ಆಸೆಗಣ್ಣಿಗೊಂದು ಹೊಸ ದಿಕ್ಕು, ಅದು ದಕ್ಕೀತೆ?
ಲಕುಮಿ ವಾರವೂ ರಾಜ್ಯಾದ್ಯಂತ ಒಣಹವೆ ಮುಂದುವರಿದಿದೆ. ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕನ್ನಡ ಒಳನಾಡಿನ ಅನೇಕ ಪ್ರದೇಶಗಳ ತಾಪಮಾನದಲ್ಲಿ ತುಸು ಕುಸಿತ ಕಂಡಿದ್ದು ಬಿಟ್ಟರೆ ಮತ್ತೇನಪ್ಪಾ ವಿಶೇಷ ಎಂದು ಹುಡುಕುವುದು ವೇಸ್ಟು . ದಿನದ ಕನಿಷ್ಠ ಉಷ್ಣಾಂಶದ ಗೌರವ ಶಿವಮೊಗ್ಗೆಗೆ- ಅಲ್ಲಿನ 14.1 ಡಿಗ್ರಿ ಸೆಲ್ಷಿಯಸ್ ಸಂಖ್ಯೆಗೆ.
ಹವಾಮಾನ ಇಲಾಖೆ ಹೇಳುವಂತೆ - ಭಾನುವಾರ ಮುಂಜಾನೆವರೆಗೂ ಡ್ರೆೃ ವೆದರ್ ಮುಂದುವರಿಕೆ. ಬೆಂಗಳೂರಿನಲ್ಲಿ ಶುಭ್ರಾಕಾಶ. ದಿನದ ಕನಿಷ್ಠ ಉಷ್ಣಾಂಶ 15 ಡಿಗ್ರಿ ಸೆಲ್ಷಿಯಸ್ ಆಸುಪಾಸಿನಲ್ಲಿ . ಇವಿಷ್ಟೂ ಕರಾರುವಾಕ್ಕಾದ ಹವಾ ಸಮಾಚಾರ.
ಬಿಸಿಲು ಬೆಳಕಿನಾಟದ ಲೆಕ್ಕಾಚಾರದ ನಂತರ ಲೋಕಾರೂಢಿ ಮಾತುಕತೆಗೆ ತೊಡಗಿದರೆ ಕಣ್ಣಿಗೆ ನಿಲ್ಲುವುದು ನಮ್ಮ ರೈತರು. ಕುಸಿದ ದವಸದ ಬೆಲೆಯಿಂದ ಕಂಗೆಟ್ಟ ಭೂಮಿ ತಾಯಿಯ ಚೊಚ್ಚಿಲ ಮಗನಿಗೆ ಪ್ರಧಾನಿ ವಾಜಪೇಯಿ ಸಮಾಧಾನ ಹೇಳಿದ್ದಾರೆ. ದೇಶಾದ್ಯಂತ ಉಗ್ರಾಣಗಳ ನಿರ್ಮಿಸುವುದಾಗಿ ಹೇಳಿದ್ದಾರೆ.
ವಾಜಪೇಯಿ ಅನೇಕ ಯೋಚನೆಗಳ ಹೇಳಿಕೊಂಡಿದ್ದಾರೆ. ಆದರೆ, ಯಾವುದಕ್ಕೂ ಕಾಲ ಮಿತಿಯಿಲ್ಲ . ಇದರಿಂದಾಗಿ ಮಳೆಗಾಗಿ ರೈತ ಆಕಾಶದತ್ತ ದೃಷ್ಟಿ ನೆಡುವಂತೆ, ಭರವಸೆಗಳ ಈಡೇರಿಕೆಗಾಗಿ ದೆಹಲಿಯತ್ತ ನಿಡುಗಣ್ಣಾಗಬೇಕೆ! ನಿರೀಕ್ಷೆ ಫಲಿಸೀತೆ. ತಂಪು ಮಳೆ ಬಿದ್ದೀತೆ. ಕನಸುಗಳು ಕೊನರಿ ನನಸಾದಾವೆ. ಗೊತ್ತಿಲ್ಲ .. ಆದರೆ, ಪ್ರಧಾನಿ ಮಾತ್ರ ಪೂರಾ ಭರವಸೆಯಿಂದಿದ್ದಾರೆ.