ಮತ್ತೆ ಜೀವಂತವಾಗಿದೆ ಜೀತ : ಸಾಗರದ ಬಳಿ ಐವರ ಜೀತಮುಕ್ತಿ
ಸಾಗರ : ಶ್ರೀರಂಗಪಟ್ಟಣ ಬಳಿಯ ಹಂಗರಹಳ್ಳಿ ಕಲ್ಲು ಗಣಿಯಲ್ಲಿ ಕಾಲಿಗೆ ಕಬ್ಬಿಣದ ಸರಪಳಿ ಬಿಗಿಸಿಕೊಂಡು ಜೀತದಾಳುಗಳಾಗಿ ದುಡಿಯುತ್ತಿದ್ದವರನ್ನು ಜೀತಮುಕ್ತಗೊಳಿಸಿದ ಸುದ್ದಿ ಇನ್ನೂ ಹಸಿರಾಗಿರುವಾಗಲೇ ಸಾಗರ ತಾಲೂಕಿನ ಹಸಿರುಮಕ್ಕಿಯಲ್ಲಿ ತಮಿಳು ಬೆಸ್ತ ಕುಟುಂಬಗಳಲ್ಲಿ ಜೀತಮಾಡುತ್ತಿದ್ದ ಇನ್ನೂ ಐದು ಮಕ್ಕಳನ್ನು ಶನಿವಾರ ಸಂಜೆ ಜೀತಮುಕ್ತಗೊಳಿಸಲಾಗಿದೆ.
ಹಸಿರುಮಕ್ಕಿಯ ಚಿನ್ನತಂಗವೇಲು ಎಂಬಾತನ ಬಳಿ ಜೀತಕ್ಕಿದ್ದ ತಮಿಳುನಾಡಿನ ಸೇಲಂನ ಕುಮಾರ (18), ಕಾರ್ತಿಕ (16) ಹಾಗೂ ಗಣೇಶ್ ಎಂಬುವವರಲ್ಲಿ ಜೀತಕ್ಕಿದ್ದ ಮುತ್ತುಕೃಷ್ಣ (18), ಬೆಂಗಳೂರಿನ ಮಂಜು (10), ಹಾಗೂ ರಾಮನಗರದ ಅಲ್ಲಾಭಕ್ಷ್ (13) ಎಂಬ ಬಾಲಕರನ್ನು ಜೀತಮುಕ್ತ ಗೊಳಿಸಿ, ಶಿವಮೊಗ್ಗದ ರಿಮ್ಯಾಂಡ್ ಹೋಂಗೆ ಸೇರಿಸಲಾಗಿದೆ.
ಜೀತಕ್ಕೆ ಮಕ್ಕಳನ್ನು ಇಟ್ಟುಕೊಂಡು ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ 9 ಜನರನ್ನು ಬಂಧಿಸಿಲಾಗಿದ್ದು, ಹೊಸನಗರ ತಾಲೂಕಿನ ಗೋವಿಂದ ಹಾಗೂ ಮೂರ್ತಿ ಎಂಬಿಬ್ಬರನ್ನು ಹೊಸನಗರ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಗುರುವಾರದಿಂದ ಭಾನುವಾರದವರೆಗೆ ವಿವಿಧ ವ್ಯಕ್ತಿಗಳ ಬಳಿ ಜೀತಕ್ಕಿದ್ದ ಸುಮಾರು 23 ಬಾಲಕರನ್ನು ಜೀತಮುಕ್ತಗೊಳಿಸಲಾಗಿದೆ.