ಪ್ರಧಾನಿ ಕಂಡರು ಸಿಲಿಕಾನ್ ವ್ಯಾಲಿಯಲ್ಲೊಂದು ತಾಜ ಮಹಲ್
ಬೆಂಗಳೂರು : ಮಾಹಿತಿ ತಂತ್ರಜ್ಞಾನ ಮತ್ತು ಇತರ ಇಂಜಿನಿಯರಿಂಗ್ ಕ್ಷೇತ್ರದ ಪರಿಣತರನ್ನು ತರಬೇತುಗೊಳಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಮಂಡಲಿಯಾಂದನ್ನು ರಚಿಸಲಾಗುವುದು ಎಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೇಳಿದ್ದಾರೆ.
ಅವರು ಶುಕ್ರವಾರ ಬೆಂಗಳೂರಿನ ಇನ್ಫೋ ಸಿಸ್ ಕಚೇರಿಗೆ ಭೇಟಿ ನೀಡಿ ಮಾತನಾಡುತ್ತಿದ್ದರು. ಭಾರತದ ಮುಂದಿರುವ ಅವಕಾಶಗಳನ್ನು ಯಶಸ್ವಿಯಾಗಿ ಬಳಸಿಕೊಳ್ಳುವ ಮುಂದಾಳತ್ವದ ಅಗತ್ಯವಿದೆ. ಆ ನಿಟ್ಟಿನಲ್ಲಿ ಸರಕಾರ ಮುಂದುವರೆಯುತ್ತದೆ ಎಂದು ವಾಜಪೇಯಿ ಹೇಳಿದರು.
ಇನ್ಫೋ ಸಿಸ್ನಂತಹ ಕಂಪೆನಿಗಳು ದೇಶದ ಆಧುನಿಕ ದೇವಸ್ಥಾನಗಳು ಎಂದ ಅವರು ಭಾರತದಲ್ಲಿಯೂ ಯಶಸ್ಸು ಸಾಧಿಸಲು ಸಾಧ್ಯ ಎಂಬುದನ್ನು ಬೆಂಗಳೂರಿನಲ್ಲಿರುವ ಐಟಿ ಕಂಪೆನಿಗಳು ತೋರಿಸಿಕೊಟ್ಟಿವೆ ಎಂದರು.
ಒಂದು ಕಾಲದಲ್ಲಿ ಎಂಜಿನಿಯರುಗಳಿಗೆ ವಿದೇಶಕ್ಕೆ ಹಾರಲು ವೀಸಾ, ಪಾಸ್ಪೋರ್ಟ್ ಸಿಕ್ಕಲು ತಿಂಗಳುಗಟ್ಟಲೆ ಹಿಡಿಯುತ್ತಿತ್ತು. ಈಗ ಭಾರತೀಯ ಐಟಿ ಪರಿಣತರನ್ನು ತನ್ನತ್ತ ಸೆಳೆಯಲು ವಿವಿಧ ದೇಶಗಳು ನಾಮುಂದು ತಾಮುಂದು ಎನ್ನುತ್ತಿವೆ. ಈ ಬೆಳವಣಿಗೆ ದೇಶದ ಬಲವನ್ನು ಹೆಚ್ಚಿಸಿದೆ. ಬಡತನ, ಮೂಲಭೂತ ಸೌಕರ್ಯಗಳ ಕೊರತೆ ನೀಗಿಸಲು ಐಟಿ ಒರತೆಯೇ ಅಸ್ತ್ರವಾಗಬಲ್ಲುದು. ಭಾರತ ಹಾವಾಡಿಗರ ದೇಶ ಎಂಬ ಈ ಹಿಂದಿನ ಹುರುಳಿಲ್ಲದ ಆಪಾದನೆಗಳನ್ನು ನಮ್ಮ ದೇಶದ ಐಟಿ ಪರಿಣತರು ಅಳಿಸಿ ಹಾಕಿದ್ದಾರೆ ಎಂದು ವಾಜಪೇಯಿ ಶ್ಲಾಘಿಸಿದರು.
ನೇಗಿಲು ಹಿಡಿವ ಕೈಯ್ಯಲ್ಲಿ ಕಂಪ್ಯೂಟರ್ ಮೌಸ್ : ಕಷ್ಟದಲ್ಲೇ ಹುಟ್ಟಿ ಬೆಳೆದಿರುವ ಯುವಕರು ಕಂಪ್ಯೂಟರ್ ಕಲಾವಂತರಾಗಿ ಲಕ್ಷಾಧಿಪತಿಗಳಾಗಿರುವ ಎಷ್ಟೋ ಉದಾಹರಣೆಗಳು ಈ ಹೊತ್ತು ನಮ್ಮ ಮುಂದಿವೆ. ಹಳ್ಳಿಮುಕ್ಕ ಎಂಬ ಹೀಕರೆಕೆಗೆ ಅಪವಾದ ಎಂಬಂತೆ ದೇಶದ ಹಳ್ಳಿ ಹೈದರೂ ಕಂಪ್ಯೂಟರ್ನತ್ತ ಕಣ್ಣಿಟ್ಟಿದ್ದಾರೆ. ಸಾಫ್ಟ್ವೇರ್ ಉದ್ಯಮಗಳು ಕೇವಲ ದುಡ್ಡು ಮಾಡಿಕೊಂಡು ಸ್ವಾರ್ಥ ಮೆರೆಯದೆ ಆಸ್ಪತ್ರೆಗಳನ್ನು ಕಟ್ಟಿಸಿವೆ, ಶಾಲೆಗಳನ್ನು ಕಟ್ಟಿಸಿವೆ, ಬಡವನ ಕಂಪ್ಯೂಟರ್ ತರಪೇತಿಗೆ ಪಣ ತೊಡುತ್ತಿವೆ. ಇನ್ಫೋಸಿಸ್ನಂಥ ಸಂಸ್ಥೆ ತಂತ್ರಜ್ಞಾನ ಹಾಗೂ ನಿರ್ವಹಣೆ ಕ್ಷೇತ್ರಕ್ಕೆ ಅಪಾರ ಕೊಡುಗೆ ಕೊಟ್ಟಿದೆ ಎಂದರು.
ಹಿಂದೆ ಯಾರಾದರೂ ವಿದೇಶೀಯರು ಭಾರತಕ್ಕೆ ಬಂದರೆ ತಾಜ್ ಮಹಲ್ ನೋಡದೇ ಹೋಗುತ್ತಿರಲಿಲ್ಲ. ಇವತ್ತು ಭಾರತದ ಸಿಲಿಕಾನ್ ವ್ಯಾಲಿ ಬೆಂಗಳೂರಿಗೆ ಭೇಟಿ ಕೊಡದೆ ಹೋಗೋದೇ ಇಲ್ಲ. ಇದೊಂದು ಹೆಮ್ಮೆಯ ಬೆಳವಣಿಗೆ ಎಂದು ವಾಜಪೇಯಿ ಹೇಳಿದರು.
ಇನ್ಫೋಸಿಸ್ ಅಧ್ಯಕ್ಷ ನಾರಾಯಣ ಮೂರ್ತಿ ಸ್ವಾಗತ ಕೋರಿದರು. ರಾಜ್ಯಪಾಲರಾದ ವಿ.ಎಸ್.ರಮಾದೇವಿ, ಮುಖ್ಯಮಂತ್ರಿ ಎಸ್.ಎಂ.ಕೃಷ್ಣ , ಕೇಂದ್ರ ಸಚಿವರಾದ ಅನಂತ ಕುಮಾರ್, ಧನಂಜಯ ಕುಮಾರ್ ಹಾಗೂ ವೆಂಕಯ್ಯನಾಯ್ಡು ಸಮಾರಂಭದಲ್ಲಿ ಹಾಜರಿದ್ದರು.
(ಯುಎನ್ಐ)