ಸೀಮೆಹಸುವಿನಿಂದ ಪುಣ್ಯಕೋಟಿ ಸಂತತಿಗೆ ಕುತ್ತು - ಸ್ವಾಮೀಜಿ
ಉಡುಪಿ : ನಮ್ಮ ದೇಶದಲ್ಲಿ ವ್ಯಾಪಕವಾಗುತ್ತಿರುವ ಮಿಶ್ರ ತಳಿ ಹಸುಗಳನ್ನು ಹುಟ್ಟು ಹಾಕುವ ಕಾರ್ಯವನ್ನು ಶ್ರೀ ರಾಮಚಂದ್ರಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಬಲವಾಗಿ ವಿರೋಧಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಸ್ವಾಮೀಜಿ, ಮಿಶ್ರ ತಳಿ ಹಸುಗಳ ಹುಟ್ಟುಹಾಕುತ್ತಿರುವ ವಿಧಾನಗಳಿಂದಾಗಿ ‘ಗಿಡ್ಡ ಹಳ್ಳಿ ಕರು’ ಹಾಗೂ ‘ಅಮೃತ್ ಮಹಲ್’ ನಂಥ ಔಷಧೀಯ ಗುಣಗಳುಳ್ಳ ದೇಶೀ ತಳಿಯ ಹಸುಗಳ ಸಂತತಿ ನಶಿಸುತ್ತಿದೆ. ಈ ಜಾತಿಯ ಹಸುಗಳ ಹಾಲು ಹಾಗೂ ಸೆಗಣಿಯಲ್ಲಿ ಕ್ಯಾನ್ಸರ್ನಂಥ ರೋಗ ನಿವಾರಿಸುವ ಔಷಧೀಯ ಗುಣಗಳಿವೆ. ‘ಪಂಚಗವ್ಯ’ ಚಿಕಿತ್ಸೆಗೆ ಹಾಲನ್ನು ಬಳಸಿದರೆ, ಸೆಗಣಿ ಉಪಯೋಗಿಸಿ ಕ್ಯಾನ್ಸರ್ಗೆ ಚಿಕಿತ್ಸೆ ಕೊಡಬಹುದು ಎಂದರು.
ಸಂಶೋಧನೆ- ರಕ್ಷಣೆಗೆ ಗೋಶಾಲೆ : ದೇಶೀ ಹಸುಗಳನ್ನು ರಕ್ಷಿಸುವ ಹಾಗೂ ಅವುಗಳ ಉತ್ಪನ್ನಗಳ ಕುರಿತು ಸಂಶೋಧನೆ ನಡೆಸುವ ಸಲುವಾಗಿ ಗೋ ಶಾಲೆಯಾಂದನ್ನು ಸ್ಥಾಪಿಸಬೇಕೆಂದಿದ್ದೇನೆ. ನಮ್ಮ ದೇಶದಲ್ಲಿ 26 ಜಾತಿಯ ಹಸುಗಳಿವೆ. ಕರ್ನಾಟಕದಲ್ಲೇ 6 ವಿಧದ ದೇಶೀ ಹಸುಗಳಿವೆ. ಇವುಗಳನ್ನು ಸಂರಕ್ಷಿಸಿ, ಸಂಶೋಧನೆ ನಡೆಸುವುದು ನನ್ನ ಉದ್ದಿಶ್ಯ ಎಂದು ಸ್ವಾಮೀಜಿ ಹೇಳಿದರು.
ನಳಂದ ಮಾದರಿಯ ಹೊಸ ವಿಶ್ವ ವಿದ್ಯಾಲಯ : ಶಿವಮೊಗ್ಗೆಯ ಹೊಸನಗರದಲ್ಲಿ ತಮ್ಮ ಮಠ ನಡೆಸುತ್ತಿರುವ ವೇದಾಧ್ಯಯನ ಕೇಂದ್ರವನ್ನು ವಿಶ್ವ ವಿದ್ಯಾಲಯವನ್ನಾಗಿ ವಿಸ್ತರಿಸುವ ಯೋಜನೆಯೂ ಇದೆ. ಹಿಂದಿನ ತಕ್ಷಶಿಲೆ ಹಾಗೂ ನಳಂದ ವಿಶ್ವ ವಿದ್ಯಾಲಯದ ಮಾದರಿಯಲ್ಲಿ ನಾಲ್ಕು ವೇದಗಳೂ ಸೇರಿದಂತೆ 14 ಭಾರತೀಯ ಕಲೆಗಳನ್ನು ವಿಶ್ವವಿದ್ಯಾಲಯದಲ್ಲಿ ಬೋಧಿಸಲಾಗುವುದು. ಶರಾವತಿ ನದಿ ದಂಡೆಯ 60 ಎಕರೆ ಜಾಗೆಯಲ್ಲಿ ಈ ಹೊಸ ವಿಶ್ವ ವಿದ್ಯಾಲಯ ಸ್ಥಾಪಿಸುವ ಕುರಿತು ಈಗಾಗಲೇ ಒಂದು ವರದಿಯೂ ಸಿದ್ಧವಾಗಿದೆ ಎದು ಸ್ವಾಮೀಜಿ ತಿಳಿಸಿದರು.
ಮಂಗಳೂರಲ್ಲಿ ಐಟಿ ಕಾಲೇಜು : ಬರುವ ಜೂನ್ನಿಂದ ಮಂಗಳೂರಿನಲ್ಲಿ ಇ- ಕಾಮರ್ಸ್ ಸೇರಿದಂತೆ ಮಾಹಿತಿ ತಂತಂತ್ರಜ್ಞಾನದ ಕೋರ್ಸುಗಳ ಕಾಲೇಜನ್ನು ಮಠ ಪ್ರಾರಂಭಿಸಲಿದೆ. ಮಠ ನಡೆಸುವ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಲ್ಲಿ ಇತರೆ ವಿಷಯಗಳ ಜೊತೆಗೆ ಸಂಸ್ಕೃತ ವಿಷಯದ ಕಲಿಕೆಗೆ ಒತ್ತು ನೀಡಲಾಗುವುದು ಎಂದರು.
ಮಠವು ಮನೆಮನೆಯಿಂದ ಒಂದು ಹಿಡಿ ಅಕ್ಕಿ ಸಂಗ್ರಹಿಸುವ ಮತ್ತೊಂದು ಯೋಜನೆ ಪ್ರಾರಂಭಿಸಿದ್ದು, ಸಂಗ್ರಹಿಸುವ ಅಕ್ಕಿಯನ್ನು ಹೊಟ್ಟೆ ಹೊರೆಯಲು ದಾರಿಯಿಲ್ಲದ ಕಡು ಬಡವರಿಗೆ ಹಂಚಲಾಗುವುದು ಎಂದು ಹೇಳಿದರು.
(ಯುಎನ್ಐ)