ಲಾಲ್ಬಾಗ್ ಫಲಪುಷ್ಪ ಪ್ರದರ್ಶನ
ಬೆಂಗಳೂರು : ಬೆಂಗಳೂರಿನ ಕೆಂಪು ತೋಟ (ಲಾಲ್ಬಾಗ್) ದಲ್ಲಿ ಶುಕ್ರವಾರದಿಂದ ಗಣರಾಜ್ಯೋತ್ಸವ 2001 ನಿಮಿತ್ತ ಫಲ- ಪುಷ್ಪ ಪ್ರದರ್ಶನ ಆರಂಭಗೊಳ್ಳಲಿದೆ. ಜನವರಿ 19ರಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರು ಮೇಯರ್ ಪ್ರೇಮಾ ಕಾರ್ಯಪ್ಪ ಅವರು, ಪ್ರದರ್ಶನ ಉದ್ಘಾಟಿಸಲಿದ್ದಾರೆ.
ಈ ವಿಷಯವನ್ನು ತೋಟಗಾರಿಕೆ ಇಲಾಖೆ ನಿರ್ದೇಶಕ ಪಿ.ಬಿ. ರಾಮಮೂರ್ತಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ವಿಶ್ವ ಖ್ಯಾತ ಗಾಜಿನ ಮನೆಯಲ್ಲಿ ಜನವರಿ 20ರಂದು ಇಕೆಬಾನ ಹಾಗೂ ಬೋನ್ಸಾಯ್ ಪ್ರದರ್ಶನವನ್ನು ತೋಟಗಾರಿಕೆ ಸಚಿವ ಅಲ್ಲಂ ವೀರಭದ್ರಪ್ಪ ಅವರು ಉದ್ಘಾಟಿಸಲಿದ್ದಾರೆ. ಗಣರಾಜ್ಯೋತ್ಸವ ಮುನ್ನಾದಿನವಾದ ಗುರುವಾರ (ಜ.25) ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಪತ್ನಿ ಪ್ರೇಮಾ ಕೃಷ್ಣ ಅವರು ಫಲ - ಪುಷ್ಪ ಪ್ರದರ್ಶನದ ಬಹುಮಾನ ವಿಜೇತರಿಗೆ ಪ್ರಶಸ್ತಿ ವಿತರಿಸಲಿದ್ದಾರೆ. ಟಿ.ಬಿ. ಜಯಚಂದ್ರ, ಶಾಸಕ ರಾಮಲಿಂಗಾರೆಡ್ಡಿ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಶಾಲಾ ಮಕ್ಕಳಿಗೆ ಉಚಿತ ಪ್ರವೇಶ : 25ರಂದು ಬೆಳಗ್ಗೆ 8ರಿಂದ 12 ಗಂಟೆ ವರೆಗೆ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ. ರಾಷ್ಟ್ರಕವಿ ಕುವೆಂಪು ಅವರ ದೋಣಿ ಸಾಗಲಿ ಮುಂದೆ ಹೋಗಲಿ ಗೀತೆಯನ್ನು ಆಧರಿಸಿ ಅಲಂಕಾರಿಕ ಉದ್ಯಾನವೊಂದನ್ನು ವಿನ್ಯಾಸಗೊಳಿಸಲಾಗಿದೆ ಎಂದು ರಾಮಮೂರ್ತಿ ತಿಳಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಸಹ ನಡೆಯುತ್ತಿದ್ದ ಪ್ರದರ್ಶನ ಕಳೆದ ಬಾರಿ ರಾಜ್ಕುಮಾರ್ ಅಪಹರಣ ಹಿನ್ನೆಲೆಯಲ್ಲಿ ರದ್ದಾಗಿತ್ತು.
ಈ ಬಾರಿಯ ಪ್ರದರ್ಶನದಲ್ಲಿ ವ್ಯಕ್ತಿಗಳು ಹಾಗೂ ಸಂಘ - ಸಂಸ್ಥೆಗಳೂ ಸೇರಿದಂತೆ ಒಟ್ಟು 1938 ಸ್ಪರ್ಧಿಗಳು ಪಾಲ್ಗೊಳ್ಳುತ್ತಿದ್ದಾರೆ. ಬಿಡಿ ಹೂಗಳ ಮತ್ತು ವಿಶೇಷ ಜಾತಿಯ ಎಲೆಗಿಡಗಳ ಆಕರ್ಷಕ ವಿನ್ಯಾಸ ಹಾಗೂ ಬೆಳಕಿನಂಗಳದ ತೋಟ ಈ ಬಾರಿಯ ವಿಶೇಷ. ಈ ಬಾರಿ ತೋಟಗಳ ಸ್ಪರ್ಧೆಯಲ್ಲಿ 261 ಮಂದಿ ಸ್ಪರ್ಧಿಸಿದ್ದು, ಆ ಪೈಕಿ 130 ತೋಟಗಳಿಗೆ ವಿಶೇಷ ತೋಟ ಪ್ರಶಸ್ತಿ, 100 ತೋಟಗಳಿಗೆ ಪ್ರಥಮ ಬಹುಮಾನ ಹಾಗೂ 25 ತೋಟಗಳಿಗೆ ದ್ವಿತೀಯ ಬಹುಮಾನ ನೀಡಲಾಗಿದೆ.
ಮುಖಪುಟ / ಇವತ್ತು... ಈ ಹೊತ್ತು...