಿ ಸೋಮವಾರ ಬೆಳಿಗ್ಗೆ ಲಘು ಭೂಕಂಪ ಸಂಭವಿಸಿದೆ. ಹೊಸೂರಿನಲ್ಲಿ ಭೂಕಂಪದ ತೀವ್ರತೆಗೆ ಶಾಲಾ ಕಟ್ಟಡವೊಂದು ಜಖಂ ಗೊಂಡಿದ್ದು , ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಅನಧಿಕೃತ ಮೂಲಗಳು ತಿಳಿಸಿವೆ. ಆದರೆ, ಯಾವುದೇ ಜೀವಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ .
(ಯುಎನ್ಐ)