ಕಂಪನದ ನುಂಗಿಗೆ ಸಾವಿರಗಳು ಲೆಕ್ಕಕ್ಕೇ ಇಲ್ಲ, ಬೂದಿಯಾದ ಭುಜ್
ಗುಜರಾತ್ : ಹೊಸ ಸಹಸ್ರಮಾನದ ಕೇಡು ಕೊಡುಗೆ ಎಗ್ಗಿಲ್ಲದೆ ಜನರನ್ನು ಹೊಟ್ಟೆಗೆ ಹಾಕಿಕೊಳ್ಳುತ್ತಿದ್ದು, 11 ಸಾವಿರ ಮಂದಿಯನ್ನು ಗುಜರಾತ್ ಒಂದರಲ್ಲೇ ಆಪೋಶನ ತೆಗೆದುಕೊಂಡಿದೆ. ಈ ಸಂಖ್ಯೆ ಕ್ಷಣಕ್ಷಣಕ್ಕೂ ಆತಂಕಕಾರಿ ಮಟ್ಟದಲ್ಲಿ ಹೆಚ್ಚುತ್ತಲೇ ಇದೆ.
ಭುಜ್ ಜಿಲ್ಲೆಯ ಕಛ್ನಲ್ಲಿ 6 ಸಾವಿರ ಜನ ಕಣ್ಣು ಮುಚ್ಚಿದ್ದಾರೆ. ಶನಿವಾರ ಮುಂಜಾನೆ ಅಹಮದಾಬಾದ್ನಲ್ಲೂ ಲಘು ಭೂಕಂಪ ಸಂಭವಿಸಿದ್ದು , 150ಕ್ಕೂ ಹೆಚ್ಚು ರಕ್ಷಣಾ ಅಧಿಕಾರಿಗಳೂ ಸೇರಿದಂತೆ ಸರಿ ಸುಮಾರು 500 ಮಂದಿಯನ್ನು ಬಲಿ ತೆಗೆದುಕೊಂಡಿದೆ. ಭುಜ್ ಜಿಲ್ಲೆಯ ಮಟ್ಟಿಗಂತೂ ಇದು ದೊಡ್ಡ ಹೊಡೆತ. ಜಿಲ್ಲೆಗೆ ಜಿಲ್ಲೆಯೇ ಭೂಕಂಪದ ತೋಳ ತೆಕ್ಕೆಗೆ ಸಂಪೂರ್ಣವಾಗಿ ಸಿಲುಕಿಹೋಗಿದೆ. ಐಲ್ಲೆಯ ಬಟಾವ್ ಮತ್ತು ರಾವರ್ ಗ್ರಾಮಗಳಲ್ಲಿ ಈಗ ಬದುಕಿಳಿದಿರುವ ಮಂದಿ ಪ್ರತಿಶತ 5ರಷ್ಟು ಮಾತ್ರ.
ಭೂಕಂಪದ ತೀವ್ರತೆ ಗಮನಿಸಿದಲ್ಲಿ ಹೊತ್ತಿರುವ ಬೆಂಕಿ ಪೂರ್ಣ ಪ್ರಮಾಣದಲ್ಲಿ ಆರಲು ತಿಂಗಳುಗಳೇ ಹಿಡಿದೀತು. ಶುಕ್ರವಾರ ಮುಂಜಾನೆಯ ಬೃಹತ್ ಭೂಕಂಪದ ಬೆನ್ನಿಗೇ ಆಗಾಗ ಸಂಭವಿಸಿರುವ ಲಘು ಭೂಕಂಪಗಳ ಸಂಖ್ಯೆ ಈವರೆಗೆ 188. 3 ರಿಂದ 5.2 ರಿಕ್ಟರ್ ಮಾಪಕದಷ್ಟು ತೀವ್ರತೆಯಿದ್ದ ಈ ಲಘು ಭೂಕಂಪಗಳೂ ಕಟ್ಟಡಗಳನ್ನು ಉರುಳಿಸಿ, ಜನರನ್ನು ಬಲಿ ತೆಗೆದುಕೊಂಡಿರುವೆ ಎಂದು ಭಾಭಾ ಅಟಾಮಿಕ್ ಸಂಶೋಧನೆ ಕೇಂದ್ರ ಸ್ಪಷ್ಟಪಡಿಸಿದೆ.
ಹ್ಯಾಂ ರೇಡಿಯೋ ಹಾಗೂ ಉಪಗ್ರಹಗಳ ನೆರವಿನಿಂದ ಪರಿಸ್ಥಿತಿಯ ಸೂಕ್ತ ಪರಿಶೀಲನೆಗಾಗಿ ಸರ್ಕಾರ ಶ್ರಮಿಸುತ್ತಿದೆ. ಕಛ್ನ ಮುಂದ್ರ ಬಂದರು ಭೂಕಂಪದ ತುಳಿತಕ್ಕೆ ಸಿಕ್ಕಿಲ್ಲ ಎಂದು ತಿಳಿದುಬಂದಿದೆ. ಅಲಹಾಬಾದಿನ ಇರ್ಸಾನಾಪುರದ ಸ್ವಾಮಿ ನಾರಾಯಣ ಶಾಲೆಯ ಕಟ್ಟಡ ಕುಸಿದ ಪರಿಣಾಮ ಹನ್ನೊಂದನೇ ಇಯತ್ತೆಯ 40 ಮಕ್ಕಳು ಜೀವ ತೆತ್ತಿದ್ದಾರೆ. ಕಟ್ಟಡದ ಅವಶೇಷಗಳ ನಡುವೆ ಎಲ್ಲೆಲ್ಲೋ ಸಿಲುಕಿಕೊಂಡಿರುವ ಮೃತ ದೇಹಗಳನ್ನು ತೆಗೆಯುವ ಪ್ರಯತ್ನ ಅವಿರತವಾಗಿ ನಡೆದಿದೆ.
ವಿಶ್ವ ಸಂಸ್ಥೆ ಭರವಸೆ : ಭೂಕಂಪದ ತುಳಿತಕ್ಕೆ ಸಿಕ್ಕಿರುವ ಜನರ ಪುನರ್ವಸತಿ ವಗೈರೆ ಕೆಲಸಗಳಿಗೆ ವಿಶ್ವ ಸಂಸ್ಥೆಯ ಸಂಪೂರ್ಣ ಸಹಕಾರ ದೊರೆಯಲಿದೆ ಎಂದು ವಿಶ್ವಸಂಸ್ಥೆ ಮಹಾ ಕಾರ್ಯದರ್ಶಿ ಕೋಫಿ ಅನ್ನಾನ್ ಹೇಳಿದ್ದು, ಸ್ಥಳ ಪರಿಶೀಲನೆಗೆ ಸಂಸ್ಥೆಯ 5 ಮಂದಿಯ ತಂಡ ಭಾನುವಾರ ಆಗಮಿಸುವ ನಿರೀಕ್ಷೆಯಿದೆ.
ನಾವೆಲ್ಲಾ ಜೊತೆಗಿದ್ದೇವೆ- ಪ್ರಧಾನಿ : ಗುಜರಾತ್ ಏಕಾಂಗಿ ಅಲ್ಲ. ಪ್ರತಿಯಾಬ್ಬ ಭಾರತೀಯನೂ ಅದರ ಜೊತೆಗಿದ್ದಾನೆ. ನಾವೆಲ್ಲಾ ಈ ಹೊತ್ತು ಇದನ್ನು ಸಾಬೀತು ಮಾಡಬೇಕು. ಜರ್ಮನಿ, ಇಂಗ್ಲೆಂಡ್, ಕೆನಡಾ, ಟರ್ಕಿ ಮೊದಲಾದ ದೇಶಗಳು ಸಂತ್ರಸ್ತರ ನೆರವಿಗೆ ಮುಂದೆ ಬಂದಿದ್ದಾರೆ. ನಾವೂ ನೊಂದ ಜನರ ಹೆಗಲ ಮೇಲಿನ ನೊಗ ಹೊರಲು ಸಿದ್ಧ ಎಂದು ಪ್ರಧಾನಿ ಎ.ಬಿ.ವಾಜಪೇಯಿ ಗುಜರಾತ್ ಜನರಿಗೆ ಧೈರ್ಯ ಹೇಳಿದ್ದಾರೆ.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...