ಅನಿವಾಸಿ ಭಾರತೀಯರೇ, ಕೃಷಿ ಕ್ಷೇತ್ರದಲ್ಲೂ ಲಾಭ ಗಳಿಸಲು ಸಾಧ್ಯವಿದೆ..
*ಲೋಲಾ ನಾಯರ್
ನವದೆಹಲಿ : ಐಟಿ, ಜೈವಿಕ ತಂತ್ರಜ್ಞಾನ ಮಾತ್ರವಲ್ಲ , ಕೃಷಿ ಕ್ಷೇತ್ರಗಳಲ್ಲೂ ಅನಿವಾಸಿ ಭಾರತೀಯರು ತಮ್ಮ ಬಂಡವಾಳ ತೊಡಗಿಸಬೇಕು. ಕೃಷ್ಯುತ್ಪನ್ನಗಳ ಮಾರುಕಟ್ಟೆ , ಆಹಾರ ಪರೀಕ್ಷೆ - ಸಂಸ್ಕರಣೆ, ಗುಣಮಟ್ಟ ನಿರ್ಣಯ ಮುಂತಾದ ಕೃಷಿ ಸಂಬಂಧಿ ಕ್ಷೇತ್ರಗಳಲ್ಲಿ ಬಂಡವಾಳ ಹೂಡುವ ಮೂಲಕ ಲಾಭಗಳಿಸಲು ಸಾಧ್ಯವಿದೆ ಎಂದು ಕೃಷಿಯ ಉನ್ನತ ಮಟ್ಟದ ಟಾಸ್ಕ್ಫೋರ್ಸ್ ಒಂದರ ಅಧ್ಯಕ್ಷರು ಅಭಿಪ್ರಾಯಪಟ್ಟಿದ್ದಾರೆ.
ಶರದ್ ಜೋಶಿ- ಮಹಾರಾಷ್ಟ್ರದ ಶೆಟ್ಕರಿ ಸಂಘಟನೆಯ ಸ್ಥಾಪಕ. ಅವರ ಪ್ರಕಾರ, ಅನಿವಾಸಿ ಭಾರತೀಯರು ಕೃಷಿ ಕ್ಷೇತ್ರವನ್ನೂ ಪ್ರಮುಖ ಬಂಡವಾಳ ಕ್ಷೇತ್ರವನ್ನಾಗಿ ಪರಿಗಣಿಸಬೇಕು. ಭಾರತದ ಕೃಷಿ ಕ್ಷೇತ್ರಕ್ಕಿರುವ ಅತ್ಯಂತ ದೊಡ್ಡ ತೊಡಕೆಂದರೆ ಮಾರುಕಟ್ಟೆಯದು. ಇಲ್ಲಿ ವ್ಯವಸ್ಥಿತವಾದ ಸೂಪರ್ ಮಾರ್ಕೆಟ್ ಹಾಗೂ ಟೆಸ್ಟಿಂಗ್ ಲ್ಯಾಬೊರೆಟರಿಗಳ ಕೊರತೆಯಿದೆ. ಈ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ ಅನಿವಾಸಿ ಭಾರತೀಯರು ಭಾರತದ ಮಾರುಕಟ್ಟೆಗೂ ಕಾಲಿಡಬೇಕು. ಅಂದಹಾಗೆ ಜೋಶಿ, ಅಖಿಲ ಭಾರತ ಕಿಸಾನ್ ಕೋ- ಆರ್ಡಿನೇಷನ್ ಕಮಿಟಿಯ ಮುಖ್ಯಸ್ಥರೂ, ವಿಶ್ವ ವ್ಯಾಪಾರ ಸಂಘ ಹಾಗೂ ಜಾಗತೀಕರಣದ ಜಾರಿಯಿಂದ ಭಾರತದ ರೈತ ಪಡೆಯುವುದೇನು ಅನ್ನುವುದರ ಅಧ್ಯಯನಕ್ಕೆ ಪ್ರಧಾನಿ ವಾಜಪೇಯಿ ನೇಮಿಸಿರುವ ಕಾರ್ಯಪಡೆಯ ಅಧ್ಯಕ್ಷರೂ ಹೌದು.
ಭಾರತಕ್ಕೆ ಬೇರು ಆರು ಸೂಪರ್ ಮಾರ್ಕೆಟ್ ಜಾಲ : ಪ್ರಸ್ತುತ ನಮ್ಮಲ್ಲಿರುವುದು ಕರ್ನಾಟಕದ ಹಾಪ್ಕಾಮ್ಸ್ , ಮಹಾರಾಷ್ಟ್ರದ ಶಿವಾರ್ ಹಾಗೂ ತಮಿಳುನಾಡಿನ ಸ್ಪೆನ್ಸರ್ಸ್ನಂಥಾ ಕೆಲವೇ ಉತ್ತಮ ಮಾರುಕಟ್ಟೆಗಳು. ಇಲ್ಲೂ ಕೂಡ ಎಲ್ಲಾ ಸಮರ್ಪಕ ಎಂದೇನಲ್ಲ . ಕಟಾವಿಗೆ ಮುನ್ನಿನ ಅತ್ಯುತ್ತಮ ಮಾರುಕಟ್ಟೆ ಜಾಲ ಇಲ್ಲೂ ಇಲ್ಲ ಎಂದು ಜೋಶಿ ಹೇಳುತ್ತಾರೆ.
ದೇಶಕ್ಕೆ ಕನಿಷ್ಠ ಆರು ಸೂಪರ್ ಮಾರ್ಕೆಟ್ಗಳ ಅಗತ್ಯವಿದೆ. ಆಶಾದಾಯಕ ವಿಷಯವೆಂದರೆ, ಮುಂದಿನ ಮೂರು ತಿಂಗಳೊಳಗೆ ಸೂಪರ್ ಮಾರ್ಕೆಟ್ ನೆಟ್ವರ್ಕ್ ಯೋಜನೆಯಾಂದು ಕೇಂದ್ರ ಭಾರತದಲ್ಲಿ ಕಾರ್ಯಾರಂಭ ಮಾಡುವುದು. ಸಹಕಾರಿ ಸಂಸ್ಥೆಗಳು ಹಾಗೂ ರೈತರು ಈ ಯೋಜನೆಯಡಿ ಒಟ್ಟುಗೂಡುತ್ತಾರೆ. ಬಹಳಷ್ಟು ರಾಷ್ಟ್ರಗಳು ಕನಿಷ್ಠ ಅರ್ಧ ಡಜನ್ಗಿಂತಲೂ ಹೆಚ್ಚು ಸೂಪರ್ ಮಾರ್ಕೆಟ್ ಜಾಲ ಹೊಂದಿರುವುದನ್ನು ಜೋಶಿ ಹೆಕ್ಕಿ ತೋರಿಸುತ್ತಾರೆ.
ಕೃಷಿ ಕ್ಷೇತ್ರದಲ್ಲಾದರೂ ಭಾರತ ವಿಶ್ವದ ಅಗ್ರಗಣ್ಯ ರಾಷ್ಟ್ರ ಎನಿಸದಿರುವುದಕ್ಕೆ ಯಾವುದೇ ಕಾರಣವಿಲ್ಲ . ಉತ್ಪಾದಕತೆ ಹಾಗೂ ಅತ್ಯುನ್ನತ ಕೃಷಿ ತಾಂತ್ರಿಕತೆಯಿಂದಾಗಿ ಈ ಸಾಧನೆ ಅಸಾಧ್ಯವೇನಲ್ಲ . ಆದರೆ ಜನ ಬದಲಾವಣೆಗೆ ಸಿದ್ಧವಾಗಿರಬೇಕು ಎನ್ನುವಾಗ ಜೋಶಿಯವರ ಮಾತುಗಳಲ್ಲಿ ದೊಡ್ಡ ಭರವಸೆಯಾಂದು ತುಳುಕುತ್ತದೆ.
(ಐಎಎಎನ್ಎಸ್)