ರಾಜ್ಯಪಾಲಮ್ಮ ಕೊನೆಗೂ ಪೂರಾ ಕನ್ನಡದಾಗೆ ಮಾತಾಡಿದರು...
(ಇನ್ಫೋ ವಿಶೇಷ ವಾರ್ತೆ)
ಬೆಂಗಳೂರು : ಶುಕ್ರವಾರ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ನೆರೆದಿದ್ದ ಎಲ್ಲರಲ್ಲಿ ವಿದ್ಯುತ್ ಸಂಚಲನ. ಮಾಮೂಲಿನಂತೆ ಬಂದು ಹೋಗುವ ಗಣರಾಜ್ಯೋತ್ಸವದ ಧ್ವಜಾರೋಹಣ, ಪೆರೇಡು, ಭಾಷಣಗಳಷ್ಟೇ ಅಲ್ಲಿರಲಿಲ್ಲ. ಹಾಗಂತ ಮಕ್ಕಳ ಯಾವುದೋ ಅನನ್ಯ ಪ್ರದರ್ಶನ ಇಂಥ ಮೋಡಿ ಮಾಡಲಿಲ್ಲ. ಮೋಡಿ ಮಾಡಿದ್ದು ರಾಜ್ಯಪಾಲರಾದ ವಿ.ಎಸ್.ರಮಾದೇವಿ. ಅದೂ ಪ್ರಥಮ ಬಾರಿಗೆ ಕನ್ನಡದಲ್ಲಿ ಮಾತನಾಡಿ !
ಸುದ್ದಿದೇವಿ : ರಮಾದೇವಿ ರಾಜ್ಯಪಾಲರಾದ ತಕ್ಷಣ ಮಹಿಳೆ ಎಂಬ ಕಾರಣಕ್ಕೆ ಸುದ್ದಿ ಮಾಡಿದರು. ಆಮೇಲೆ ದಿನಕ್ಕೆ ಕನಿಷ್ಠ್ಠ ಒಂದಾದರೂ ಕಾರ್ಯಕ್ರಮ; ಅದು ಯಾವುದಾದರೂ ಕಟ್ಟಡದ ಉದ್ಘಾಟನೆಯಾಗಿರಬಹುದು ಅಥವಾ ಯಾವುದೋ ಮಹಿಳಾ ವೇದಿಕೆಯ ವಿಚಾರ ಸಂಕಿರಣವಾಗಿಬಹುದು. ಹೋದಲ್ಲೆಲ್ಲಾ ಪುನರುಚ್ಚಾರಗಳ ಸುರಿಮಳೆ ಅಂತ ಜನ ಮಾತಾಡಿಕೊಳ್ಳತೊಡಗಿದರು. 2001ರ ಜನವರಿಯಿಂದ ನಾನು ಕರೆಯುವ ಫಂಕ್ಷನ್ಗಳಿಗೆಲ್ಲಾ ಹೋಗೋದಿಲ್ಲ ಅಂತ ಕಳೆದ ವರ್ಷಾಂತ್ಯದಲ್ಲಿ ಹೇಳಿ ಮತ್ತೆ ಅವರೇ ಸುದ್ದಿ ಮಾಡಿದರು. ಆದರೆ ಅದನ್ನು ಎಳ್ಳಷ್ಟೂ ಪಾಲಿಸದೆ ಇವತ್ತೂ ಸುದ್ದಿಯಲ್ಲಿರುವವರು ರಮಾದೇವಿ.
ಮಾಹಿತಿ ತಂತ್ರಜ್ಞಾನ ಹಳ್ಳಿ ಮಕ್ಕಳಿಗೂ ಮುಟ್ಟಬೇಕು. ಭಾವೈಕ್ಯತೆ ಅಂದರೇನು ಅಂತ ವಿಶ್ವಕ್ಕೆ ಸಾರಿದವರು ನಾವು. ಕಬ್ಬು ಬೆಳೆದು, ಸಕ್ಕರೆ ತಯಾರಿಸುವಲ್ಲಿ, ಹತ್ತಿ ಬೆಳೆ ತೆಗೆಯುವಲ್ಲಿ ನಾವು ಸಂಪೂರ್ಣ ಸ್ವಾವಲಂಬಿಗಳಾಗಿದ್ದೇವೆ. ಆದರೆ ಉತ್ಪನ್ನಗಳ ದಾಸ್ತಾನಿಗೆ ಸಾಕಷ್ಟು ಗೋದಾಮುಗಳಿಲ್ಲ. ಕರ್ನಾಟಕ ಒಂದು ಮಾದರಿ ರಾಜ್ಯ ಎಂದು ಹೆಮ್ಮೆಯಿಂದ ಹೇಳುತ್ತೇನೆ. ಇವತ್ತಿನ ಪರಿಸ್ಥಿತಿಯಲ್ಲಿ ಸಹೋದರ ಭಾವದ ಬಗೆಗೆ ವಿವೇಚಿಸಬೇಕಾದುದು ಅತ್ಯವಶ್ಯ... ಹೀಗೇ ಕನ್ನಡದಲ್ಲಿ ಹೆಣೆದ ಸಾಧನೆ- ಸಲಹೆಗಳನ್ನು ಸ್ಕಿೃಪ್ಟೊಂದನ್ನು ಕೈಲಿ ಹಿಡಿದು ಗಡಿಬಿಡಿಯಿಂದ ರಮಾದೇವಿ ಓದಿಬಿಟ್ಟರು. ಓದಿಬಿಟ್ಟರು ಅನ್ನೋದಕ್ಕಿಂತ ಅಲ್ಲಲ್ಲಿ ತಡಬಡಾಯಿಸುತ್ತಲೇ ಒಪ್ಪಿಸಿದರು ಅನ್ನೋದೇ ಸೂಕ್ತ.
ಕಾರ್ಯಕ್ರಮದಲ್ಲಿ ಬಣ್ಣಬಣ್ಣದ ವೇಷ ಭೂಷಣಾಧಾರಿ ಚಿಣ್ಣರಿಂದ ರಂಗುರಂಗು ಸಾಂಸ್ಕೃತಿಕ ಸೋಜಿಗಗಳು ಪ್ರದರ್ಶಿತವಾದವು. ತಾಲೀಮಿನಲ್ಲಿ ಶಿಸ್ತು ಎದ್ದು ಕಾಣುತ್ತಿತ್ತು. ರಾಜ್ಯಾದ್ಯಂತ ಗಣರಾಜ್ಯೋತ್ಸವವನ್ನು ಶಾಂತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಗಿದೆ.
ಖುರ್ಷಿದ್ ಆಲಂ ಖಾನ್ ರಾಜ್ಯಪಾಲರಾಗಿದ್ದಾಗ ಕನ್ನಡವನ್ನ ಕಲೀಲೇ ಇಲ್ಲ ಎಂಬೊಂದು ಕೊರತೆಯನ್ನು ಕನ್ನಡ ಪ್ರೇಮಿಗಳು ತೋಡಿಕೊಂಡಿದ್ದರು. ಅವರು ಮಾಡದ್ದನ್ನ ಕರ್ನಾಟಕದ ಪ್ರಥಮ ಮಹಿಳಾ ರಾಜ್ಯಪಾಲರು ಮಾಡಿ ತೋರಿದ್ದಾರೆ. ಈ ಭಾಷಣವೇ ಪೂರ್ಣ ಪ್ರಮಾಣದ ಕನ್ನಡ ಕಲಿಕೆಗೆ ನಾಂದಿಯಾಗಲಿ.
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...