ನಡುಗಿಸುತ್ತಿರುವ ಶಿಶಿರದ ಚಳಿ
ಬೆಂಗಳೂರು : ನಾಳೆ ಅಮಾವಾಸ್ಯೆ. ಪುಷ್ಯ ಮಾಸದ ಅಂತ್ಯ. ನಾಡಿದ್ದಿನಿಂದ ಮಾಘ ಮಾಸ. ಮಾಘ - ಫಾಲ್ಗುಣ ಹೇಳಿಕೇಳಿ ಶಿಶಿರ ಋತುವಿನ ಕಾಲ. ಅಂದರೆ ಚಳಿ ಏರಿಳಿಯುತ್ತದೆ. ಮಾಗಿಯ ಚಳಿಯ ಕೊರೆತದ ಅನುಭವವೂ ಆಗುತ್ತದೆ. ಹಣ್ಣೆಲೆಗಳೆಲ್ಲ ಉದುರುತ್ತವೆ. ಮೈಯೆಲ್ಲಾ ಒಡೆಯುತ್ತದೆ. ವ್ಯಾಸಲಿನ್ ಬಯಸುತ್ತದೆ. ಚೈತ್ರದ ಹೊಸ ಚಿಗುರು ಕಾಣಲು ಮನ ಹಾತೊರೆಯುತ್ತದೆ.
ಅಂದಹಾಗೆ ಕಳೆದ 24 ಗಂಟೆಗಳ ಅವಧಿಯಲ್ಲಿ ಒಣಹವೆಯ ಕಾರುಭಾರಿನ ನಡುವೆಯೂ ರಾಜ್ಯದ ಕೆಲವು ಪ್ರದೇಶಗಳಲ್ಲಿ ಕನಿಷ್ಠ ತಾಪಮಾನ ಇಳಿಮುಖವಾಗಿದೆ. ಉತ್ತರ ಒಳನಾಡಿನ ಹಲವೆಡೆ ಅದು ಸಾಮಾನ್ಯ ಮಟ್ಟಕ್ಕಿಂತಲೂ ಕಡಿಮೆ ಇತ್ತು. ಆದರೆ, ಕರಾವಳಿಯಲ್ಲಿ ಸಾಮಾನ್ಯ ಮಟ್ಟದಲ್ಲಿತ್ತು.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ 11.1 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದ್ದು, ಇದುವೆ ರಾಜ್ಯದ ಅತಿ ಕನಿಷ್ಠ ತಾಪಮಾನ. ಮುನ್ಸೂಚನೆಯಂತೆ ಗುರುವಾರ ಬೆಳಗಿನವರೆಗೂ ಬಹುತೇಕ ರಾಜ್ಯದಲ್ಲಿ ಒಣಹವೆಯೇ ಮುಂದುವರಿಯಲಿದೆ. ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದಿರುತ್ತದೆ. ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ಗೆ ತಲುಪಲಿದೆ ಎನ್ನುತ್ತದೆ ಹವಾಮಾನ ವೀಕ್ಷಣಾಲಯದ ವರದಿ.