ಚಳಿ ಯಾರ ಕನಸಿನ ಮನೆಯ ದರೋಡೆಗೆ ಕಾದಿದೆ ?
ನಿನ್ನೆ ರಾತ್ರಿಯ ಚಳಿ ಬೆಂಗಳೂರಿನ ಬೀದಿಯಲ್ಲಿಯೇ ಬದುಕಿಕೊಂಡಿದ್ದ ನಾಲ್ಕು ಮಂದಿಯ ಜೀವ ಕಿತ್ತು ಕೊಂಡಿದೆ. ಇದ್ದ ಬದ್ದ ಹಳೇ ಬಟ್ಟೆಗಳ ಚೂರು ಪಾರುಗಳನ್ನು ತೇಪೆ ಹಾಕಿ ಮಾಡಿದ, ಭರ್ತಿ ಆರು ಫೀಟೂ ಇಲ್ಲದ ರಗ್ಗಿನಾಚೆ ಬರುವುದು ಚಳಿಗೇನೂ ಕಷ್ಟವೇ ? ಫುಟ್ಪಾತಿನ ಹಾಸಿಗೆ, ಚರಂಡಿ ಬದಿಯ ಗಾಳಿ, ಎದೆ ಗೂಡಿನ್ನು ಮರಗಟ್ಟಿಸುವ ಚಳಿಗೆ ಜೀವದ ಹಂಗಿಲ್ಲ .
ಚಳಿ ಬೆಂಗಳೂರಿನಲ್ಲಿರುವ ಬಡ ಜೀವವನ್ನು ಸಮಾಧಿ ಮಾಡಿದೆ. 15 ಡಿಗ್ರಿಗಿಳಿದ ಚಳಿ ನಾಳೆ ಎತ್ತ ಸಾಗುತ್ತದೆ ಎಂದು ಸದ್ಯಕ್ಕೆ ತಿಳಿಯುತ್ತಿಲ್ಲ. ಯಾವ ಜೀವದ ಗುರಿಯಿಟ್ಟಿದೆಯೋ... ಯಾರ ಕನಸಿನ ಮನೆಯ ದರೋಡೆ ಮಾಡಲಿದೆಯೋ ಗೊತ್ತಾಗುತ್ತಿಲ್ಲ.
ಹುಬ್ಬಳ್ಳಿಯ ಸುತಗಟ್ಟಿಯ ನಿರುದ್ಯೋಗಕ್ಕೆ ಸವಾಲಾಗಿ ಆಲೂಗಡ್ಡೆ, ಮೆಕ್ಕೆ ಜೋಳ, ಹತ್ತಿ ಅಂತೆಲ್ಲಾ ಮನೆ ಹೊಲಗಳ ತುಂಬಾ ಓಡಾಡುತ್ತಾ, ಸಾಲ ಸೋಲ ಮಾಡಿ ಬೆಳೆ ತೆಗೆಯುತ್ತಿದ್ದವನ ಮುಖಕ್ಕೆ ರಾಚಿದ ಸೋಲು, ನಷ್ಟ ಬದುಕನ್ನು ಅನಾಮತ್ತು ಎತ್ತಿಕೊಂಡು ಹೋಯಿತು. ಆತ ಆತ್ಮ ಹತ್ಯೆ ಮಾಡಿಕೊಂಡ.
ಹೇಮಂತ ಮುಗಿಯುವ ಮುನ್ನ ಚಳಿಯ ದರಬಾರು ಮುಗಿಯುವ ಹಾಗೆ ಕಾಣುತ್ತಿಲ್ಲ. ಬೆಂಗಳೂರ ಆಕಾಶದಲ್ಲಿ ಚುಕ್ಕಿಗಳ ಮೇಲೇರಿ ಮೋಡಗಳು ಮೆರವಣಿಗೆ ಹೊರಟಿವೆ. ಬೆಳದಿಂಗಳಿಲ್ಲದ ರಾತ್ರಿಗಳಲ್ಲಿ ಬೀದಿ ದೀಪಗಳು ಮತ್ತೆ ಅಲಂಕಾರದ ಜಿಗಿಬಿಗಿ ಲೈಟುಗಳು ಚುಕ್ಕಿ ಬೆಳಕ ಮಸುಕು ಮಾಡಿವೆ. ನೀವೇನೂ ರಾತ್ರಿ ಆಕಾಶಕ್ಕೆ ಮುಖ ಕೊಡುವಂತಿಲ್ಲ. ರೋಮ ನಿಮಿರಿಸುವ ಪ್ರಿಜ್ಜ್ನಿಂದ ಹೊರಟಂತಹ ಗಾಳಿ... ಶಾಲು ಸ್ವೆಟರ್ ...ಊಹುಂ ಯಾವುದಕ್ಕೂ ಬಗ್ಗದ ಚಳಿ !