ಭೀಮಾನದಿಗೆ ನೀರು ಬಿಡಲು ಮಹಾರಾಷ್ಟ್ರದ ತಾತ್ವಿಕ ಒಪ್ಪಿಗೆ
ಮುಂಬಯಿ : ಗುಲ್ಬರ್ಗಾ, ಬಿಜಾಪುರ ಜಿಲ್ಲೆಯ ಜನತೆ ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಉಜ್ಜಯನಿ ಜಲಾಶಯದಿಂದ ಭೀಮಾ ನದಿಗೆ ನೀರು ಬಿಡಲು ಮಹಾರಾಷ್ಟ್ರ ಸರಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಈ ಸಂಬಂಧ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ನೇತೃತ್ವದಲ್ಲಿ ಮುಂಬಯಿಗೆ ತೆರಳಿರುವ ನಿಯೋಗವು ಬುಧವಾರ ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್ರಾವ್ ದೇಶ್ಮುಖ್ ಅವರೊಂದಿಗೆ ನಡೆಸಿದ ಮಾತುಕತೆ ಫಲಪ್ರದವಾಗಿದೆ.
ಕಳೆದ ನವೆಂಬರ್ನಿಂದಲೇ ಭೀಮಾನದಿ ಒಣಗಿದ್ದು, ಬಿಜಾಪುರ ಜಿಲ್ಲೆಯ ಸಿಂಧಗಿ, ಇಂಡಿ ತಾಲೂಕುಗಳಲ್ಲಿ ಜನ ಹಾಗೂ ಜಾನುವಾರುಗಳು ನೀರಿಗಾಗಿ ಪಡುತ್ತಿರುವ ಪಾಡನ್ನು ವಿಲಾಸ್ರಾವ್ ದೇಶಮುಖ್ ಅವರ ಗಮನಕ್ಕೆ ತರಲಾಗಿದ್ದು, ಅವರು ಮಾನವೀಯತೆಯ ದೃಷ್ಟಿಯಿಂದ ಭೀಮಾನದಿಗೆ ಉಜ್ಜಯಿನಿ ಜಲಾಶಯದಿಂದ ನೀರು ಬಿಡಲು ತಾತ್ವಿಕವಾಗಿ ಸಮ್ಮತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂಜೆ ಕಾರ್ಯದರ್ಶಿಗಳ ಸಭೆ: ದೇಶ್ಮುಖ್ ಅವರಿಂದ ಭೀಮಾನದಿಗೆ ನೀರು ಬಿಡಲು ತಾತ್ವಿಕ ಒಪ್ಪಿಗೆ ದೊರಕಿದೆಯಾದರೂ, ಬುಧವಾರ ಸಂಜೆ ಎರಡೂ ರಾಜ್ಯಗಳ ನಿರಾವರಿ ಇಲಾಖೆ ಕಾರ್ಯದರ್ಶಿಗಳ ಸಭೆ ನಡೆಯಲಿದೆ. ಈ ಸಭೆಯ ನಂತರ ಯಾವಾಗ ಎಷ್ಟು ನೀರು ಬಿಡಬೇಕು ಎಂಬುದು ತೀರ್ಮಾನವಾಗಲಿದೆ ಎಂದೂ ಮೂಲಗಳು ತಿಳಿಸಿವೆ.
ಬಿಜಾಪುರ, ಗುಲ್ಬರ್ಗಾ ಜಿಲ್ಲೆಗಳ ಜನರು ಹಾಗೂ ಉದ್ದಿಮೆಗಳು ಭೀಮಾನದಿಯನ್ನೇ ಅವಲಂಬಿಸಿದ್ದು, ನದಿ ಒಣಗಿ ಹೋಗಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೂ ಈ ಎರಡು ಜಿಲ್ಲೆಗಳಲ್ಲಿ ಬರ ಬಂದಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ, ಲೋಕೋಪಯೋಗಿ ಸಚಿವ ಧರ್ಮಸಿಂಗ್, ಕಾಶಪ್ಪನವರ್, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್, ಶಾಸಕರುಗಳಾದ ಪಿ.ಜಿ.ಆರ್. ಸಿಂಧ್ಯಾ, ಡಾ. ಎಂ.ಆರ್. ತಂಗಾ ಮೊದಲಾದವರನ್ನೊಳಗೊಂಡ ನಿಯೋಗ ಮಂಗಳವಾರ ಮುಂಬೈಗೆ ತೆರಳಿತ್ತು.