ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತೆಂಡೂಲ್ಕರ್ ಗ್ರಾಮಸಿಂಹ
*ಅಶೋಕ್ ಟುತೇಜ
ದುಬೈ : ದಕ್ಷಿಣ ಆಫ್ರಿಕದ ಮಾಜಿ ಬ್ಯಾಟಿಂಗ್ ದೊರೆ ಬ್ಯಾರಿ ರಿಚರ್ಡ್ಸ್ ಕ್ರಿಕೆಟ್ಟು, ಅದರಲ್ಲಿನ ರಾಜಕೀಯ, ಮೋಸದಾಟ ಕುರಿತು ಹರಟೆ ಹೊಡೆದಿದ್ದಾರೆ. ಅದರ ಸಾರಾಂಶ ಇಲ್ಲಿದೆ...
- ತೆಂಡೂಲ್ಕರ್ ಒಳ್ಳೆ ಬ್ಯಾಟ್ಸ್ಮನ್ ಅನ್ನೋದೇನೋ ನಿಜ. ಆದರೆ ಅದು ತನ್ನ ದೇಶದಲ್ಲಿ ಮಾತ್ರ. ಹೊರನಾಡಲ್ಲಿ ಆತನಾಟ ಸಾಲದು. ದಕ್ಷಿಣ ಆಫ್ರಿಕ ಹಾಗೂ ಆಸ್ಟ್ರೇಲಿಯಾದ ಚೆಂಡು ಪುಟಿಯುವ ಪಿಚ್ಗಳಲ್ಲಿ ಈತ ಮೆರೆಯಬೇಕು. ಆಗ ಕ್ರಿಕೆಟ್ ಜಗದೇಕವೀರನಾಗುತ್ತಾನೆ. ನನ್ನ ಪ್ರಕಾರ ವಿಂಡೀಸ್ನ ವಿವ್ ರಿಚರ್ಡ್ಸ್ ಹಾಗೂ ದಕ್ಷಿಣ ಆಫ್ರಿಕದ ಗ್ರೆಹ್ಯಾಮ್ ಪೊಲಾಕ್ ವಿಶ್ವದ ಸಾರ್ವಕಾಲಿಕ ಬೆಸ್ಟ್ ಬ್ಯಾಟ್ಸ್ಮನ್ಗಳು.
- ಕಪಿಲ್ ನಂತರ ನೆಚ್ಚಿಕೊಳ್ಳುವಂಥ ವೇಗಿ ಭಾರತಕ್ಕೆ ಸಿಗಲಿಲ್ಲ. ಸ್ವಂತ ನೆಲದ ನಿಧಾನಗತಿಯ ಪಿಚ್ನಲ್ಲಿನ ತಾಲೀಮನ್ನೇ ನೆಚ್ಚಿಕೊಂಡು ಮುಂದೆ ಬರಲು ಯಾರಿಗೂ ಸಾಧ್ಯವಾಗಿಲ್ಲ.
- ಭಾರತದ ತಂಡದ ಆಯ್ಕೆಯಲ್ಲಿ ಸಿಕ್ಕಾಪಟ್ಟೆ ರಾಜಕೀಯ ಇದೆ. ಪ್ರತಿಭೆಯಷ್ಟೇ ಅಲ್ಲಿ ಮಾನದಂಡವಲ್ಲ. ಪಂಜಾಬಿನವನೋ, ಮುಂಬಯಿಯವನೋ ಅಥವಾ ದಕ್ಷಿಣ ಭಾರತದವನೋ ಎಂಬಿತ್ಯಾದಿ ಲೆಕ್ಕಾಚಾರಗಳೂ ಕೆಲಸ ಮಾಡುತ್ತಿವೆ.
- ಪಾಕಿಸ್ತಾನ ಉತ್ತಮ ಆಟಗಾರರನ್ನು ಪಡೆಯೋದರ ಬಗೆಗೆ ನನಗೆ ಆಶ್ಚರ್ಯವಾಗುತ್ತೆ. ಬಹುಶಃ ಕೊಳಗೇರಿಯಿಂದ ಉಪ್ಪರಿಗೆಗೇರಿ ತನ್ನದೇ ಆದ ಐಷಾರಾಮಿ ಪ್ರಪಂಚ ಕಂಡುಕೊಳ್ಳುವ ಛಲವೇ ಆಟವನ್ನು ಅವರು ಸೀರಿಯಸ್ಸಾಗಿ ತೆಗೆದುಕೊಳ್ಳಲು ಕಾರಣವಾಗಿದೆ.
- ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕ ಪ್ರಬಲವಾದ ತಂಡಗಳಾಗಲು ತಂಡಗಳ ದೂರದೃಷ್ಟಿ, ಹೊಸ ತಂತ್ರಗಳೇ ಕಾರಣ. ಪ್ರಸ್ತುತ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕ ತಂಡಕ್ಕಿಂತ ಒಂದಿಂಚು ಮುಂದೆ ಇದೆ. ಈ ಎರಡು ತಂಡಗಳ ಹಾಗೂ ಇತರೆ ದೇಶಗಳ ತಂಡಗಳ ನಡುವಿನ ಕಾರ್ಯ ವೈಖರಿ ಕಂದಕ ಹೆಚ್ಚಾಗುತ್ತಿದೆ. ಇದನ್ನು ಕಡಿಮೆ ಮಾಡುವುದರ ಬಗೆಗೆ ನಾನು ಆಲೋಚಿಸುತ್ತಿದ್ದೇನೆ.
- ಮ್ಯಾಚ್ಫಿಕ್ಸಿಂಗ್ ವಿಷಯಕ್ಕೆ ಬಂದರೆ, ಬಯಲಿಗೆ ಬಂದಿರುವ ಸತ್ಯ ಅಲ್ಪ ಪ್ರಮಾಣದ್ದಷ್ಟೇ. ಇದಿನ್ನೂ ಶುರು. ಇನ್ನೂ ಸಾಕಷ್ಟು ಸತ್ಯಗಳು ಹೊರಬೀಳಲಿವೆ. ಮೋಸದಾಟ ಆಡಿರುವ ಎಲ್ಲರೂ ಕ್ರೋನಿಯೆ ರೀತಿ ತಪ್ಪೊಪ್ಪಿಕೊಳ್ಳುವರೇ ? ತಪ್ಪೊಪ್ಪಿಕೊಂಡ ಮಾತ್ರಕ್ಕೇ ಕ್ರೋನಿಯೆ ಹೀರೋ ಅಲ್ಲ. ಆತನಿಗೆ ತಕ್ಕ ಶಾಸ್ತಿ ಆಗೇ ತೀರಬೇಕು. ಆದರೆ ಆತನ ಮೇಲೆ ಆಜೀವ ನಿಷೇಧ ಹೇರಿರುವುದನ್ನು ನಾನು ಪೂರ್ಣ ಪ್ರಮಾಣದಲ್ಲಿ ಒಪ್ಪೋದಿಲ್ಲ.
- ಸಿಕ್ಕಾಪಟ್ಟೆ ಕ್ರಿಕೆಟ್ ಆಡಿಸೋದು ತರವಲ್ಲ. ತಂಡದ 15- 16 ಆಟಗಾರರನ್ನು ವಾರ್ಷಿಕ ಒಪ್ಪಂದದ ಮೇಲೆ ಆಡಿಸಬೇಕು. ಈ ಅವಧಿಯಲ್ಲಿ ಒಪ್ಪಂದಕ್ಕೆ ಒಳಪಟ್ಟ ಆಟಗಾರರು ಆಡಲಿ ಬಿಡಲಿ, ಗೊತ್ತು ಪಡಿಸಿದ ಹಣ ಅವರಿಗೆ ಸಂದಾಯವಾಗಬೇಕು. ಹೀಗೆ ಮಾಡಿದಲ್ಲಿ ಹಣ ಮಾಡಲು ಆಟಗಾರರು ಅಡ್ಡ ದಾರಿ ಹಿಡಿಯೋ ಪ್ರಮೇಯ ಕಡಿಮೆಯಾಗುತ್ತದೆ.
- ಆಟಗಾರರು ದೈಹಿಕ ತೊಂದರೆಗೀಡಾದಲ್ಲಿ ಅವರ ಚಿಕಿತ್ಸೆಯಷ್ಟೇ ಅಲ್ಲದೆ ಆಡುವುದರಿಂದ ವಂಚಿತರಾಗುವ ಪಂದ್ಯಗಳ ಸಂಭಾವನೆಯನ್ನೂ ಕಟ್ಟಿ ಕೊಡಬೇಕು. ಗ್ಲೆನ್ ಮೆಕ್ಗ್ರಾತ್ ಹಾಗೂ ಡೊನಾಲ್ಡ್ ವಿಷಯದಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕ ಕ್ರಿಕೆಟ್ ಮಂಡಲಿಗಳು ಈ ರೀತಿ ಮಾಡಿವೆ. ಆದರೆ ಭಾರತದ ಜಾವಗಲ್ ಶ್ರೀನಾಥ್ ಭುಜದ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಾಗ, ಚಿಕಿತ್ಸೆಯ ಹಣವನ್ನು ಮಾತ್ರ ಬಿಸಿಸಿಐ ಭರಿಸಿತು. ಅವರು ಮಿಸ್ ಮಾಡಿಕೊಂಡ ಪಂದ್ಯಗಳ ನಷ್ಟ ಕಟ್ಟಿಕೊಡಲಿಲ್ಲ. ಆಟದಲ್ಲಿ ಪಾರದರ್ಶಕತೆ ಕಂಡುಕೊಳ್ಳಲು ಸ್ವಲ್ಪ ಹೆಚ್ಚು ಹಣ ವ್ಯಯ ಮಾಡಬೇಕಾಗಬಹುದು. ಆದರೆ ಆಟಗಾರರು ಪ್ರಾಮಾಣಿಕತೆ ಮಾರಿಕೊಳ್ಳುವ ಸಂದರ್ಭ ತಪ್ಪಿಸಬಹುದಲ್ಲವೆ ?
Comments
Story first published: Wednesday, January 24, 2001, 5:30 [IST]