ಕೂಥಡಿಮಲೈನಲ್ಲಿ ಎಸ್ಟಿಎಫ್ ಪೊಲೀಸರಿಗೆ ಸಿಕ್ಕಿಬಿದ್ದ ಕೇರಳ ವೀರಪ್ಪನ್
ಕೊಯಮತ್ತೂರು : ಇದೋ ಇನ್ನೇನು ಸಿಕ್ಕ ಅಂದುಕೊಳ್ಳುವಾಗಲೇ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಾ ನರಹಂತಕ ವೀರಪ್ಪನ್ ಕಾಡಗರ್ಭದಲ್ಲಿ ಕಣ್ಣಾಮುಚ್ಚಾಲೆಯಾಡುತ್ತಿರುವ ಹೊತ್ತಿನಲ್ಲೇ ಕೇರಳ ವಿಶೇಷ ಕಾರ್ಯಪಡೆಯ ಪೊಲೀಸರು ಕೇರಳ ವೀರಪ್ಪನ್ ಎನ್ನುವ ಕುಖ್ಯಾತಿಯ ಚಕ್ರಪಾಣಿ ಹಾಗೂ ಅವನ ಇಬ್ಬರು ಸಹಚರರನ್ನು ಬಂಧಿಸಿದೆ.
ನರಹಂತಕ ವೀರಪ್ಪನ್ಗಾಗಿ ತೀವ್ರ ಹುಡುಕಾಟದಲ್ಲಿ ತೊಡಗಿದ್ದ ಶೈಲೇಂದ್ರಬಾಬು ಅವರ ನೇತೃತ್ವದ ಎಸ್ಟಿಎಫ್ ಬಲೆಗೆ ಬಿದ್ದದ್ದು ಈ ಕೇರಳ ವೀರಪ್ಪನ್. ಕೂಥಡಿಮಲೈ ಎನ್ನುವಲ್ಲಿ ಈತನನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು, ಬಂಧಿತರಿಂದ ದೇಶಿ ನಿರ್ಮಿತ ರೈಫಲ್ ಸೇರಿದಂತೆ ವಿವಿಧ ಮಾರಕ ಆಯುಧಗಳು, ಸರ್ಚ್ಲೈಟ್ ಹಾಗೂ ಕಾಡುಕೋತಿಯ ಚರ್ಮವನ್ನು ವಶಪಡಿಸಿಕೊಂಡಿದೆ.
ಹುಲಿ ಶಿಕಾರಿಗೆ ಹೊರಟ ಎಸ್ಟಿಎಫ್ಗೆ ಇಲಿ ಸಿಕ್ಕಿ ಬಿದ್ದಿದೆ. ಆದರೆ, ಸಿಕ್ಕಿ ಬಿದ್ದಿರುವ ಕೇರಳ ವೀರಪ್ಪನ್ ಕೂಡ ನರಹಂತಕ ವೀರಪ್ಪನ್ನಂತೆ ಕಾಡು ಹಾಗೂ ಕಾಡುಪ್ರಾಣಿಗಳ ನಾಶದ ಚಟುವಟಿಕೆಗಳಲ್ಲಿ ತೊಡಗಿದ್ದ . ಈತನ ಬಂಧನ ಎಸ್ಟಿಎಫ್ ಪಡೆಗೆ ತುಸು ಚೈತನ್ಯ ತಂದುಕೊಟ್ಟಿರಲೇಬೇಕು. ಅಂತೆಯೇ ಇಂದು ಕೇರಳ ವೀರಪ್ಪನ್ ಸಿಕ್ಕ, ನಾಳೆ ನಿಜವಾದ ವೀರಪ್ಪನೇ ಸಿಗಬಹುದೆನ್ನುವ ಭರವಸೆಯನ್ನೂ.
(ಪಿಟಿಐ)