ಹಚ್ಚುವ ಅಕ್ಷರ ದೀಪವ : ನವ ಸಾಕ್ಷರರಿಗೆ 1300 ಗ್ರಂಥಾಲಯ
ಗುಲ್ಬರ್ಗ : ನವ ಸಾಕ್ಷರರಿಗಾಗಿ 1,300ಗ್ರಂಥಾಲಯಗಳನ್ನು ಸ್ಥಾಪನೆ ಹಾಗೂ ವಿಶೇಷ ಕಾರ್ಯಕ್ರಮಗಳಿಗಾಗಿ ರಾಷ್ಟ್ರೀಯ ಸಾಕ್ಷರತಾ ಆಂದೋಲನ 2.37 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.
ಸಾಕ್ಷರತಾ ಕಿರಣ ಸಮಿತಿಯ ಅಧ್ಯಕ್ಷರಾಗಿರುವ ಗುಲ್ಬರ್ಗ ಜಿಲ್ಲಾಧಿಕಾರಿ ಲಕ್ಷೀನಾರಾಯಣ ಸೋಮವಾರ ಈ ವಿಷಯ ತಿಳಿಸಿದರು. ಇತ್ತೀಚೆಗೆ ಸಮಿತಿ ಸಭೆ ಸೇರಿದ ಸಂದರ್ಭದಲ್ಲಿ ಗ್ರಂಥಾಲಯ ಸ್ಥಾಪನೆಯ ನಿರ್ಧಾರ ಕೈಗೊಳ್ಳಲಾಯಿತು ಎಂದು ಅವರು ಹೇಳಿದರು.
ನವಸಾಕ್ಷರಿಗಾಗಿಯೇ ಆರಂಭವಾಗಲಿರುವ ಈ ಲೈಬ್ರರಿಗಳಲ್ಲಿ ಅಗತ್ಯ ಪುಸ್ತಕಗಳನ್ನು ಒದಗಿಸಲಾಗುವುದು. ನವಸಾಕ್ಷರರಿಗೆ ಓದಲು ಸುಲಭವಾಗುವ ಸಾಹಿತ್ಯ ರಚನೆಗಾಗಿ ಪ್ರಾದೇಶಿಕ ಬರಹಗಾರರನ್ನು ಒತ್ತಾಯಿಸಲಾಗುವುದು. ಅಂತಹ ಬರಹಗಾರರನ್ನು ಆರ್ಥಿಕವಾಗಿಯೂ ಪ್ರೋತ್ಸಾಹಿಸಲಾಗುವುದು ಎಂದು ಲಕ್ಷ್ಮೀನಾರಾಯಣ್ ಹೇಳಿದರು.
ರಾಷ್ಟ್ರೀಯ ಸಾಕ್ಷರತಾ ಆಂದೋಲನದ ಆದೇಶದ ಮೇರೆಗೆ ಸಭೆಯಲ್ಲಿ 29 ಮಂದಿಯ ಸಮಿತಿಯನ್ನು ರಚಿಸಲಾಗಿದೆ. ಗುಲ್ಬರ್ಗಾ ನಗರ, ವಿಭಾಗ ಮತ್ತು ತಾಲ್ಲೂಕಿನ ಪ್ರತಿನಿಧಿಗಳು ಈ ಸಮಿತಿಯಲ್ಲಿರುತ್ತಾರೆ. ಪ್ರಸ್ತುತ ಜಿಲ್ಲೆಯಲ್ಲಿ ಶೇ 52ರಷ್ಟು ಸಾಕ್ಷರತೆ ಇದೆ.
(ಇನ್ಫೋ ವಾರ್ತೆ)