ಅಪರಾಧ ತಡೆ ಪಾಠ ಕಲಿಯಲು ರಾಜ್ಯ ಪೊಲೀಸರು ಮುಂಬಯಿಗೆ
ಬೆಂಗಳೂರು : ಜಯನಗರದಲ್ಲಿ ಸರಣಿ ದರೋಡೆ, ವೃದ್ಧರ ಸರಣಿ ಕೊಲೆ, ಇರಿತ, ಮಲ್ಲೇಶ್ವರಂನಲ್ಲಿ ಹಾಡು ಹಗಲೇ ದರೋಡೆ, ಬ್ಯಾಂಕ್ ಲೂಟಿ.... ಹೀಗೆ ಬೆಂಗಳೂರಿನಲ್ಲಿ ಬರೀ ಕ್ರೆೃಂ ಸಿರೀಸ್ ನಡೆಯುತ್ತಿರುವುದನ್ನು ನಿಯಂತ್ರಿಸುವ ಪರಿ ತೋಚದೆ ಪೊಲೀಸರು ದಂಡು ಸಮೇತ ಮುಂಬಯಿಗೆ ಹೊರಟಿದ್ದಾರೆ. ಅಲ್ಲಿನ ಪೊಲೀಸರು ಗೂಂಡಾಗಳನ್ನು ಹೇಗೆ ನಿಯಂತ್ರಿಸುತ್ತಾರೆ ಅನ್ನುವುದನ್ನು ಅಧ್ಯಯನ ಮಾಡಲು.
ರಾಜ್ಯ ಗೃಹ ಮಂತ್ರಿ ಮಲಿಕಾರ್ಜನ ಖರ್ಗೆ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದಾರೆ. ಮಹಾರಾಷ್ಟ್ರದ ಪೊಲೀಸರು ಗೂಂಡಾಗಿರಿಯನ್ನು ಹೇಗೆ ನಿಯಂತ್ರಿಸುತ್ತಿದೆ ಎನ್ನುವುದನ್ನು ರಾಜ್ಯ ಪೊಲೀಸರು ಕೂಲಂಕುಷವಾಗಿ ಗಮನಿಸಲಿದ್ದಾರೆ. ಪೊಲೀಸ್ ಮಹಾನಿರ್ದೇಶಕ ಸಿ. ದಿನಕರ್ ಮತ್ತು ರಾಜ್ಯ ಗೃಹ ಕಾರ್ಯದರ್ಶಿಯವರನ್ನು ಭೇಟಿ ಮಾಡಿದ ಬಳಿಕ ಈ ಗುಂಪು ಮಹಾರಾಷ್ಟ್ರದ ದಾರಿ ಹಿಡಿಯಲಿದೆ.
ಭೂಗತ ಜಗತ್ತು ಮತ್ತು ಮಾಫಿಯಾದ ಹಾವಳಿಯನ್ನು ತೊಡೆದು ಹಾಕಲು ಮುಂಬಯಿ ಪೊಲೀಸ್ ಪಡೆ ಹೇಗೆ ಪ್ಲಾನ್ಗಳನ್ನು ಆಯೋಜಿಸುತ್ತಿದೆ ಎಂಬ ಬಗ್ಗೆ ಅಲ್ಲಿನ ಗೃಹ ಮಂತ್ರಿ ತಮ್ಮ ಇತ್ತೀಚೆಗಿನ ಮುಂಬಯಿ ಭೇಟಿಯಲ್ಲಿ ತಮಗೆ ವಿವರಿಸಿರುವುದಾಗಿ ಖರ್ಗೆ ಹೇಳಿದರು. ಆ ನಿಟ್ಟಿನಲ್ಲಿ ರಾಜ್ಯದ ನಿಯೋಗ ಮುಂಬಯಿ ಪೊಲೀಸರ ಸ್ಪೆಷಲ್ ಕ್ಲಾಸಿಗೆ ಹೋಗಲು ತಯಾರಾಗುತ್ತಿದೆ.
ಮುಂಬಯಿಯಲ್ಲಿ ವಾಸಿಸುತ್ತಿದ್ದ ಮಾಫಿಯಾ ಬೆಂಗಳೂರು ಮತ್ತು ಮಂಗಳೂರು ಕಡೆಗೆ ಗುಳೆ ಹೊರಡುತ್ತಿವೆ ಎಂಬ ಸುದ್ದಿಗಳು ಕೇಳಿಬರುತ್ತಿರುವಾಗಲೇ, ನಮ್ಮ ಪೊಲೀಸರು ಹೊಸ ತಂತ್ರಕ್ಕಾಗಿ ಅತ್ತ ಹೊರಟಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಅಪರಾಧಗಳಲ್ಲಿ ಹಳೇ ರೌಡಿಗಳ ಕೈವಾಡ ಅಥವಾ ಒಬ್ಬನೇ ಕುಳ ಎಲ್ಲ ಅಪರಾಧಗಳನ್ನು ನಿಯಂತ್ರಿಸುವ ಬಗ್ಗೆ ಸುಳಿವು ಸಿಗುತ್ತಿಲ್ಲ. ಬದಲಾಗಿ ಪ್ರತಿಯಾಂದು ಕ್ರೆೃಂ ಕೇಸಿನಲ್ಲಿಯೂ ಹೊಸ ಹೊಸ ಯುವ ಮುಖಗಳು ಪತ್ರಿಕೆಯಲ್ಲಿ ಕಾಣಿಸಿಕೊಳ್ಳುತ್ತಿವೆ.
(ಇನ್ಫೋ ವಾರ್ತೆ)