ಬೆಂಗಳೂರಿನ ಕೆಲವೆಡೆ 20 ಸೆಕೆಂಡುಗಳ ಭೂಕಂಪ:ಭಯಗ್ರಸ್ತ ಜನತೆ
ಬೆಂಗಳೂರು : ಸೋಮವಾರ ಬೆಳಿಗ್ಗೆ 08.15 ರ ಸಮಯ. ಜನ ಒಮ್ಮೆಗೇ ಜೀವಭಯದಿಂದ ಕೂಗುತ್ತ ಮನೆಗಳಿಂದ ಬೀದಿಗೆ ಓಡಿ ಬಂದರು. ಅವರೆಲ್ಲರ ಕಣ್ಣ ಮುಂದೆ ಗುಜರಾತ್ ದುರಂತದ ಚಿತ್ರಗಳಿದ್ದವು.
ನಗರದ ಇಂದಿರಾ ನಗರ, ಕೋಣನ ಕುಂಟೆ, ಲಕ್ಕಸಂದ್ರ, ಜಯನಗರ, ಕೆಂಗೇರಿ, ಮಲ್ಲೇಶ್ವರಂ, ವಿಜಯ ನಗರಗಳಲ್ಲಿ 20 ಸೆಕೆಂಡುಗಳ ಕಾಲ ಭೂಕಂಪ ಸಂಭವಿಸಿದೆ. ಈ ನಡುಕದಿಂದ ಜನರು ಒಮ್ಮೆಗೇ ಮನೆಯಿಂದ ಹೊರಗೆ ಓಡಿ ಬಂದರು. ಕಂಪ್ಯೂಟರ್ ಮುಂದೆ ಕೆಲಸ ಮಾಡುತ್ತಿದ್ದವರು ತುಸು ಹೊತ್ತು ಕಂಪ್ಯೂಟರ್ ಹದ ತಪ್ಪಿರುವುದಾಗಿ ಹೇಳಿದ್ದಾರೆ. ಬಹು ಮಹಡಿ ಕಟ್ಟಡಗಳಲ್ಲಿ ವಾಸಿಸುತ್ತಿದ್ದವರು ಭೂಮಿ ನಡುಗುತ್ತಿರುವ ಅನುಭವವಾದ ಕೂಡಲೇ ಜೀವಭಯದಿಂದ ಕಟ್ಟಡಗಳಿಂದ ಆಚೆಗೆ ಓಡಿ ಬಂದಿದ್ದಾರೆ.
ನಗರದ ಹಲವು ಕಡೆಗಳಲ್ಲಿ ಭೂಕಂಪವಾಗಿರುವ ವರದಿಗಳು ಬಂದಿರುವುದನ್ನು ಪೊಲೀಸ್ ಮಹಾ ನಿರ್ದೇಶಕ ಸಿ. ದಿನಕರ್ ಖಚಿತ ಪಡಿಸಿದ್ದಾರೆ. ಆದರೆ, ಯಾವುದೇ ಹಾನಿ ಸಂಭವಿಸಿದ ವರದಿಯಾಗಿಲ್ಲ. ಭೂಮಿ ಕಂಪಿಸಿರುವ ಅನುಭವವಾಗಿರುವುದು ನಿಜ ಎಂದು ಅವರು ಹೇಳಿದ್ದಾರೆ.
ಇದುವರೆಗೆ ಗೌರಿಬಿದನೂರಿನ ಭೂಕಂಪನ ಮಾಪನ ಕಚೇರಿಯಿಂದ ಬೆಂಗಳೂರಿನಲ್ಲಿ ಭೂಕಂಪ ಸಂಭವಿಸಿರುವ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಗುಜರಾತ್ ಭೂಕಂಪದ ನಂತರದ ಪರಿಣಾಮ ಇದಾಗಿರಬಹುದೆಂದು ಬೆಂಗಳೂರಿನ ತಜ್ಞರು ಹೇಳಿದ್ದಾರೆ.
(ಇನ್ಫೋ ವಾರ್ತೆ)