2010 ರ ಒಳಗೆ ಅಸ್ಸಾಂನಲ್ಲಿ ಯಾವುದೇ ಕ್ಷಣ ಭಾರೀ ಭೂಕಂಪ
ಗುವಾಹಟಿ : ಭೂಕಂಪಗಳ ಬಗ್ಗೆ ನಿಖರವಾಗಿ ಭವಿಷ್ಯ ಹೇಳಲು ಸಾಧ್ಯವೇ ಇಲ್ಲ ಎಂದು ವಿಜ್ಞಾನಿಗಳು ಹೇಳುತ್ತಿದ್ದರೂ, ವೈಜ್ಞಾನಿಕ ಲೆಕ್ಕಾಚಾರಗಳ ರೀತ್ಯ ಮುಂದಿನ ಕೆಲವು ವರ್ಷಗಳಲ್ಲಿ ಮತ್ತೆ ಭಾರತ ಭೀಕರ ಭೂಕಂಪಗಳಿಂದ ಹಾನಿ ಅನುಭವಿಸಲಿದೆ ಎಂಬ ವರ್ತಮಾನಗಳೂ ಬರುತ್ತಿವೆ.
ಭಾರತದಲ್ಲಿ ಭೂಕಂಪಕ್ಕೆ ತುತ್ತಾಗುವ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿರುವ ಅಸ್ಸಾಮ್ 2010ನೇ ಇಸವಿಯ ಒಳಗೆ ಯಾವುದೇ ಕ್ಷಣದಲ್ಲಿ ಭೀಕರ ಭೂಕಂಪಕ್ಕೆ ತುತ್ತಾಗಿ ಅಪಾರ ಹಾನಿ ಅನುಭವಿಸುವ ಸಾಧ್ಯತೆಗಳ ಬಗ್ಗೆ ಸೋಮವಾರ ಖ್ಯಾತ ಪರಿಸರ ತಜ್ಞರಾದ ಪ್ರೊ. ಎಸ್.ಕೆ. ಸಮ್ರಾಹ್ ಸುಳಿವು ನೀಡಿದ್ದಾರೆ.
ಅತ್ಯಂತ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿರುವ ಅಸ್ಸಾಂನಲ್ಲಿ ಕಳೆದ ಶುಕ್ರವಾರ ಗುಜರಾತ್ನಲ್ಲಿ ಸಂಭವಿಸಿದ್ದಕ್ಕಿಂತಲೂ ಭೀಕರವಾದ ಹಾಗೂ ದೊಡ್ಡ ಪ್ರಮಾಣದ ಭೂಕಂಪ ಘಟಿಸುವ ಸಾಧ್ಯತೆ ಇದೆಯಂತೆ. 2010ರೊಳಗೆ ಸಂಭವಿಸುವ ಈ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 8ರ ಪ್ರಮಾಣವನ್ನೂ ಮೀರುವ ಸಾಧ್ಯತೆ ಇದೆ ಎಂದು ಸಮ್ರಾಹ್ ಹೇಳಿದ್ದಾರೆ.
ಈ ಭೂಕಂಪ ಘಟಿಸುವುದು ವಿಳಂಬವಾದಷ್ಟೂ ಅದರ ತೀವ್ರತೆ ಹೆಚ್ಚಲಿದೆ ಎಂಬುದು ಸಮ್ರಾಹ್ ಹೇಳಿಕೆ. ಈಗ್ಗೆ 50 ವರ್ಷಗಳ ಹಿಂದೆ ಸ್ವಾತಂತ್ರ್ಯ ದಿನದಂದು ಅಸ್ಸಾಂನಲ್ಲಿ ಸಂಭವಿಸಿದ್ದ ಭೀಕರ ಭೂಕಂಪ ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿತ್ತು. ಆ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 8.5 ಎಂದು ದಾಖಲಾಗಿತ್ತು.