ಬೆಂಗಳೂರು, ದೆಹಲಿ, ಚೆನ್ನೈನಿಂದ ಅಹಮದಾಬಾದ್ಗೆವಿಶೇಷ ರೈಲು
ಜೈಪುರ : ಶುಕ್ರವಾರದ ಭೀಕರ ಭೂಕಂಪನದ ನಂತರವೂ ಗುಜರಾತ್ ಹಾಗೂ ಸುತ್ತಮುತ್ತ ಭೂಮಿ ನಡುಗುತ್ತಲೇ ಇದೆ. ಶನಿವಾರ ಸೂರತ್ನಲ್ಲಿ ಲಘು ಭೂಕಂಪ ಸಂಭವಿಸಿದ್ದರೆ, ಭಾನುವಾರ ಅಹಮದಾಬಾದ್ ಹಾಗೂ ಮುಂಬೈನಲ್ಲಿ ಭೂಮಿ ನಡುಗಿದೆ.
ಈ ಮಧ್ಯೆ ಸೂರತ್ನ ಅತಿ ದೊಡ್ಡ ಅಣುಸ್ಥಾವರಕ್ಕೆ ಯಾವುದೇ ಹಾನಿ ಸಂಭವಿಸಿಲ್ಲ ಎಂಬುದು ನೆಮ್ಮದಿಯ ವಿಷಯವಾಗಿದೆ. ಅಕಸ್ಮಾತ್ ಈ ಅಣುಸ್ಥಾವರಕ್ಕೆ ಹಾನಿ ಉಂಟಾಗಿದ್ದರೆ, ಪರಿಸ್ಥಿತಿ ಇನ್ನೂ ಭೀಕರವಾಗುತ್ತಿತ್ತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸೋನಾರ್ ಕೋಟೆ ಬಿರುಕು : ಸಾವಿರಾರು ಜನರನ್ನು ಬಲಿ ತೆಗೆದುಕೊಂಡ ಭೂಕಂಪ ಐತಿಹಾಸಿಕ ಜೈಸಲ್ಮಾರ್ ಕೋಟೆಗೂ ಹಾನಿಯುಂಟು ಮಾಡಿದೆ. ಭದ್ರಕೋಟೆಯ ಹೊರ ಭಾಗದ ಗೋಡೆಯಲ್ಲಿ ದೊಡ್ಡ ಬಿರುಕು ಮೂಡಿದೆ. ಜಾಲಿಂ ಸಿಂಗ್ ಕಿ ಹವೇಲಿ ಮತ್ತು ಬಾದಲ್ ವಿಲಾಸ್ ಅರಮನೆಯ ಗೋಡೆಗಳು ಕುಸಿದು ಬಿದ್ದಿವೆ. ಅಣು ಬಾಂಬ್ ಪರೀಕ್ಷೆ ನಡೆದ ಪ್ರದೇಶವಾದ ಪೋಖ್ರಾನ್ ಹಾಗೂ ಜೈಸಲ್ಮಾರ್ನಲ್ಲೂ ಕೆಲವು ಕಟ್ಟಡಗಳು ನೆಲಕಚ್ಚಿವೆ.
ಬಾರ್ಮರ್ ಜಿಲ್ಲೆಯಲ್ಲಿನ ಬಹುತೇಕ ಎಲ್ಲ ಹಳೆಯ ಸರ್ಕಾರಿ ಕಟ್ಟಡಗಳೂ ನೆಲಸಮವಾಗಿವೆ. ಕೋಟಾದ ರೈಲ್ವೆ ನಿಲ್ದಾಣದ ಗೋಡೆಗಳು, ಜೋಧ್ಪುರದ ಗುಮ್ಮಟ ಉರುಳಿದೆ, ರೈಲ್ವೆ ಹಳಿಗಳಿಗೂ ಅಪಾರ ಹಾನಿ ಆಗಿದೆ. ಸಮರೋಪಾದಿಯಲ್ಲಿ ನಡೆದ ಪರಿಹಾರ ಕಾಮಗಾರಿಯಿಂದಾಗಿ ಕೆಲವು ಭಾಗದ ರೈಲು ಸಂಚಾರ ಮತ್ತೆ ಆರಂಭವಾಗಿದೆ.
ಭುಜ್ ಆಸ್ಪತ್ರೆಗೂ ಹಾನಿ: ಭುಜ್ ಪ್ರದೇಶದ ಅತಿ ದೊಡ್ಡ ಆಸ್ಪತ್ರೆ ಕಟ್ಟಡವೂ ಕುಸಿದಿದ್ದು, ಗಾಯಾಳುಗಳಿಗೆ ಬಯಲಿನಲ್ಲೇ ಚಿಕಿತ್ಸೆ ಮಾಡಲಾಗುತ್ತಿದೆ. ರೆಡ್ ಕ್ರಾಸ್ ಸೇರಿದಂತೆ ಹಲವು ಸಂಸ್ಥೆಗಳಿಂದ ಔಷಧ ಸಾಮಗ್ರಿಗಳ ನೆರವನ್ನು ನೀಡಲಾಗಿದೆ. ರಾಷ್ಟ್ರದ ವಿವಿಧ ಮೂಲೆಗಳಿಂದ ವೈದ್ಯರ ತಂಡ ಭುಜ್ ಪ್ರದೇಶಕ್ಕೆ ಆಗಮಿಸಿದೆ.
ಅಹಮದಾಬಾದ್ಗೆ ವಿಶೇಷ ರೈಲು : ಭೂಕಂಪದ ರುದ್ರ ತಾಂಡವದಿಂದ ಸಂಪರ್ಕ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ತಮ್ಮ ಬಂಧುಗಳ ಸ್ಥಿತಿ ಏನಾಗಿದೆ ಎಂದು ಅರಿಯಲು ತವಕಿಸುತ್ತಿರುವವರ ನೆರವಿಗೆ ರೈಲ್ವೆ ಇಲಾಖೆ ಮುಂದಾಗಿದೆ. ಈ ಸಂಬಂಧ ಭಾನುವಾರ ಸಂಜೆ ನವದೆಹಲಿ, ಚೆನ್ನೈ, ಬೆಂಗಳೂರು ಹಾಗೂ ರಾಷ್ಟ್ರದ ಇನ್ನಿತರ ಕೆಲವು ಪ್ರಮುಖ ನಿಲ್ದಾಣಗಳಿಂದ ಅಹಮದಾಬಾದ್ಗೆ ವಿಶೇಷ ರೈಲು ಸಂಚಾರ ಏರ್ಪಡಿಸಲಾಗಿದೆ.
ಬಂಧುಗಳನ್ನು ಕಾಣಲು ಅಹಮದಾಬಾದ್ಗೆ ತೆರಳುವವರಿಗೆ ಉಚಿತ ಪ್ರಯಾಣದ ವ್ಯವಸ್ಥೆಯನ್ನೂ ಮಾಡಲಾಗಿದೆ. ಈ ಮಧ್ಯೆ ಹಲವು ಸ್ವಯಂ ಸೇವಾ ಸಂಘಟನೆಗಳು, ರಾಜ್ಯ ಸರಕಾರಗಳು ಸಂತ್ರಸ್ತರ ನೆರವಿಗೆ ಬಂದಿವೆ. ಆಹಾರ, ವಸ್ತ್ರ, ಕಂಬಳಿಗಳನ್ನು ಈ ರೈಲುಗಳ ಮೂಲಕ ಗುಜರಾತ್ಗೆ ಕಳುಹಿಸಿಕೊಡಲಾಗುತ್ತಿದೆ.
ವಾಯುಸೇನೆಯ ವಿಮಾನಗಳ ಮೂಲಕ ಗುಜರಾತ್ಗೆ ಆಹಾರ ಸಾಮಗ್ರಿಗಳನ್ನು ಕಳುಹಿಸಿಕೊಡಲಾಗಿದೆ. ಅಮೆರಿಕಾ, ಜರ್ಮನಿ, ಜಪಾನ್, ರಷ್ಯಾ ದೇಶಗಳಿಂದ ಕೂಡ ಸಂತ್ರಸ್ಥರ ನೆರವಿಗೆ ರಕ್ಷಣಾಪಡೆಗಳು ಧಾವಿಸಿವೆ.