ಅವಶೇಷಗಳ ಅಡಿಯಲ್ಲಿ ಅಳಿಯುತ್ತಿರುವ ಆಸೆ, ಸಾವುನೋವುಗಳ ಆಕ್ರಂದನ
ಅಹಮದಾಬಾದ್ : ಗುಜರಾತ್ನಲ್ಲಿ ಆರು ಸಾವಿರಕ್ಕೂ ಹೆಚ್ಚು ಮಂದಿ ಶುಕ್ರವಾರ ಸಂಭವಿಸಿದ ಭೂಕಂಪಕ್ಕೆ ಬಲಿಯಾಗಿದ್ದಾರೆ ಹಾಗೂ 3500 ಮಂದಿ ಗಾಯಗೊಂಡಿದ್ದಾರೆ ಎಂದು ಇತ್ತೀಚಿನ ವರದಿ ತಿಳಿಸಿದೆ. ಲೆಕ್ಕಕ್ಕೆ ಸಿಗದಷ್ಟು ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದು ಕ್ಷಣಗಣಿಸುತ್ತಾ ನರಳುತ್ತಿದ್ದಾರೆ.
ಶುಕ್ರವಾರ ಬೆಳಿಗ್ಗೆ 08.50 ರ ಸುಮಾರಿಗೆ ಸಂಭವಿಸಿದ ಭೂಕಂಪದಲ್ಲಿ ಕಛ್ ಜಿಲ್ಲೆಗೆ ಸೇರಿದ ಭುಜ್ ಪ್ರದೇಶವೊಂದರಲ್ಲೇ ಸುಮಾರು 3000 ಮಂದಿ ಸತ್ತಿದ್ದಾರೆ ಹಾಗೂ ಅಹಮದಾಬಾದಿನಲ್ಲಿ ಕನಿಷ್ಠ 600 ಮಂದಿ ಜೀವ ಕಳೆದುಕೊಂಡಿದ್ದಾರೆ. ಭುಜ್ನಲ್ಲಿ ಜೀವ ಕಳಕೊಂಡವರ ಯಾದಿಯಲ್ಲಿ ವಾಯುಪಡೆಗೆ ಸೇರಿದ 150 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯೂ ಸೇರಿದ್ದಾರೆ.
ಅಹಮದಾಬಾದಿನ ಇರ್ಸಾನ್ಪುರ್ ಪ್ರದೇಶದ ಸ್ವಾಮಿ ನಾರಾಯಣ್ ಶಾಲಾ ಕಟ್ಟಡ ಕುಸಿದು, 30 ಶಾಲಾ ವಿದ್ಯಾರ್ಥಿಗಳು ಸತ್ತಿದ್ದಾರೆ. ಶುಕ್ರವಾರ ರಾತ್ರಿಯಿಡೀ ಶಾಲಾ ಕಟ್ಟಡದ ಅವಶೇಷದಿಂದ ಮಕ್ಕಳ ದೇಹಗಳನ್ನು ಹೊರ ತೆಗೆಯುವ ಕಾರ್ಯ ನಡೆದಿದ್ದು , ಕೊರೆಯುವ ಚಳಿಯಲ್ಲಿಯೇ ಪೋಷಕರು ಕಟ್ಟಡದ ಅವಶೇಷಗಳೆದುರು ಕೂತು ರೋಧಿಸುತ್ತಿದ್ದರು. ನಗರದ ವಿವಿಧ ಭಾಗಗಳಲ್ಲಿ ಕುಸಿದು ಬಿದ್ದಿರುವ ಕಟ್ಟಡಗಳ ಅವಶೇಷಗಳಿಂದ ಮೃತ ದೇಹಗಳನ್ನು ಹೊರ ತೆಗೆಯುವ ಕಾರ್ಯ ಇನ್ನೂ ನಡೆಯುತ್ತಿದ್ದು ಸತ್ತವರ ಸಂಖ್ಯೆ ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಂಪೂರ್ಣ ಅಸ್ತವ್ಯಸ್ತಗೊಂಡಿರುವ ಸಂಪರ್ಕ ವ್ಯವಸ್ಥೆಯನ್ನು ಪುನರ್ ಜಾಗೃತಗೊಳಿಸುವ ಕೆಲಸ ಸಮರೋಪಾದಿಯಲ್ಲಿ ನಡೆಯುತ್ತಿದ್ದು , ಈಗಾಗಲೇ ಸ್ವಲ್ಪ ಮಟ್ಟಿಗಿನ ಪ್ರಗತಿಯೂ ದೊರಕಿದೆ ಎಂದು ಅಹಮದಾಬಾದಿನ ವರದಿಗಳು ತಿಳಿಸಿವೆ.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...