ಸುಗ್ಗಿಯ ನೆನಪಲ್ಲಿ ಹಳ್ಳಿಗನ ಮೌನ
ಇನ್ನೆರಡೇ ದಿನ ಸೂರ್ಯನ ಪಥ ಬದಲಾವಣೆಗೆ. ಈ ಬದಲಾವಣೆ ಜೀವನದ ಚಲನಶೀಲತೆಯ ಪ್ರತೀಕ. ನಿಂತಲ್ಲಿ ನಿಲಲಾರದ ಬದುಕು ಕೂಡಿಟ್ಟುಕೊಳ್ಳುವ ಅನುಭವ ಅರ್ಥಪೂರ್ಣವಾದುದು. ಆ ಹಿನ್ನೆಲೆಯಲ್ಲಿ ಸಂಕ್ರಾಂತಿ ಬದುಕಿಗೆ ಹೆಚ್ಚು ಹತ್ತಿರ ಎನ್ನಿಸುತ್ತೆ . ಅದೇನೇ ಇರಲಿ, ಹಬ್ಬಕ್ಕೆ ಇನ್ನೆರಡೇ ದಿನ ಉಳಿದಿರುವಂತೆ ಪಟ್ಟಣದ ಮಾರುಕಟ್ಟೆಗಳಲ್ಲಿ ಜನ ಜಂಗುಳಿ ಹೆಚ್ಚುತ್ತಿದ್ದರೆ, ಹಳ್ಳಿಗಳಲ್ಲಿ ಹಬ್ಬದ ಸುಳಿವೇ ಇಲ್ಲ . ಅದಕ್ಕೆ ಕಾರಣ, ಪಟ್ಟಣಿಗ- ಹಳ್ಳಿಗರ ನಡುವಣ ಆರ್ಥಿಕ ಅಂತರವೂ ಅಥವಾ ಈ ಬಾರಿ ಸುಗ್ಗಿ ಹಳ್ಳಿಗರಿಗೆ ಕೈ ಕೊಟ್ಟಿರುವುದೂ ಇದ್ದೀತು.
ಅದೇನೇ ಇರಲಿ, ಹವೆ ಮಾತ್ರ ಹಬ್ಬದ ಆಚರಣೆಗೆ ತಕ್ಕದ್ದಾಗಿದೆ. ಕಳೆದ ಕೆಲ ದಿನಗಳಿಂದ ನಡುಗಿಸುತ್ತಿದ್ದ ಚಳಿ ಉಲ್ಲನ್ ರಗ್ಗಳಲ್ಲಿ ಮುದುಡಿ ಮಲಗಿದೆ. ಮಕರ ರಾಶಿಯ ಪ್ರವೇಶಿಸುವ ಖುಷಿಯಲ್ಲಿ ಸೂರ್ಯ ಕೊಂಚ ಬಿಸಿಯಾಗಲು ತೊಡಗಿರುವ ಹಿನ್ನೆಲೆಯಲ್ಲಿ ಶುಕ್ರವಾರ ಸೆಖೆಯ ಅನುಭವವೂ ಆಗುತ್ತಿತ್ತು. ಈ ಅನುಭವ ಆಫೀಸನಲ್ಲಿರುವವರಿಗಿಂತ ರಸ್ತೆಯಲ್ಲಿರುವವರಿಗೇ ಹೆಚ್ಚು ವೇದ್ಯ.
ಹವಾಮಾನ ಇಲಾಖೆಯ ವರದಿಯನ್ನುದ್ಧರಿಸಿ, ಒಂದೇ ಮಾತಿನಲ್ಲಿ ಹೇಳುವದಾದರೆ ಶುಕ್ರವಾರ ಒಣಹವೆಯ ಮಾಮೂಲಿನ ದಿನ. ರಾಜ್ಯಾದ್ಯಂತ ದಿನದ ಉಷ್ಣಾಂಶದಲ್ಲಿ ಗಮನಾರ್ಹ ಏರಿಳಿತಗಳೇನೂ ಇರಲಿಲ್ಲ . ಕರಾವಳಿಯ ಕೆಲವು ಪ್ರದೇಶಗಳಲ್ಲಿ ದಿನದ ತಾಪಮಾನ ನಿನ್ನೆಗಿಂತ ತುಸು ಕೆಳಮುಖವಾಗಿತ್ತು . ದಕ್ಷಿಣ ಹಾಗೂ ಉತ್ತರ ಕರ್ನಾಟಕದ ಒಳನಾಡಿನಲ್ಲಿ ಮಾತ್ರ ತಾಪಮಾನ ಸ್ಥಿರವಾಗಿತ್ತು .
ಅಪರೂಪಕ್ಕೆ ದಿನದ ಕನಿಷ್ಠ ತಾಪಮಾನದ ವಿಷಯದಲ್ಲಿ ಬಾಗಲಕೋಟೆ ಸುದ್ದಿಯಲ್ಲಿದೆ. ಅಲ್ಲಿ 14.5 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲಾಗಿತ್ತು . ಇನ್ನು ಒಣಹವೆಯ ಮುಂಜಾನೆಯನ್ನು ಶನಿವಾರವೂ ಕಾಣುತ್ತೀರೆಂದು ಹವಾಮಾನ ಇಲಾಖೆ ಹೇಳಿದೆ. ಬೆಂಗಳೂರಿನ ಆಕಾಶ ಶುಭ್ರವಾಗಿರುತ್ತೆ . ನೀವು ನಿರಾತಂಕದಿಂದ ಬೀದಿಗಿಳಿಯಲು ಅಡ್ಡಿಯಿಲ್ಲ .
ಮುಖಪುಟ / ಹವಾ ಹವಾ |