ಆರ್ಎಸ್ಎಸ್ನಿಂದ ಸ್ವದೇಶಿ ಅರ್ಥ ವ್ಯವಸ್ಥೆಯ ನೀಲನಕ್ಷೆ - ಸುದರ್ಶನ್
ಉಡುಪಿ : ಇನ್ನೊಂದು ವರ್ಷದೊಳಗೆ ಭಾರತೀಯ ಪರಿಸ್ಥಿತಿಗೆ ಸರಿ ಹೊಂದುವ ಸ್ವದೇಶಿ ಅರ್ಥ ವ್ಯವಸ್ಥೆಯಾಂದರ ನೀಲನಕ್ಷೆಯನ್ನು ಆರ್ಎಸ್ಎಸ್ ತಯಾರಿಸಲಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘ ಚಾಲಕ ಕು.ಸೀ. ಸುದರ್ಶನ್ ಹೇಳಿದ್ದಾರೆ.
ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ಬುಧವಾರ ಇಳಿಸಂಜೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಪಶ್ಚಿಮ ದೇಶಗಳ ಆರ್ಥಿಕ ಧೋರಣೆಯನ್ನು ಕಟುವಾಗಿ ಟೀಕಿಸಿದ ಸರಸಂಘ ಚಾಲಕರು- ಉಳಿವಿಗಾಗಿ ಹೋರಾಟ, ಬಲಿಷ್ಠರ ಉಳಿವು, ಪ್ರಕೃತಿಯ ಬಗ್ಗೆ ನಿರ್ಲಕ್ಷ್ಯ, ಉದಾರೀಕರಣ, ಜಾಗತೀಕರಣ ಮತ್ತು ಜಾಗತೀಕರಣ ನಮ್ಮ ಸಂಸ್ಕೃತಿ ಮತ್ತು ದೇಶೀಯ ಮಾರುಕಟ್ಟೆಯನ್ನು ಹಾಳು ಮಾಡಿದೆ ಎಂದರು .
ಭಾರತೀಯತೆ ಮೈಗೂಡಿಸಿಕೊಳ್ಳಿ : ದೇಶದಲ್ಲೀಗ 10 ಕೋಟಿ ಮಂದಿ ನಿರುದ್ಯೋಗಿಗಳಿದ್ದು, ವಿದೇಶೀ ಶಕ್ತಿಗಳು ಅವರನ್ನೆಲ್ಲಾ ಐಎಸ್ಐ ಭಯೋತ್ಪಾದಕರನ್ನಾಗಿ ಇಲ್ಲವೇ, ಮಾದಕ ದ್ರವ್ಯಗಳ ಕಳ್ಳ ಸಾಗಾಣಿಕೆದಾರರನ್ನಾಗಿ ಮಾಡುತ್ತಿವೆ ಎಂದು ಅವರು ಆಪಾದಿಸಿದರು. ಭಾರತದಲ್ಲಿರುವ ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರು ಇಲ್ಲಿಯ ಸಂಸ್ಕೃತಿಯ ಬೇರುಗಳನ್ನು ಅರಿತುಕೊಂಡು ಭಾರತೀಯತೆಯನ್ನು ಮೈಗೂಡಿಸಿಕೊಳ್ಳಬೇಕು. ಭಾರತೀಯ ಕ್ರಿಶ್ಚಿಯನ್ನರು ವ್ಯಾಟಿಕನ್ ಕಡೆಗೆ ಮುಖ ಮಾಡಿರುವುದನ್ನು ಬಿಡಬೇಕು. ಅಲ್ಲಿಯ ಸಂಬಂಧ ಕಳಚಿಕೊಂಡು ಭಾರತೀಯ ರಾಷ್ಟ್ರೀಯ ಚರ್ಚ್ಗಳನ್ನು ಸ್ಥಾಪಿಸಬೇಕು ಎಂದೂ ಸಲಹೆ ಮಾಡಿದರು
ಬೌದ್ಧಿಕ ವರ್ಗಕ್ಕೆ ಮುನ್ನ ಮೂರು ಕಡೆಗಳಿಂದ ಉಡುಪಿಯ ಪ್ರಮುಖ ಮಾರ್ಗಗಳಲ್ಲಿ ಗಣವೇಷ ಧರಿಸಿದ ಸ್ವಯಂ ಸೇವಕರ ಪಥ ಸಂಚಲನಗಳು ಘೋಷ ನಾದದೊಂದಿಗೆ ನಡೆದವು.
(ಮಂಗಳೂರು ಪ್ರತಿನಿಧಿಯಿಂದ)