ಗುಜರಾತ್ ಭೂಕಂಪ : ರಾಜ್ಯದಿಂದ ಐದು ಕೋಟಿರೂಪಾಯಿ ನೆರವು
ಬೆಂಗಳೂರು : ಗುಜರಾತ್ನಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ನೆಲ ಕಚ್ಚಿರುವ ಕುಟುಂಬಗಳಿಗೆ ಪುನರ್ವಸತಿ ಮತ್ತು ಪರಿಹಾರ ಕಾರ್ಯಗಳಿಗೆ ರಾಜ್ಯದಿಂದ ಐದು ಕೋಟಿ ರೂಪಾಯಿ ನೆರವು ಘೋಷಿಸಲಾಗಿದೆ.
ಶನಿವಾರ ಸಂಜೆ ಕಾನೂನು ಮತ್ತು ಸಂಸದೀಯ ಸಚಿವ ಡಿ.ಬಿ. ಚಂದ್ರೇ ಗೌಡ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದಾರೆ. ಈ ಮೊತ್ತದಲ್ಲಿ ಈಗಾಗಲೇ ಎರಡು ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದೆ. ಬೆಳಗಾವಿ ಮತ್ತು ಚಿತ್ರದುರ್ಗದಿಂದ 45 ಲಕ್ಷ ರೂಪಾಯಿ ಮೌಲ್ಯದ ಎಂಟು ಸಾವಿರ ಕಂಬಳಿ ಮತ್ತು ಬೆಚ್ಚನೆಯ ವಸ್ತ್ರಗಳನ್ನು ರವಾನಿಸಲಾಗಿದೆ. ಸಿದ್ದ ಆಹಾರ, ಜೋಳ, ಅಕ್ಕಿ, ಬೇಳೆ, ಆಲೂಗಡ್ಡೆ ಮತ್ತು ಔಷಧಿಗಳನ್ನೂ ಕಳುಹಿಸಲು ನಿರ್ಧರಿಸಲಾಗಿದೆ.
ಬೆಂಗಳೂರಿನ ಸಂಜಯ ಗಾಂಧಿ ಅಪಘಾತ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸದಾಶಿವ ಮೂರ್ತಿ ಅವರ ನೇತೃತ್ವದಲ್ಲಿ 13 ಮಂದಿ ಮೂಳೆ ತಜ್ಞರ ಮತ್ತು ಅರಿವಳಿಕೆ ತಜ್ಞರ ತಂಡ ದುರಂತ ಸ್ಥಳಕ್ಕೆ ಧಾವಿಸಿದೆ. ಖಾಸಗಿ ವೈದ್ಯರ ತಂಡವೊಂದು ಇಷ್ಟರಲ್ಲೇ ಗುಜರಾತ್ಗೆ ಹೊರಡಲಿದೆ. ಪರಿಹಾರ ಕಾರ್ಯದ ಉಸ್ತುವಾರಿ ನೋಡಿಕೊಳ್ಳಲು ರಾಜ್ಯದಿಂದ ಸಚಿವರೊಬ್ಬರನ್ನು ಕಳುಹಿಸಲಾಗುವುದು.
(ಇನ್ಫೋ ವಾರ್ತೆ)