ಬಾಯಿ ಬಿಟ್ಟ ನೆಲಕ್ಕೆ ಬಲಿಯಾದವರ ಸಂಖ್ಯೆ 20 ಸಾವಿರಕ್ಕೇರುವ ನಿರೀಕ್ಷೆ
ನವದೆಹಲಿ : ಗುಜರಾತ್ ಭೂಕಂಪದಲ್ಲಿ ಜೀವ ತೆತ್ತವರ ಸಂಖ್ಯೆ 20 ಸಾವಿರಕ್ಕೇರಬಹುದು ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಪರಿಹಾರ ಕಾಮಗಾರಿಗಳಲ್ಲಿ ನಿರತರಾಗಿರುವ ಸೇನಾ ಮೂಲಗಳು ಹೇಳಿವೆ. ಈ ನಡುವೆ ಗುಜರಾತ್ನ ಮುಖ್ಯ ಮಂತ್ರಿ ಕೇಶುಭಾಯ್ ಪಟೇಲ್ ಸಾವಿನ ಸಂಖ್ಯೆ ಒಂದು ಲಕ್ಷ ದಾಟಬಹುದು ಎಂಬ ಕಳವಳ ವ್ಯಕ್ತ ಪಡಿಸಿದ್ದಾರೆ.
ಭುಜ್ ಪಟ್ಟಣದಲ್ಲಿಯೇ ಒಂದುವರೆ ಲಕ್ಷ ನಿವಾಸಿಗಳಿದ್ದು, ಅವರಲ್ಲಿ ಅರ್ಧದಷ್ಟು ಮಂದಿ ಕಟ್ಟಡಗಳ ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ ಎಂದು ಅವರು ವಿವರಿಸಿದ್ದಾರೆ. ಭಾನುವಾರ ಮಧ್ಯಾಹ್ನದ ಅಧಿಕೃತ ವರದಿಗಳು ಇನ್ನೂ 50 ಸಾವಿರದಷ್ಟು ಮಂದಿ ಕುಸಿದ ಕಟ್ಟಡಗಳೆಡೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಹೇಳಿವೆ.
ಗಾಯಾಳುಗಳ ನೆರವಿಗೆ ಸಿದ್ಧವಾಗಿರುವ ಆಸ್ಪತ್ರೆಗಳು : ದೆಹಲಿಯ ಪ್ರಮುಖ ಆಸ್ಪತ್ರೆಗಳು ಭೂಕಂಪದಲ್ಲಿ ಗಾಯಗೊಂಡಿರುವವರ ಶುಶ್ರೂಷೆಗೆ ತಯಾರಾಗಿ ನಿಂತಿವೆ. ರಾಮಮನೋಹರ್ ಲೋಹಿಯಾ ಆಸ್ಪತ್ರೆ, ಎಐಐಎಂಎಸ್ ಆಸ್ಪತ್ರೆ, ವಿಶೇಷ ವ್ಯವಸ್ಥೆಗಳನ್ನು ಮಾಡಿವೆ. ಎರಡೂ ಆಸ್ಪತ್ರೆಗಳು ವೈದ್ಯಕೀಯ ತಂಡಗಳನ್ನು ಸಾಕಷ್ಟು ವೈದ್ಯಕೀಯ ಸಲಕರಣೆಗಳೊಂದಿಗೆ, ಭೂಕಂಪ ಪೀಡಿತ ಪ್ರದೇಶಕ್ಕೆ ಕಳುಹಿಸಿವೆ. ಇನ್ನಷ್ಟು ಚಿಕಿತ್ಸಾ ಸಲಕರಣೆಗಳು, ಔಷಧಿಗಳು ರವಾನೆಯಾಗಲಿವೆ.
ಆರ್ಎಂಎಲ್ ಆಸ್ಪತ್ರೆ ಹನ್ನೊಂದು ಮಂದಿಯ ವೈದ್ಯಕೀಯ ತಂಡವನ್ನು ಕಳುಹಿಸಿದ್ದು, ಪ್ರಥಮ ಚಿಕಿತ್ಸೆಗೆ ಅಗತ್ಯವಿರುವ ವಸ್ತುಗಳನ್ನೂ, ಶುಶ್ರೂಷೆಗೆ ಸಹಕರಿಸುವ ಸಹಾಯಕರ ಗುಂಪನ್ನೂ ಕಳುಹಿಸಿದೆ. ಸರಕಾರಿ ಆಸ್ಪತ್ರೆಗಳು ರೆಡ್ ಕ್ರಾಸ್ನೊಂದಿಗೆ ಭೂಕಂಪದಿಂದ ನೊಂದವರಿಗೆ ಸಹಕರಿಸಿದ್ಧವಾಗುತ್ತಿವೆ.
ಜಗತ್ತಿನ ಅತಿ ದೊಡ್ಡ ಹೆಲಿಕಾಪ್ಟರ್ ಪರಿಹಾರ ಕಾರ್ಯದಲ್ಲಿ : ಈ ನಡುವೆ ಭೂಕಂಪದಿಂದ ಅತಿಯಾಗಿ ಹಾನಿಗೊಂಡಿರುವ ಭುಜ್ ಪ್ರದೇಶದಲ್ಲಿ ಗಾಯಗೊಂಡವರ ನೆರವಿಗಾಗಿ ಭಾರತೀಯ ವಾಯು ಪಡೆ ಕೆಲಸ ಮಾಡುತ್ತಿದೆ. ಸುಮಾರು 180 ಮಂದಿಯನ್ನು ಜಮ್ನಾಗರ್ ಮತ್ತು ಪುಣೆಯ ಮಿಲಿಟರಿ ಆಸ್ಪತ್ರೆಗೆ ಸೇರಿಸಲಾಗಿದೆ.
ಜಗತ್ತಿನ ಅತಿ ದೊಡ್ಡ ಹೆಲಿಕಾಪ್ಟರ್ ಎಂಐ-26 ಭೂಕಂಪ ಪೀಡಿತ ಪ್ರದೇಶದಲ್ಲಿ ಕೆಲಸ ಮಾಡುತ್ತಿದೆ. ಚಂಡೀಗಢದಿಂದ 10 ಸಾವಿರ ಬ್ಲಾಂಕೆಟ್ಗಳು ಮತ್ತು ಅಮೃತಸರದಿಂದ 40 ಸಾವಿರ ಬ್ಲಾಂಕೆಟ್ಗಳನ್ನು ಹೊತ್ತು ಎರಡು ವಿಮಾನಗಳು ಭುಜ್ ಪ್ರದೇಶದಲ್ಲಿ ನೆರವಿಗೆ ಧಾವಿಸಿವೆ. ಈ ವರೆಗೆ ದೇಶ ಕಂಡಿರದ ಅತಿ ದೊಡ್ಡ ಪ್ರಮಾಣದ ಪರಿಹಾರ ಕಾರ್ಯದಲ್ಲಿ 42 ವಿಮಾನಗಳು ವ್ಯಸ್ತವಾಗಿವೆ. 40 ಟನ್ ಸಾಮರ್ಥ್ಯದ ಐಎಲ್-76, ಗಜರಾಜ, ಅತಿ ಭಾರದ ಇಂಜಿನ್ಗಳನ್ನು, ಡೀಸೆಲ್ ಜನರೇಟರ್ಗಳನ್ನು, ಬುಲ್ಡೋಜರ್ ಮತ್ತು ಮೊಬೈಲ್ ಕಿಚನ್ನ್ನು ಭಾಟಿಂಡಾ, ಪುಣೆ ಮತ್ತು ಜೋಧ್ಪುರದಿಂದ ಹೊತ್ತೊಯ್ದಿವೆ.
(ಯುಎನ್ಐ)