ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೃತಹಸ್ತದ ಸ್ಪರ್ಶಕ್ಕಾಗಿ ಕಾಯುತ್ತಿರುವ ಗ್ರಸ್ತರು

By Staff
|
Google Oneindia Kannada News

ಸುಖದಲ್ಲಿ ಭಾಗಿಯಾಗದಿದ್ದರೂ ಚಿಂತೆಯಿಲ್ಲ , ನೋವಿನಲ್ಲಿ ಜೊತೆಯಾಗುವುದು ಮಾನವೀಯತೆ ಅನ್ನುವ ಮಾತನ್ನು ದೊಡ್ಡವರು ಆಗಾಗ ಹೇಳುತ್ತಲೇ ಬಂದಿದ್ದಾರೆ. ನೋವ ಹಂಚಿಕೊಳ್ಳಲು ಇಬ್ಬರ ಜಾತಿ ಒಂದೇ ಆಗಿರಬೇಕಿಲ್ಲ . ಇಬ್ಬರ ನಡುವೆ ಯಾವುದೇ ಸಂಬಂಧವೂ ಇರಬೇಕಿಲ್ಲ . ಇಷ್ಟಕ್ಕೂ ಅವರು ಪರಿಚಿತರಲ್ಲದಿದ್ದರೂ ಚಿಂತೆಯಿಲ್ಲ . ಮಾನವೀಯತೆಯ ಅಮೃತಹಸ್ತ ಎಲ್ಲಕ್ಕಿಂತಲೂ ದೊಡ್ಡದು. ಅಂತಾ ಹಸ್ತ ಗಳಿಗಾಗಿ ಗುಜರಾತ್‌ ಕಾಯುತ್ತಿದೆ. ಹಸ್ತ ಸ್ಪರ್ಶದಿಂದ ಹೊಸತಷ್ಟು ಕನಸುಗಳನ್ನು ಚಿಗುರಿಸಿಕೊಳ್ಳಲು, ಮತ್ತೆ ಜೀವನ್ಮುಖಿಯಾಗಲು ಹಾತೊರೆಯುತ್ತಿದೆ. ಪ್ರಧಾನಿ ಹೇಳಿರುವುದೂ ಇದನ್ನೇ- ಇಡೀ ಮನುಜ ಜನಾಂಗವೇ ನೆರವಿಗಾಗಿ ಏಕ ಪುರುಷನಾಗಿ ಆವಿರ್ಭವಿಸಬೇಕೆಂದು.

ಜಗತ್ತನ್ನೇ ಗೆಲ್ಲುತ್ತೇನೆಂದು ಹೊರಟು ನಿರಾಶನಾದ ಅಲೆಗ್ಸಾಂಡರ್‌, ಸಾಯುವ ಮುನ್ನ ತನ್ನ ಮಂತ್ರಿಗಳಿಗೆ ಹೇಳಿದನಂತೆ- ಮರಣಾ ನಂತರ ಆಕಾಶವನ್ನು ದಿಟ್ಟಿಸುವಂತೆ ನನ್ನ ಕೈಯ್ಯನ್ನು ಬಿಟ್ಟು ಉಳಿದ ದೇಹವನ್ನು ಮಣ್ಣಿನಲ್ಲಿ ಹೂತು ಬಿಡಿ ಎಂದು. ಅಲೆಗ್ಸಾಂಡರ್‌ ಈ ಜಗತ್ತಿನಿಂದ ಬರಿಗೈಯ್ಯಲ್ಲೇ ನಿರ್ಗಮಿಸುತ್ತಿದ್ದಾನೆ ಅನ್ನುವುದಾ ಬರಿಗೈ ಸಂದೇಶ. ಅಂಥದ್ದೇ ದೃಶ್ಯ ಅಹಮದಾಬಾದಿನಲ್ಲಿ ಶುಕ್ರವಾರವಿತ್ತು . ಕುಸಿದುಬಿದ್ದ ಕಟ್ಟಡದ ಅವಶೇಷಗಳಲ್ಲಿ ಹತ್ತಾರು ಮೃತದೇಹ. ಒಂದು ಕೈ ಮಾತ್ರ ಅವಶೇಷಗಳಡಿಯಿಂದ ಹೊರ ಚಾಚಿತ್ತು . ಆ ಕೈ ಹೊರತು ಶರೀರದ ಮತ್ತಾವ ಭಾಗವೂ ಕಾಣುತ್ತಿಲ್ಲ . ಇಷ್ಟಕ್ಕೂ, ಮಾಸಿದ, ರಕ್ತದ ಕಲೆ ಕಮಟುಗಳಿಂದ ರೂಪು ಬದಲಿಸಿಕೊಂಡ ಆ ಕೈ ಯಾರದ್ದು . ಹೆಂಗಸಿನದಾ, ಗಂಡಸಿನದಾ, ಮಕ್ಕಳದಾ, ಯಾರದ್ದು . ಇಂಥಾ ಪ್ರಶ್ನೆಗಳಿಗೆಲ್ಲಾ ಉತ್ತರ ಹೇಳುವುದು ಸುಲಭವಲ್ಲ . ಆ ಕೈ ಸೂಚಿಸುತ್ತಿದ್ದ ಸಂಕೇತವನ್ನು ಅರ್ಥೈಸುವದೂ ಸಾಧ್ಯವಿಲ್ಲ . ಒಟ್ಟಾರೆ, ಆ ಕೈ ಬದುಕಿಗಾಗಿ ತಹತಹಿಸುತ್ತಿದ್ದುದು, ಆ ಪ್ರಯತ್ನದಲ್ಲೇ ನಿರ್ಜೀವಗೊಂಡದ್ದು ಸತ್ಯ. ಅದೇ ಜೀವದತ್ತಣ ಪಯಣ.

ಜಗತ್ತಿನ ನಾನಾ ಮೂಲೆಗಳಿಂದ, ಗುಜರಾತಿನ ಹೆಸರೇ ಕೇಳದ ಜನರಿಂದ ಗುಜರಾತಿಗೆ ನೆರವು ಹರಿದು ಬರುತ್ತಿದೆ. ಬಂದಷ್ಟೂ ಸಾಲದು ಅನ್ನುವ ಪರಿಸ್ಥಿತಿ ಅಲ್ಲಿನದು. ನಾಳಿದ್ದು ಜನವರಿ 30 ಕ್ಕೆ ಗಾಂಧಿಯವರ ಪುಣ್ಯತಿಥಿ. ಅವರ ತವರೀಗ ದೀಪಕ್ಕೆ ಸಿಕ್ಕಿ ರೆಕ್ಕೆ ಕಳೆದುಕೊಂಡು ಕ್ಷಣಕ್ಷಣಕ್ಕೆ ಪಾತಾಳದತ್ತ ಜಾರುತ್ತಿರುವ ಪತಂಗದಂತೆ ಬೇಯುತ್ತಿದೆ. ಗಾಂಧಿ ಅಂಜುತ್ತಿದ್ದುದು ರಕ್ತಪಾತಕ್ಕೆ. ಆದರೆ, ಪ್ರಕೃತಿಗೆ ಆ ಅಂಜಿಕೆಯಿಲ್ಲ . ಅದಕ್ಕಿರುವುದು ಹಸಿವೆ. ಬಡಬಾನಲದೆದುರು ಮಾನವ ಎಷ್ಟರವನು? ಈ ತಿಳಿವಿನೊಂದಿಗೇ ನಾವು ಬದುಕುವ ಛಲಕ್ಕೆ ಮತ್ತೆ ಪಕ್ಕಾಗಬೇಕು. ಕಳೆದುಹೋದ ಶಾಂತಿಯ ಗುಜರಾತಿನಲ್ಲಿ ಮತ್ತೆ ನೆಡಬೇಕು. ಅದು ಸರ್ವೋದಯ.

ರಾಜ್ಯಾದ್ಯಂತ ಶನಿವಾರ ಒಣಹವೆಯಿತ್ತು . ಎಲ್ಲೆಡೆಯೂ ಭೂಕಂಪದ್ದೇ ಸುದ್ದಿ . ಇದಕ್ಕೆ ತಕ್ಕನಾಗಿ ಬೆಂಗಳೂರಿನಲ್ಲೂ ಭೂಮಿ ನಡುಗಿತು, ಅದರ ಅನುಭವ ನಮಗಾಯಿತು ಎಂದವರೂ ಇದ್ದರು. ಆದರೆ, ಬೆಂಗಳೂರು ಶಾಂತವಾಗೇ ಇತ್ತು . ಭೂಮಿ ತುಸು ಅಲುಗಿದ್ದು ಬೀದರ್‌ ಹಾಗೂ ಹುಬ್ಬಳ್ಳಿ- ಧಾರವಾಡದಲ್ಲಿ ಮಾತ್ರ. ಅದು ತಿಂದ ಕೂಳು ಅಲುಗುವಂತಾ ಅಲುಗಾಟ ಮಾತ್ರ. ಅದೇನೇ ಇರಲಿ, ನಾಳೆಯೂ ಒಣಹವೆ ಮುಂದುವರಿಯುತ್ತೆ. ಬೆಂಗಳೂರಿನಲ್ಲಿ ಮೋಡಗಳಾಡುತ್ತವೆ. ಉಳಿದದ್ದು ಮಾಮೂಲು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X