ಮಾಧವನ್ ವಿಚಾರಣೆ : ಕಳ್ಳಾಟದಿಂದ ನಿಖಿಲ್ ಚೋಪ್ರ ಮುಕ್ತ
ಚೆನ್ನೈ : ಭಾರತದ ಕ್ರಿಕೆಟಿಗ ನಿಖಿಲ್ ಚೋಪ್ರ ಕಳ್ಳಾಟದ ಆರೋಪದಿಂದ ಮುಕ್ತರಾಗಿದ್ದಾರೆ.
ಕಳೆದ ಡಿಸೆಂಬರ್ನಲ್ಲಿ ಜಿಂಬಾಬ್ವೆ ವಿರುದ್ಧ ನಡೆದ 2 ಪಂದ್ಯಗಳಿಂದ ನಿಖಿಲ್ ಚೋಪ್ರ ಅವರನ್ನು ಕೈಬಿಡಲಾಗಿತ್ತು. ಕಳ್ಳಾಟದ ಆರೋಪ ಸುಳ್ಳೆಂದು ಸಾಬೀತಾಗೋವರೆಗೆ ಅವರು ಕ್ರಿಕೆಟಿಗೆ ಮರಳುವಂತಿಲ್ಲ ಎಂದು ಬಿಸಿಸಿಐ ಹೇಳಿತ್ತು. ಆದರೆ ಗುರುವಾರ ಬಿಸಿಸಿಐನ ಭ್ರಷ್ಟಾಚಾರ ವಿರೋಧಿ ತನಿಖಾಧಿಕಾರಿ ಕೆ.ಮಾಧವನ್ ನಡೆಸಿದ ವಿಚಾರಣೆಯಿಂದ, ಚೋಪ್ರ ಮೋಸದಾಟದಲ್ಲಿ ಭಾಗಿಯಾಗಿರುವ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲದಿರುವುದರಿಂದ ಅವರನ್ನು ಕಳ್ಳಾಟ ಆರೋಪದಿಂದ ಮುಕ್ತಗೊಳಿಸಲಾಗಿದೆ ಎಂದು ಬಿಸಿಸಿಐ ಅಧ್ಯಕ್ಷ ಎ.ಸಿ.ಮುತ್ತಯ್ಯ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
ಫೆಬ್ರವರಿಯಲ್ಲಿ ಪ್ರಾರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ಗೆ ಆಡಲು ಚೋಪ್ರಾಗೆ ಅವಕಾಶ ನೀಡಲಾಗುವುದೇ ಎಂಬ ಪ್ರಶ್ನೆಗೆ, ಆಯ್ಕೆ ಅರ್ಹತೆಗೆ ಅನುಗುಣವಾಗಿರುತ್ತದೆ. ಅವರು ಅರ್ಹರಾದರೆ ಖಂಡಿತಾ ಆಡುವ ಅವಕಾಶ ಸಿಗಲಿದೆ ಎಂದು ಮುತ್ತಯ್ಯ ಉತ್ತರ ಕೊಟ್ಟರು. ಕಳ್ಳಾಟದಲ್ಲಿ ಚೋಪ್ರ ಭಾಗಿಯಾಗಿರುವ ಬಗ್ಗೆ ಯಾವುದೇ ಸಾಕ್ಷ್ಯ ಸಿಗದಿರುವುದೇ ಬಿಸಿಸಿಐನ ಈ ನಿರ್ಧಾರಕ್ಕೆ ಕಾರಣ ಎಂದು ಅವರು ಸ್ಪಷ್ಟಪಡಿಸಿದರು.
(ರಾಯ್ಟರ್ಸ್)