ಕಾರೆಹಳ್ಳಿಯಲ್ಲಿ ಕೆಎಸ್ಸಾರ್ಟಿಸಿ ಬಸ್-ಟಿಪ್ಪರ್ ಲಾರಿ ಡಿಕ್ಕಿ,ಆರು ಸಾವು
ಭದ್ರಾವತಿ : ಟಿಪ್ಪರ್ ಲಾರಿ ಮತ್ತು ಕೆಎಸ್ ಆರ್ಟಿಸಿ ಬಸ್ ಅಪಘಾತದಲ್ಲಿ ಮೂವರು ಮಹಿಳೆಯರೂ ಸೇರಿದಂತೆ ಆರು ಮಂದಿ ಮೃತ ಪಟ್ಟು 30 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಮಂಗಳವಾರ ರಾತ್ರಿ ಕಾರೆಹಳ್ಳಿ ಗ್ರಾಮದ ಬಳಿ ನಡೆದಿದೆ.
ಬಾದಾಮಿಯಿಂದ ಚಿಕ್ಕಮಗಳೂರಿಗೆ ಪ್ರಯಾಣಿಸುತ್ತಿದ್ದ ಬಸ್ ಮತ್ತು ಕೆಮ್ಮಣ್ಣು ಗುಂಡಿಯಿಂದ ವಿಐಎಸ್ಎಲ್ಗೆ ಅದಿರು ತುಂಬಿಕೊಂಡು ಬರುತ್ತಿದ್ದ ಟಿಪ್ಪರ್ ಲಾರಿ, ರಾತ್ರಿ 8.30ರ ಸುಮಾರಿಗೆ ಮುಖಾಮುಖಿಯಾದಾಗ ಒಬ್ಬರು ಮಹಿಳೆ ಸೇರಿದಂತೆ ನಾಲ್ಕು ಮಂದಿ ಸ್ಥಳದಲ್ಲಿಯೇ ಕೊನೆಯುಸಿರೆಳೆದರು. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಮಹಿಳೆಯರು, ಆಸ್ಪತ್ರೆಗೆ ಸಾಗಿಸುವಾಗ ದಾರಿ ನಡುವೆ ಮೃತರಾದರು. ಗಾಯಗೊಂಡವರಲ್ಲಿ 10 ಮಂದಿಯ ಸ್ಥಿತಿ ಕರುಣಾಜನಕವಾಗಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತರಲ್ಲಿ ತರಿಕೆರೆಯ ಹಾದಿಗೆರೆಯ ದಾಕ್ಷಾಯಣಮ್ಮ ಅವರನ್ನು ಗುರುತಿಸಲಾಗಿದ್ದು, ಉಳಿದವರ ಗುರುತು ಸಿಕ್ಕಿಲ್ಲ. ದಾಕ್ಷಾಯಣಮ್ಮ ಅವರ ಪತಿ ಬಾಳೆ ಹೊನ್ನೂರಿನ ಪೊಲೀಸ್ ಪೇದೆ, ಚಂದ್ರಶೇಖರ್ ಕೂಡ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಟಿಪ್ಪರ್ ಚಾಲಕ ಏಸುದಾಸ್ ಅವರನ್ನು ಎಂ.ಪಿ.ಎಂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. (ಇನ್ಫೋ ವಾರ್ತೆ)