ಪ್ರಧಾನಿಯಿಂದ ‘ಆಪರೇಷನ್ ಸಹಾಯತಾ ಗುಜರಾತ್’ ಪರಿಶೀಲನೆ
ಕಾಂಡ್ಲಾ : ಹವಾಮಾನ ವೀಕ್ಷಣಾಲಯದ ಎಚ್ಚರಿಕೆಗಳನ್ನು ಬದಿಗೊತ್ತಿ ಭೂಕಂಪ ಪೀಡಿತ ಗುಜರಾತ್ನ ಸಂತ್ರಸ್ತರ ನೋವಿನಲ್ಲಿ ಭಾಗಿಯಾಗಲು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಸೋಮವಾರ ತಮ್ಮ ಸಂಪುಟದ ಕೆಲವು ಸಹೋದ್ಯೋಗಿಗಳೊಂದಿಗೆ ಸೋಮವಾರ ಸಂಜೆ ಇಲ್ಲಿಗೆ ಆಗಮಿಸಿದರು.
ಭೂಕಂಪದಿಂದ ತತ್ತರಿಸಿರುವ ಹಲವು ಪ್ರದೇಶಗಳಿಗೆ ಪ್ರಧಾನಿ ಭೇಟಿ ನೀಡಿದರು. ಗೃಹ ಸಚಿವ ಎಲ್. ಕೆ. ಆಡ್ವಾಣಿ, ಆರೋಗ್ಯ ಸಚಿವ ಸಿ.ಪಿ. ಠಾಕೂರ್, ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ, ಬಿ.ಜೆ.ಪಿ. ಹಿರಿಯ ನಾಯಕ ಸಾಹಿಬ್ ಸಿಂಗ್ ವರ್ಮಾ ಹಾಗೂ ಸೇನಾ ಮುಖ್ಯಸ್ಥರು ಮತ್ತು ಬಿಎಸ್ಎಫ್ ಅಧಿಕಾರಿಗಳ ಜತೆಗೂಡಿ ಅಟಲ್ ಅವರು ವೈಮಾನಿಕ ಸಮೀಕ್ಷೆ ನಡೆಸಿದರು.
ಆಪರೇಷನ್ ಸಹಾಯತಾ ಗುಜರಾತ್ ವಿಶೇಷ ಕಾರ್ಯಾಚರಣೆಯ ಕಾರ್ಯವೈಖರಿಯನ್ನೂ ಪರಿಶೀಲಿಸಿದ ಅವರು, ಹಲವು ಸಲಹೆ ಹಾಗೂ ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಿದರು. ಮುಂದಿನ 48 ಗಂಟೆಗಳ ಅವಧಿಯಲ್ಲಿ ಮತ್ತೆ ಮತ್ತೆ ಭೂಕಂಪ ಸಂಭವಿಸುವ ಸಾಧ್ಯತೆಗಳು ಇರುವ ಕಾರಣ ಭೇಟಿ ಕಾರ್ಯಕ್ರಮ ರದ್ದು ಮಾಡುವಂತೆ ನೀಡಲಾಗಿದ್ದ ಎಚ್ಚರಿಕೆಯನ್ನೂ ಅವರು ಕಡೆಗಣಿಸಿದರು.
ಈವರೆಗೆ 25 ಸಾವಿರ ಮಂದಿ ಸತ್ತಿದ್ದಾರೆ ಎಂಬ ವರಿದಿಗಳು ಬಂದಿದ್ದು, ಸುಮಾರು 25 ಸಾವಿರ ಕೋಟಿ ರುಪಾಯಿಗಳ ಹಾನಿ ಆಗಿದೆ ಎಂದು ಅಂದಾಜು ಮಾಡಲಾಗಿದೆ. ಭುಜ್ ಹಾಗೂ ಕಛ್ನಲ್ಲಿ ಕೊಳೆತ ಶವಗಳ ದುರ್ವಾಸನೆ ಹಬ್ಬಿದ್ದು, ಸಾಂಕ್ರಾಮಿಕ ರೋಗ ಹಬ್ಬುವ ಭೀತಿಯೂ ಉಂಟಾಗಿದೆ. ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆ ಏರುತ್ತಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದೆ. ಹೊಸ ಸಮಸ್ಯೆಗಳೂ ಹುಟ್ಟಿಕೊಳ್ಳುತ್ತಿವೆ.
ಪ್ರಧಾನಿಯವರು ವೈಮಾನಿಕ ಸಮೀಕ್ಷೆಯ ನಂತರ ಅಹಮದಾಬಾದ್ ತಲುಪಿದ್ದು, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಪ್ರಧಾನಿಯವರ ಈ ಭೇಟಿಯಿಂದ ಪರಿಹಾರ ಕಾಮಗಾರಿ ಮತ್ತಷ್ಟು ತ್ವರಿತ ಗತಿಯಲ್ಲಿ ಸಾಗುತ್ತಿದ್ದು, ರಾಜ್ಯದ ಸಂತ್ರಸ್ತರು ಹಾಗೂ ಆಡಳಿತ ವರ್ಗದಲ್ಲಿ ಹೊಸ ಭರವಸೆ ಮೂಡಿದೆ ಎಂದು ಗುಜರಾತ್ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್ ತಿಳಿಸಿದ್ದಾರೆ.