ಬಾಕಿ ಕಟ್ಟದ ರೈತನ ಬಂಧನ : ರೊಚ್ಚಿಗೆದ್ದ ದುರ್ಗದ ನೇಗಿಲಯೋಗಿಗಳು
ಚಿತ್ರದುರ್ಗ : ರೈತನೊಬ್ಬನಿಂದ ನಾಲ್ಕುವರೆ ಸಾವಿರ ರೂಪಾಯಿ ಬಾಕಿ ಸಾಲ ಸಂದಾಯವಾಗಿಲ್ಲ ಎಂದು ಆತನನ್ನು ಜೈಲಿಗೆ ಹಾಕಿರುವುದನ್ನು ವಿರೋಧಿಸಿ ದುರ್ಗದ ರೈತರು ಜಿಲ್ಲೆಯ ಐದು ಕಡೆ ಪ್ರತಿಭಟನೆ ನಡೆಸಿದಾಗ ಪೊಲೀಸರು 182 ಮಂದಿಯನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದರು.
ರಾಜ್ಯದಲ್ಲಿ ಪ್ರಥಮ ಬಾರಿಗೆ ರೈತರು ಏಕ ಕಾಲಕ್ಕೆ ಸಾಮೂಹಿಕ ಪ್ರತಿಭಟನೆ ನಡೆಸಿದ್ದು, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಆಶ್ರಯದಲ್ಲಿ ಇದನ್ನು ಆಯೋಜಿಸಲಾಗಿದೆ. ಚಿತ್ರದುರ್ಗ, ಚಿಕ್ಕ ಬೆನ್ನೂರು, ಮೊಳಕಾಲ್ಮೂರು ನಗರ, ಹೊಳಲ್ಕೆರೆ, ಶಿವಗಂಗಾ, ಮುತ್ತುಗದೂರು ಮತ್ತು ಚಳ್ಳಕೆರೆಯಲ್ಲಿ , ಶನಿವಾರದಂದು ರೈತರು ರಸ್ತೆ ಮೇಲೆ ಧರಣಿ ಕುಳಿತು ವಾಹನ ಸಂಚಾರ ಸ್ಥಗಿತಗೊಳಿಸಿದರು.
ಚಿಕ್ಕ ಬೆನ್ನೂರ ಗ್ರಾಮೀಣ ಬ್ಯಾಂಕಿನಿಂದ 1993ರಲ್ಲಿ 2 ಸಾವಿರ ರೂಪಾಯಿ ಸಾಲ ಪಡೆದಿದ್ದ ಬಡ ರೈತ ನರಸಿಂಹಪ್ಪ , ಬೇಡರ ಶಿವನಕೆರೆಯ ನಿವಾಸಿ. 1550 ರೂಪಾಯಿ ಸಾಲವನ್ನು ಹಿಂದೆಯೇ ತೀರಿಸಿದ್ದು, ಉಳಿದ 450 ರೂಪಾಯಿ ಬಡ್ಡಿಗೆ ಬಡ್ಡಿ ಸೇರಿ 4,636ರೂಪಾಯಿಗೇರಿದ್ದರಿಂದ ಗುರುವಾರದಂದು ಅವರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಜೈಲಿಗೆ ಕಳುಹಿಸಲಾಗಿತ್ತು.
ಈ ಘಟನೆಯಿಂದ ರೊಚ್ಚಿಗೆದ್ದ ರೈತರು ಬಂಧಿತ ರೈತನ ಬೇಷರತ್ ಬಿಡುಗಡೆಯಾಗಬೇಕು, ಜಿಲ್ಲೆಗೆ ಸಮಗ್ರ ನೀರಾವರಿ ಮತ್ತು ಕೃಷ್ಯುತ್ಪನ್ನಗಳಿಗೆ ಸರಿಯಾದ ಬೆಲೆ ಸಿಗುವವರೆಗೆ ಸಾಲ ವಸೂಲಿ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ ಲಕ್ಷಾಂತರ ರೂಪಾಯಿ ಬಾಕಿ ಉಳಿಸಿಕೊಂಡ ಪ್ರಭಾವಿಗಳನ್ನು ಬಿಟ್ಟು ಬಡ ರೈತನನ್ನು ಜೈಲಿಗೆ ಹಾಕಿರುವುದು ಅನ್ಯಾಯ ಎಂದು ಆರೋಪಿಸಿದ್ದಾರೆ.
(ಇನ್ಫೋ ವಾರ್ತೆ)