ಜಾಗತೀಕರಣ ಅರ್ಥಾತ್ ದೋಚೀಕರಣ - ದೇವನೂರು ಮಹಾದೇವ
ಹಾಸನ : ಜಾಗತೀಕರಣದ ಹೆಸರಿನಲ್ಲಿ ದೋಚೀಕರಣ ನಡೆಯುತ್ತಿದೆ ಎಂದು ಸಾಹಿತಿ ಮತ್ತು ಚಿಂತಕ ದೇವನೂರು ಮಹಾದೇವ ಆಪಾದಿಸಿದ್ದಾರೆ.
ಅವರು ಬುಧವಾರದಂದು ನಗರದ ಗಣಪತಿ ಪೆಂಡಾಲ್ನಲ್ಲಿ ಆಯೋಜಿಸಿದ್ದ ಜಾಗತೀಕರಣ ವಿರೋಧಿ ಸಮಾವೇಶದಲ್ಲಿ ಮಾತನಾಡುತ್ತಿದ್ದರು. ದೇಶಭಕ್ತರು ಎಂದು ಹೇಳಿಕೊಳ್ಳುವವರೇ ಗುಲಾಮಗಿರಿಯ ಕಡೆಗೆ ಸ್ವ ಇಚ್ಛೆಯಿಂದ ಧಾವಿಸುತ್ತಿದ್ದಾರೆ. ಈಗಲಾದರೂ ಎಚ್ಚೆತ್ತುಕೊಂಡು ಹೋರಾಟ ಮಾಡದಿದ್ದರೆ ದೇಶದ ಜನತೆ ಸದ್ಯದಲ್ಲಿಯೇ ಪಾಶ್ಚಾತ್ಯರ ಗುಲಾಮರಾಗುವುದರಲ್ಲಿ ಎರಡು ಮಾತಿಲ್ಲ ಎಂದು ದೇವನೂರು ಎಚ್ಚರಿಸಿದರು. ಗ್ಯಾಟ್ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ದೇಶದ ಹಿತದ ಬಗ್ಗೆ ಯೋಚನೆ ಮಾಡಿದಿರುವುದರ ಫಲವೇ ಇಂದಿನ ಜಾಗತೀಕರಣ. ರಾಜಕಾರಣಿಗಳು ಕೆಲಸ ವಡುವ ಮುನ್ನ ಎಷ್ಟು ದೋಚಬಹುದು ಎಂಬುದನ್ನೇ ಆಲೋಚನೆ ಮಾಡುತ್ತಾರೆ ಎಂದು ಅವರು ದೂರಿದರು.
ಸಮಾರಂಭದ ಇನ್ನೋರ್ವ ಅತಿಥಿ ಸಾಹಿತಿ ಡಾ. ಹಿ.ಶಿ. ರಾಮಚಂದ್ರೇ ಗೌಡ ಮಾತನಾಡುತ್ತಾ, ಕಳೆದ ಐವತ್ತು ವರ್ಷಗಳಲ್ಲಿನ ಸೃಜನಾತ್ಮಕ ಕೊರತೆಯಿಂದಾಗಿಯೇ ಈ ಜಾಗತೀಕರಣದ ಆಗಮನವಾಗಿದೆ. ಅಭಿವೃದ್ಧಿ ಕಲ್ಪನೆಯ ಭಾರತವನ್ನು ನಾವು ಕಾಣಲೇ ಇಲ್ಲ. ದೇಶದಲ್ಲಿ ಈಗೀಗ ಭವಿಷ್ಯ ಕುರಿತ ಭಯವೂ ಕಾಣುತ್ತಿಲ್ಲ. ನಮ್ಮಲ್ಲಿರುವ ಸಂಪತ್ತನ್ನೂ ನಾವು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಎಸ್. ಪುಟ್ಟಣ್ಣಯ್ಯ, ಜನವಾದಿ ಮಹಿಳಾ ಸಂಘಟನೆಯ ಕೆ. ನೀಲ ಮತ್ತು ರಾಜ್ಯ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಎ.ಎನ್. ಬುರ್ಜಿ ಭಾಗವಹಿಸಿದ್ದರು.
(ಇನ್ಫೋ ವಾರ್ತೆ)