ಮುಂಬಯಿ ಮತ್ತು ಅಹ್ಮದಾಬಾದ್ನಲ್ಲಿ ಮತ್ತೆ ನಡುಗಿದ ಧರೆ
ಅಹ್ಮದಾಬಾದ್ : ಶುಕ್ರವಾರದ ಭೀಕರ ಭೂಕಂಪದಲ್ಲಿ ಸತ್ತವರ ಸಂಖ್ಯೆ 17 ಸಾವಿರವನ್ನೂ ದಾಟಿದೆ. ಸಾವಿರಾರು ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಕಚ್ ಪ್ರದೇಶದಲ್ಲಿ ಶೇ. 90ರಷ್ಟು ಮನೆಗಳು ನೆಲಕಚ್ಚಿವೆ. ಊರಿಗೆ ಊರೇ ಸ್ಮಶಾನವಾಗಿದೆ. ಅಳಲು ಕಣ್ಣೀರೇ ಬತ್ತಿ ಹೋಗಿದೆ. ಎಲ್ಲೆಡೆ ಹೆಣಗಳನ್ನು ರಾಶಿ ಹಾಕಿ ಸುಡಲಾಗುತ್ತಿದೆ. ಕಟ್ಟಿಗೆಗೂ ಬರ. ಈ ಮಧ್ಯೆ ಅಹ್ಮದಾಬಾದ್ ಮತ್ತು ಮುಂಬಯಿನಲ್ಲಿ ಭಾನುವಾರ ಬೆಳಿಗ್ಗೆ 6.30ಕ್ಕೆ ಮತ್ತೆ ಎರಡು ಸೆಕೆಂಡುಗಳ ಕಾಲ ಧರೆ ಕಂಪಿಸಿದ್ದು, ಸಾವಿರಾರು ಮಂದಿ ಜೀವ ಭಯದಿಂದ ತತ್ತರಿಸಿದ್ದಾರೆ.
ಭಾನುವಾರ ಬೆಳೆಗ್ಗಿನ ಭೂ ನಡುಕದಿಂದಾಗಿ ಯಾವುದೇ ಸಾವು ನೋವು ಘಟಿಸಿರುವ ವರದಿಯಾಗಿಲ್ಲ. ಆದರೆ ಶುಕ್ರವಾರದ ಭೂಕಂಪದಿಂದ ಭಯ ಭೀತರಾಗಿರುವ ಜನ, ಮನೆಗಳ ಒಳ ಹೋಗಲೂ ಹೆದರುತ್ತಿದ್ದಾರೆ. ಬಯಲಿನಲ್ಲಿ ಹೊಲ ಗದ್ದೆಗಳಲ್ಲಿ , ರಸ್ತೆಗಳಲ್ಲಿ ಜೀವನ ತಳ್ಳುತ್ತಿದ್ದಾರೆ.
ಅವಶೇಷಗಳಡಿಯಲ್ಲಿ ಸಿಕ್ಕಿಬಿದ್ದಿರುವ ಶವಗಳನ್ನು ಹೊರ ತೆಗೆಯಲು ಸೇನೆ ಸಿಬ್ಬಂದಿ, ಸಾರ್ವಜನಿಕರು ಹರ ಸಾಹಸ ಮಾಡುತ್ತಿದ್ದಾರೆ. ಸಾವಿನ ಸಂಖ್ಯೆ 25 ಸಾವಿರ ಮೀರುವ ನಿರೀಕ್ಷೆ ಇದೆ. ಇನ್ನೂ 10 ಸಾವಿರ ಮಂದಿ ಕಾಣೆಯಾಗಿದ್ದಾರೆ ಎನ್ನಲಾಗಿದೆ. ಗುಜರಾತಿನಲ್ಲಿ ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆ ಏರುತ್ತಿದೆ. ರಾಜ್ಯದಲ್ಲಿ 11 ಸಾವಿರ ಜನ ಸತ್ತಿರುವುದಾಗಿ ಶಂಕಿಸಲಾಗಿದೆ. 33 ಸಾವಿರ ಮಂದಿ ಗಾಯಗೊಂಡಿದ್ದಾರೆ. ಭುಜ್ ಜಿಲ್ಲೆಯಲ್ಲಿ 6 ಸಾವಿರ ಮಂದಿ ಸತ್ತಿರುವುದಾಗಿ ಶಂಕಿಸಲಾಗಿದ್ದರೂ, ಸಂಖ್ಯೆ 10 ಸಾವಿರ ದಾಟಬಹುದು. ಅಹ್ಮದಾಬಾದ್ನಲ್ಲಿ ಐನೂರಕ್ಕೂ ಹೆಚ್ಚು ಮಂದಿ ಪ್ರಾಣ ಬಿಟ್ಟಿದ್ದಾರೆ. ಈಗಾಗಲೇ 150 ಶವಗಳು ಪತ್ತೆಯಾಗಿವೆ.
(ಇನ್ಫೋ ವಾರ್ತೆ)