ಭೂಕಂಪಕ್ಕೆ ತತ್ತರಿಸಿದ ಉತ್ತರ - ಪಶ್ಚಿಮ ಭಾರತ, ಸೂರತ್ನಲ್ಲಿ 20 ಸಾವು
ನವದೆಹಲಿ : ಶುಕ್ರವಾರ ಮುಂಜಾನೆ ದೆಹಲಿ, ಮುಂಬಯಿ, ಗೋವಾ ಸೇರಿದಂತೆ ವಿವಿಧೆಡೆಗಳಲ್ಲಿ ಭೂಕಂಪ ಸಂಭವಿಸಿದ್ದು , ಗುಜರಾತ್ನ ಸೂರತ್ನಲ್ಲಿ ಕನಿಷ್ಠ 20 ಮಂದಿ ಭೂಕಂಪಕ್ಕೆ ಬಲಿಯಾಗಿದ್ದಾರೆ ಹಾಗೂ ನೂರಾರು ಜನ ಗಾಯಗೊಂಡಿದ್ದಾರೆ.
ಉತ್ತರ ಹಾಗೂ ಪಶ್ಚಿಮ ಭಾರತಗಳ ಹಲವು ಪ್ರದೇಶಗಳು ಗಣರಾಜ್ಯೋತ್ಸವ ದಿನದ ಮುಂಜಾನೆ ಭೂಕಂಪದ ಭಯಾನಕ ಅನುಭವಕ್ಕೆ ತುತ್ತಾದವು. ರಿಕ್ಟರ್ ಮಾಪಕದಲ್ಲಿ 6.9 ರಷ್ಟಿದ್ದ ಭೂಕಂಪದ ತೀವ್ರತೆ ಆಪಾರ ಆಸ್ತಿ ಹಾಗೂ ಜೀವ ಹಾನಿ ಉಂಟುಮಾಡಿರುವ ನಿರೀಕ್ಷೆಯಿದೆ. ಆದರೆ, ನಷ್ಟದ ಅಂದಾಜು ಈವರೆಗೂ ಸ್ಪಷ್ಟವಾಗಿಲ್ಲ .
ಅಪಘಾತ ಸಂಭವಿಸಿದ ಪ್ರದೇಶಗಳಲ್ಲಿ ಮನೆಗಳನ್ನು ತೊರೆದು ಜನ ಬೀದಿಗೆ ಓಡಿ ಬಂದರು. ಮುಂಬಯಿಯಲ್ಲಿ 30 ಸೆಕೆಂಡ್ಗಳ ಕಾಲ ಭೂಮಿ ನಡುಗಿದರೆ, ದೆಹಲಿಯಲ್ಲಿ 60 ಸೆಕೆಂಡ್ಗಳ ಕಾಲ ಭೂ ನಡುಕವನ್ನು ಜನತೆ ಅನುಭವಿಸಿದ್ದಾರೆ.
ಗೋವಾ ವರದಿ : ಬೆಳಿಗ್ಗೆ 08.46 ರ ಸುಮಾರಿನಲ್ಲಿ ರಾಜಧಾನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಭೂಕಂಪದ ತೀವ್ರತೆಯನ್ನು ಅನುಭವಿಸಿವೆ (6.9 ರ ತೀವ್ರತೆ). ಯಾವುದೇ ಆಸ್ತಿ - ಜೀವ ಹಾನಿಯ ವರದಿಗಳು ಈವರೆಗೆ ಲಭ್ಯವಾಗಿಲ್ಲ .
ಪಾಕಿಸ್ತಾನದಲ್ಲಿ ಇಬ್ಬರ ಸಾವು : ನೆರೆಯ ಪಾಕಿಸ್ತಾನದಲ್ಲೂ ಭೂಕಂಪ ಸಂಭವಿಸಿದ್ದು, ದಕ್ಷಿಣ ಸಿಂಧ್ ಪ್ರಾಂತ್ಯದ ನಾಲ್ಕು ಮಹಡಿಗಳ ಕಟ್ಟಡವೊಂದು ಕುಸಿದು ಬಿದ್ದಿದೆ. ಈ ಕುಸಿತದಲ್ಲಿ 15 ದಿನದ ಹಸುಗೂಸು ಹಾಗೂ 8 ವರ್ಷಗಳ ಬಾಲಕಿ ಸತ್ತಿದ್ದಾರೆ ಎಂದು ಆ್ಯಂಬುಲೆನ್ಸ್ ನೌಕರರು ತಿಳಿಸಿದ್ದಾರೆ. ಇತರ ನಾಲ್ವರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಿಕ್ಟರ್ ಮಾಪಕದಲ್ಲಿ 6.2 ರಷ್ಟಿದ್ದ ಭೂಕಂಪದ ತೀವ್ರತೆ 50 ಸೆಕೆಂಡ್ಗಳ ಕಾಲ ಬಾಧಿಸಿತು ಎಂದು ಸ್ಥಳೀಯ ವರದಿಗಳು ತಿಳಿಸಿವೆ.
ಓಹಿಯೋದಲ್ಲೂ ಭೂಕಂಪ : ಗುರುವಾರ ಇಳಿಸಂಜೆಯ ಹೊತ್ತಿನಲ್ಲಿ ಲಘು ಭೂಕಂಪದ (4.2 ರ ತೀವ್ರತೆ) ಅನುಭವವಾಯಿತು ಎಂದು ಟೊರಾಂಟೊ ವರದಿಗಳನ್ನುಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
(ಯುಎನ್ಐ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...