ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೆಳೆಯರ ಬಳಗದ ಜೊತೆ ಸಿಎಂ ಕೃಷ್ಣ ಒಂದು ತಾಸು

By Staff
|
Google Oneindia Kannada News

ಬೆಂಗಳೂರು : ಚರ್ಚೆ, ಗೋಷ್ಠಿ, ಸಂಕಿರಣ, ಉದ್ಘಾಟನೆ, ಸ್ಥಳ ಪರಿಶೀಲನೆ, ವಿದೇಶೀ ಧುರೀಣರ ಕೈಕುಲುಕುವಿಕೆ ಇತ್ಯಾದಿ ರುಟಿನ್‌ನಿಂದ ಆಗಾಗ ನಮ್ಮ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಹೊರಬಂದು ಟೆನಿಸ್‌ ನೋಡೋದು, ಸಂಸಾರ ಸಮೇತ ಹೊಟೇಲಿಗೆ ಹೋಗೋದು ಮಾಡುತ್ತಾರೆ. ಅವರ ಖಾಸಗಿ ಕಾರ್ಯದರ್ಶಿ ಡೈರಿಯಲ್ಲಿ ಇಂಥ ಕಾರ್ಯಕ್ರಮಗಳು ನಮೂದಾಗಿರುವುದಿಲ್ಲ. ಕೃಷ್ಣರ ಇಂಥ ಒಂದು ಕಾರ್ಯಕ್ರಮ ಗುರುವಾರದ ಮುಂಜಾನೆ ನಮ್ಮ ಗಮನಕ್ಕೆ....

ನಗರದಲ್ಲಿ ರಾಜಕಾರಣಿಗಳ ಹೊಟೇಲ್‌ ಎಂದೇ ಗುರುತಿಸಿಕೊಂಡಿರುವ ಕೋಶೀಸ್‌ ರೆಸ್ಟೋರೆಂಟ್‌ನಲ್ಲಿ ಗುರುವಾರ ಮುಂಜಾನೆ ಕೃಷ್ಣ ಹಠಾತ್‌ ಪ್ರತ್ಯಕ್ಷರಾದರು. ಮನಸ್ಸಲ್ಲೇ ಏನೋ ಮೆಲುಕು ಹಾಕುವಂತಿತ್ತು ಅವರ ಭಾವ. ಅವರ ಹಿಂದೆ ಒಂದು ಹಿಡಿ ಗೆಳೆಯರ ದಂಡು. 49 ವರ್ಷಗಳಷ್ಟು ಹಳೆಯ ಕೋಶೀಸ್‌ಗೆ ರಾಜಕಾರಣಿಗಳ ಭೇಟಿ ಸಾಮಾನ್ಯವಾದ್ದರಿಂದ ಸದಾ ಬಂದೋಬಸ್ತ್‌ ಇದ್ದೇ ಇರುತ್ತದೆ ಅನ್ನಿ. ಆದರೆ ಕೃಷ್ಣ ಫ್ರೀ ಆಗಿದ್ದರು. ಅವರ ಸುತ್ತ ರಕ್ಷಕರ ಗಲಿಬಿಲಿ, ಟೆನ್ಷನ್‌ ಏನೂ ಇರಲಿಲ್ಲ.

ಹೊಟೇಲಿನ ಗೋಡೆ ಮೇಲೆ ನೇತು ಹಾಕಿರುವ ಹೋಟೇಲ್‌ ಮಾಲಿಕರ ಚಿತ್ರಗಳನ್ನು ದಿಟ್ಟಿಸಿ ನೋಡುತ್ತಾ ಕೃಷ್ಣ ಹೇಳಿದರು, ‘ಹತ್ತು ವರ್ಷಗಳಾಯಿತು, ನನ್ನ ಗೆಳೆಯರ ಜೊತೆ ಇಲ್ಲಿಗೆ ಬಂದು’. ಕೃಷ್ಣ ಸ್ಮೃತಿಪಟಲ ಆ ಸುಂದರ ಕ್ಷಣಗಳನ್ನು ಮತ್ತೆ ಮತ್ತೆ ಎತ್ತಿ ಕೊಡುತ್ತಿತ್ತು. ರಿಸರ್ವ್‌ ಆಗಿರದ ಒಂದು ಟೇಬಲ್‌ ಸುತ್ತ ಕೃಷ್ಣ ಅಂಡ್‌ ಫ್ರೆಂಡ್ಸ್‌ ಕುಂತರು.

ಅಷ್ಟೊಂದು ಮಾತು ಎಲ್ಲಿತ್ತು ! : ತಿಂಡಿ ತಿನ್ನುತ್ತಲೇ ಬಗೆಬಗೆ ವಿಷಯಗಳ ಬಗೆಗೆ ಹರಟೆ ಶುರುವಾಯಿತು. ನೀರಾವರಿಯಿಂದ ಹಿಡಿದು ರೇಸ್‌ ಕೋರ್ಸನ್ನು ಸ್ಥಳಾಂತರಿಸುವ ವಿಷಯದವರೆಗೆ ಮಾತು ಹರಿಯಿತು. ಆದರೆ ಆಡಿದ ಯಾವುದೇ ಮಾತುಗಳು ರಾಜಕೀಯವಾಗಿಯಾಗಲೀ, ಔಪಚಾರಿಕವಾಗಿಯಾಗಲೀ ಇರಲಿಲ್ಲ. ಗೆಳೆಯರೆಲ್ಲಾ ಸೇರಿ ಹೊಡೆದ ಆರೋಗ್ಯಕರ ಹರಟೆಯಂತಿತ್ತು. ಆ ಕಾರಣಕ್ಕಾಗೇ ಹೋಟೇಲಿನಲ್ಲಿ ತಿಂಡಿ ಮೆಲ್ಲುತ್ತಿದ್ದ ಕೆಲವರ ಕಣ್ಣಲ್ಲಿ ಆಶ್ಚರ್ಯ(ಸಾಮಾನ್ಯವಾಗಿ ಹೀಗಾಗಲ್ಲ, ಯಾಕೆಂದರೆ ಹೊಟೇಲಿಗೆ ರಾಜಕಾರಣಿಗಳು ಸಾಮಾನ್ಯ) .

ಒಂದು ತಾಸು ಕಳೆದಿರಬಹುದು. ಕೃಷ್ಣರ ಆಪ್ತ ಅಧಿಕಾರಿಯಾಬ್ಬರು ಡೈರಿ ಹಿಡಿದು ಬಂದೇಬಿಟ್ಟರು. ಮುಖ್ಯಮಂತ್ರಿ ಅಮೆರಿಕೆಯ ಕನ್ಸಲ್‌ ಜನರಲ್‌ ಜತೆಗಿನ ಭೇಟಿಗೆ ಹೊರಡಬೇಕಿತ್ತು . ಒಂದು ತೃಪ್ತ ನಗೆ ಸೂಸಿದ ಕೃಷ್ಣ ಹೊರಟರು. ಬಿಲ್‌ ಕ್ಲಿಂಟನ್‌ ಅವರನ್ನು ಅನುಸರಿಸದೆ, ಬಿಲ್‌ ಕಟ್ಟಿಯೇ ಹೊರ ನಡೆದರು !

ಇದಕ್ಕೂ ಮುಂಚೆ ಅಖಿಲ ಭಾರತ ಕಾಂಗ್ರೆಸ್‌ ಸಮಿತಿ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಆಜಾದ್‌ ಅವರೊಟ್ಟಿಗೆ ಅರಮನೆ ಆವರಣಕ್ಕೆ ಹೋಗಿ, ಫೆಬ್ರವರಿ ಎರಡನೇ ವಾರ ನಡೆಯಲಿರುವ ಎಐಸಿಸಿ ಸಮಾವೇಶದ ಸಿದ್ಧತೆಗಳನ್ನು ಪರಿಶೀಲಿಸಿದರು.

ಸಂಕ್ರಾಂತಿಯಂದು ಸಂಸಾರ ಸಮೇತ ಹೊಟೇಲೊಂದರಲ್ಲಿ ಹುಗ್ಗಿ ತಿಂದಿದ್ದ ಕೃಷ್ಣ ಗುರುವಾರ ಗೆಳೆಯರಿಗಾಗಿ ಮುಂಜಾನೆಯ ಒಂದು ತಾಸು ಮೀಸಲಿಟ್ಟರು. ಸದಾ ರಾಜಕಾರಣದ ಮುಗಿಯದ ಶೂಟಿಂಗ್‌ನಲ್ಲೇ ಕಳೆದುಹೋಗುವ ರಾಜಕಾರಣಿಗಳಿಗೆ ಇಂಥ ಆರೋಗ್ಯಕರ ಗೀಳುಗಳಿರಬೇಕು. ಏನಂತೀರಿ? ಅಂದಹಾಗೆ, ರಾಜಕಾರಣವನ್ನೇ ಪೂರ್ಣಾವಧಿ ಉದ್ಯೋಗವನ್ನಾಗಿಸಿಕೊಂಡಿರುವ ನಮ್ಮ ದೇವೇಗೌಡರು ಕೋಶೀಸ್‌ಗೆ ಹೋಗುವುದು ಯಾವಾಗ.

(ಯುಎನ್‌ಐ)

ವಾರ್ತಾ ಸಂಚಯ
ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X