ವೇದಾಂತ- ಲೋಕವಿಜ್ಞಾನ ಜೊತೆಜೊತೆಗಿರೆ ಸಾಧನ : ಜೋಶಿ
ಉಡುಪಿ : ವೇದಾಂತಮುಂ ಲೋಕ ವಿಜ್ಞಾನಮುಂ ನಿನ್ನ ಹಾದಿಗೆರಡಂಕೆ, ನಡು ಪಟ್ಟಿಯಲಿ ನಡೆ ನೀಂ.... ಕಗ್ಗ ಕವಿ ಡಿ.ವಿ.ಗುಂಡಪ್ಪನವರ ಮಾತನ್ನು ಕೇಂದ್ರ ಮಾನವ ಸಂಪನ್ಮೂಲ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ಮುರಳಿ ಮನೋಹರ ಜೋಶಿ ತಮ್ಮದೇ ಆದ ರೀತಿಯಲ್ಲಿ ಶುಕ್ರವಾರ ನೆನಪಿಸಿದ್ದಾರೆ....
ಸಂದರ್ಭ- ಮಠಾಧಿಪತಿಗಳ ಹಾಗೂ ಸಂತರ ಒಂದು ದಿನದ ಸಮ್ಮೇಳನದ ಉದ್ಘಾಟನೆ. ವಿಜ್ಞಾನ- ತಂತ್ರಜ್ಞಾನ ಹಾಗೂ ಆಧ್ಯಾತ್ಮಿಕ ತತ್ತ್ವಗಳ ಸಹಯೋಗ ಮಾನವ ಕಲ್ಯಾಣಕ್ಕೆ ಅತಿ ಮುಖ್ಯ. ಸತ್ಯಾನ್ವೇಷಣೆಯಲ್ಲಿ ವಿಜ್ಞಾನದ ಜೊತೆಗೆ ಆಧ್ಯಾತ್ಮಿಕತೆಯೂ ಅತಿ ಮುಖ್ಯ ಎಂಬುದನ್ನು ಪಾಶ್ಚಿಮಾತ್ಯರೂ ಮನಗಂಡಿದ್ದಾರೆ. ವಸುದೈವ ಕುಟುಂಬಕಮ್ (ಜಗತ್ತೇ ಒಂದು ಕುಟುಂಬ) ಎಂಬುದು ಭಾರತೀಯ ತತ್ವ ಮತ್ತು ಚಿಂತನೆಯಾದರೆ, ಜಗತ್ತು ಒಂದು ಮಾರುಕಟ್ಟೆ. ಅಲ್ಲಿ ಮೆರೆಯಲು ಹಣ ಹಾಗೂ ಅಧಿಕಾರ ಅತಿ ಮುಖ್ಯ ಎನ್ನುವುದು ಪಾಶ್ಚಿಮಾತ್ಯ ಚಿಂತನೆ. ಪಾಶ್ಚಿಮಾತ್ಯ ಚಿಂತನೆಯಲ್ಲಿ ಮಾನವೀಯ ಮೌಲ್ಯಗಳು ನಗಣ್ಯವಾಗಿದ್ದವು. ಆದರೆ ಈಗ ಈ ರಾಷ್ಟ್ರಗಳಿಗೂ ಮೌಲ್ಯಗಳ ಮಹತ್ವದ ಅರಿವಾಗಿದೆ.
ಎಂತೆಂಥದೋ ಇಕ್ಕಟ್ಟಿನ ಸಂದರ್ಭದಲ್ಲಿ ಭಾರತದ ನೆರವಿಗೆ ಬಂದಿರುವುದೇ ನಮ್ಮತನ- ಮೌಲ್ಯಗಳು. ವೇದವ್ಯಾಸರಿಂದ ಹಿಡಿದು ಸ್ವಾಮಿ ವಿವೇಕಾನಂದರವರೆಗೆ ಅನೇಕ ಮಹನೀಯರು ಭಾರತವನ್ನು ಆಧ್ಯಾತ್ಮಿಕ ಮೌಲ್ಯದ ಹಾದಿಯಲ್ಲಿ ನಡೆಸಿಕೊಂಡು ಬಂದಿದ್ದಾರೆ. ನಮ್ಮ ಆಧ್ಯಾತ್ಮಿಕ ಮೌಲ್ಯಗಳು ಸಾವಿರಾರು ಜನರನ್ನು ಹುರಿದುಂಬಿಸಿದ್ದಷ್ಟೇ ಅಲ್ಲ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇಶಾಭಿಮಾನ, ಆತ್ಮಸಾಕ್ಷಿ, ಆತ್ಮಾಭಿಮಾನ ಹಾಗೂ ಆತ್ಮ ಗೌರವ ಕಾಪಿಟ್ಟುಕೊಳ್ಳಲು ಸಾಧ್ಯವಾಯಿತು.
ಮಠಾಧೀಶರು ಹಾಗೂ ಸಂತರು ಸಮಾಜ ಸುಧಾರಿಸಿರುವ ಅನೇಕ ಉದಾಹರಣೆಗಳಿವೆ. ಬಡ ಬಗ್ಗರಿಗೆ ಊಟ- ವಸತಿ ಒದಗಿಸುವ, ನೀರಿನ ಸಮಸ್ಯೆ ನೀಗುವ, ಕ್ಷಾಮ ಬಂದಲ್ಲಿ ಧರ್ಮ ಕರ್ಮ ಅನ್ನುವ ಧೋರಣೆಯನ್ನು ಈಗಿನ ಸಂತರೂ ತಳೆದಲ್ಲಿ ಕಲ್ಯಾಣ ತಲದ ಮೇಲೆ ವಿಜ್ಞಾನ ಮೆರೆದೀತು.
(ಯುಎನ್ಐ)