ಕುಂಭಮೇಳ : ಪವಿತ್ರ ಸ್ನಾನ ಸಂದರ್ಭದಲ್ಲಿಛಾಯಾಗ್ರಹಣ ನಿಷೇಧ
ಕುಂಭ ನಗರ : ಪವಿತ್ರ ಸ್ನಾನದ ಸಂದರ್ಭದಲ್ಲಿ ಫೋಟೋ ತೆಗೆಯುವುದನ್ನು ಮಹಾ ಕುಂಭ ಮೇಳದ ಆಡಳಿತ ವಿಭಾಗವು ನಿಷೇಧಿಸಿದೆ.
ನಾಗಾಸಾಧುಗಳು ಪವಿತ್ರ ಸ್ನಾನ ಮಾಡುವ ಸಂದರ್ಭದಲ್ಲಿ ಪ್ರಾದೇಶಿಕ ಮತ್ತು ವಿದೇಶೀ ಪ್ರವಾಸಿಗಳು ಫೋಟೋ ತೆಗೆಯುವುದರಿಂದ ವಿವಾದ ಉಂಟಾಗುವುದನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮಾಧ್ಯಮ ಪ್ರತಿನಿಧಿಗಳಲ್ಲದವರೂ ಕೂಡ ನಾಗಾ ಸಾಧುಗಳ ಗುಂಪಿನೊಂದಿಗೆ ಸೇರಿಕೊಂಡು ಅಕ್ರಮವಾಗಿ ಫೋಟೋ ತೆಗೆದಿರುವುದಾಗಿ ದೂರುಗಳು ಬರಲಾರಂಭಿಸಿದಾಗ ಈ ಆಜ್ಞೆ ಹೊರಡಿಸಬೇಕಾಯಿತು ಎಂದು ಕುಂಭನಗರದಲ್ಲಿನ ಶಾಖಾಧಿಕಾರಿ ಸದಾಕಾಂತ್ ಹೇಳಿದ್ದಾರೆ.
ನಾಗಾ ಸಾಧುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಬಾರದು. ಆದ್ದರಿಂದ ಮುಂದಿನ ಸ್ನಾನದ ದಿನಗಳಲ್ಲಿ ಅಂದರೆ ಮುಖ್ಯವಾಗಿ ಜನವರಿ 24ರ ಮೌನಿ ಅಮಾವಾಸ್ಯೆಯ ದಿನದಂದು ಮಾಧ್ಯಮ ಪ್ರತಿನಿಧಿಗಳಿಗೆ ಮಾತ್ರ ಸಂಗಮ ಪ್ರದೇಶಕ್ಕೆ ಹೋಗಲು ಅವಕಾಶ ನೀಡಲಾಗುವುದು. ಮಕರ ಸಂಕ್ರಾಂತಿಯ ಪವಿತ್ರ ದಿನದಂದು ಸುಮಾರು 8 ಮಿಲಿಯನ್ ಮಂದಿ ತ್ರಿವೇಣಿ ಸಂಗಮದಲ್ಲಿ ಮಿಂದರು. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿರುವ ಬಗ್ಗೆ ವರದಿಯಾಗಿಲ್ಲ.
(ಯುಎನ್ಐ)