ಅನಿವಾಸಿ ಭಾರತೀಯ ಮಕ್ಕಳ ವಸತಿ ಶಾಲೆಗೆ ಹಸಿರು ನಿಶಾನೆ
ಕುಂಬಳಗೋಡು : ಅನಿವಾಸಿ ಭಾರತೀಯ ಮಕ್ಕಳಿಗಾಗಿ 25 ಕೋಟಿ ರುಪಾಯಿ ವೆಚ್ಚದಲ್ಲಿ ಆದಿಚುಂಚನಗಿರಿ ಸಂಸ್ಥಾನ ನಿರ್ಮಿಸಿರುವ ಅಂತರರಾಷ್ಟ್ರೀಯ ವಸತಿಶಾಲೆಗೆ ಪ್ರಧಾನಿ ವಾಜಪೇಯಿ ಶುಕ್ರವಾರ ಹಸಿರು ನಿಶಾನೆ ತೋರಿದರು.
ವಿದ್ಯಾಸೌಧವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ಸಂಸ್ಥಾನದ ಶೈಕ್ಷಣಿಕ ಚಟುವಟಿಕೆಗಳನ್ನು ಶ್ಲಾಘಿಸಿದರು. ಆದಿಚುಂಚನಗಿರಿಯನ್ನು ವಿದ್ಯಾಗಿರಿ ಎಂದು ಬಣ್ಣಿಸಿದ ಅವರು, ನಂತರದ ದಿನಗಳಲ್ಲಿ ಇದು ವಿಕಾಸಗಿರಿಯಾಗಲಿ ಎಂದು ಹಾರೈಸಿದರು. ಪ್ರಾಥಮಿಕ ಶಿಕ್ಷಣ ಯಜ್ಞದಲ್ಲಿ ತೊಡಗಿರುವ ಬಾಲ ಗಂಗಾಧರನಾಥ ಶ್ರೀಗಳ ಸೇವೆ ದೊಡ್ಡದು ಎಂದು ವಾಜಪೇಯಿ ಹೇಳಿದರು. ಇದೇ ಸಂದರ್ಭದಲ್ಲಿ 53 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಸ್ವಾಮೀಜಿಯವರಿಗೆ ಶಾಲು ಹೊದೆಸಿ ಪ್ರಧಾನಿ ಅಭಿನಂದಿಸಿದರು.
ವಿಧಾನಸೌಧ ಮಾದರಿಯ ವಿದ್ಯಾಸೌಧ : ಅಂತರರಾಷ್ಟ್ರೀಯ ಗುಣಮಟ್ಟವನ್ನು ಹೊಂದಿರುವ 150 ಎಕರೆ ವ್ಯಾಪ್ತಿಯ ವಿದ್ಯಾಸೌಧ - ಆಟದ ಮೈದಾನ, ಈಜುಕೊಳ, ಒಲಂಪಿಕ್ ಮಟ್ಟದ ಸಭಾಂಗಣವನ್ನು ಹೊಂದಿದೆ. ಬ್ರಿಟಿಷ್ ಗ್ರಂಥಾಲಯ, ಇಂಡಿಯನ್ ನ್ಯಾಶನಲ್ ಕಾರ್ಟೊಗ್ರಾಫಿಕ್ಸ್ , ಸ್ಕೂಲ್ನೆಟ್, ಜಾಗೃತಿ, ಬಯಾನ್ಸ್ ಮುಂತಾದ ಸಂಸ್ಥೆಗಳ ಸಂಪರ್ಕದೊಂದಿಗೆ ಈ ಶಾಲೆಯನ್ನು ನಿರ್ಮಿಸಲಾಗಿದೆ.
1997 ರಿಂದಲೇ ಕೆಲಸ ನಿರ್ವಹಿಸುತ್ತಿರುವ ಶಾಲೆ- ಅಮೆರಿಕ, ಸಿಂಗಪುರ, ಇಂಡೋನೇಷ್ಯಾ, ಬ್ರಿಟನ್, ಜರ್ಮನಿ ಮುಂತಾದ ದೇಶಗಳ ವಿದ್ಯಾರ್ಥಿಗಳನ್ನು ಒಳಗೊಂಡಿದೆ. ವಿದ್ಯಾರ್ಥಿಗಳನ್ನು ಕುದುರೆ ಸವಾರಿ ಸೇರಿದಂತೆ ವಿವಿಧ ವಿದ್ಯೆಗಳಲ್ಲಿ ಶಾಲೆ ಪಳಗಿಸುತ್ತಿದೆ.
(ಇನ್ಫೋ ವಾರ್ತೆ)