Get Updates
Get notified of breaking news, exclusive insights, and must-see stories!

ಏನನ್ನಾದರೂ, ಯಾವುದನ್ನಾದರೂ ಮಾಡಬಲ್ಲಿರಿ, ನೀವು ಸರ್ವಶಕ್ತರು

ಸ್ವಾಮಿ ವಿವೇಕಾನಂದರು, ಕೇವಲ ವ್ಯಕ್ತಿಯಲ್ಲ. ಶಕ್ತಿ. ಅವರು ಒರ್ವ ಪರಿಪೂರ್ಣವ್ಯಕ್ತಿ. ಅವರಲ್ಲಿ ಬಾಲಕನ ಸರಳತೆ ಇತ್ತು, ಯೌವನದ ನವೋತ್ಸಾಹ ಇತ್ತು. ವಯೋವೃದ್ಧರಿಗಷ್ಟೇ ದೊರಕಲು ಸಾಧ್ಯವಾದ ಮಾಗಿದ ಅನುಭವವಿತ್ತು. ತಾಯಿಯ ಮೃದು ಹೃದಯ ಅವರದಾಗಿತ್ತು, ವೀರ ಯೋಧನ ಶೌರ್ಯ ಅವರಲ್ಲಿ ಅಡಗಿತ್ತು. ಸ್ವಾಮಿ ವಿವೇಕಾನಂದರನ್ನು ವರ್ಣಿಸುತ್ತಾ ನಮ್ಮ ಗುರುಗಳು ಹೇಳುತ್ತಿದ್ದ ಮಾತಿದು.

ಜ್ಞಾನ, ವೈರಾಗ್ಯ, ತತ್ವ, ಶಾಸ್ತ್ರ, ಮನಶ್ಶಾಸ್ತ್ರ, ಸಾಹಿತ್ಯ, ಕಲೆ ಎಲ್ಲಕ್ಕಿಂತಲೂ ಮಿಗಿಲಾಗಿ ಅಪ್ರತಿಮ ವಾಕ್‌ಪ್ರತಿಭೆ ಇತ್ತು. ತತ್ವಜ್ಞಾನಿಯ ವಿಚಾರ ಶಕ್ತಿ ಅಡಗಿತ್ತು. ವಿಶ್ವಚೇತನ ಸ್ವರೂಪರಾದ ವಿವೇಕಾನಂದರನ್ನು ವರ್ಣಿಸುವುದು ಶ್ರೀಸಾಮಾನ್ಯನ ಕೈಲಿ ಸಾಧ್ಯವೇ ಇಲ್ಲ ಎನ್ನುತ್ತಿದ್ದ ಗುರುಗಳ ಮಾತು ಅಕ್ಷರಶಃ ಸತ್ಯ ಎನ್ನಿಸುತ್ತದೆ. ಅವರ ಆ ಗಂಭೀರ ನಿಲವು, ಪಾಂಡಿತ್ಯ ವಿಶ್ವವೇ ಭಾರತೀಯತೆಗೆ ತಲೆಬಾಗುವಂತೆ ಮಾಡಿತ್ತು.

1983ರ ಸೆಪ್ಟೆಂಬರ್‌ 11ನೇ ತಾರೀಖು. ಸಮಯ ಬೆಳಗ್ಗೆ 11 ಗಂಟೆ. ಅಮೆರಿಕದ ಚಿಕಾಗೋ ನಗರದಲ್ಲಿ ಕರತಾಡನದ ಸದ್ದು ಮುಗಿಲು ಮುಟ್ಟಿತ್ತು. ಅಲ್ಲಿ ನಡೆಯುತ್ತಿದ್ದ ವಿಶ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಎಲ್ಲ ಪ್ರೇಕ್ಷಕರ ನರನಾಡಿಗಳಲ್ಲಿ ಸೋದರತ್ವದ ನವಚೈತನ್ಯ ಚಿಗುರೊಡೆದಿತ್ತು. ಮನಸ್ಸು ತಡೆಯಲಾರದ ಸಂತಸದಿಂದ ತುಡಿಯುತ್ತಿತ್ತು. ವರ್ಣನಾತೀತವಾದ ಅಮಿತಾನಂದ ಪ್ರೇಕ್ಷಕರೆಲ್ಲರನ್ನೂ ಮೂಕ ವಿಸ್ಮಿತರನ್ನಾಗಿಸಿತ್ತು.

ಅಂತಹ ಅಭೂತ ಪೂರ್ವ ಘಟನೆ ಅಲ್ಲಿ ನಡೆದಿದ್ದಾದರೂ ಏನು?

ವಿವೇಕ ವಾಣಿಯ ಮೋಡಿ. ಭಾರತದ ಸನಾತನ ಧರ್ಮವನ್ನು ಪ್ರತಿನಿಧಿಸಿ ಮಾತನಾಡಿದ ಸ್ವಾಮಿ ವಿವೇಕಾನಂದರ ಮೊದಲ ಮೂರು ವಾಕ್ಯಗಳೇ ಈ ವರ್ಣನಾತೀತ, ಅಮಿತಾನಂದಕ್ಕೆ ಕಾರಣವಾಗಿತ್ತು. ಕೆಂಪು ಪೇಟವ ತೊಟ್ಟು, ಕಾವಿ ಬಟ್ಟೆಯ ನುಟ್ಟು, ಕೈಕಟ್ಟಿ ಗಂಭೀರ ಭಂಗಿಯಲ್ಲಿ ನಿಂತು ನನ್ನ ಪ್ರೀತಿಯ ಅಮೆರಿಕನ್‌ ಸೋದರ, ಸೋದರಿಯರೇ.... ಎಂದು ಆ ವೀರ ಸನ್ಯಾಸಿ ಉಣಬಡಿಸಿದ ಸೋದರ ಪ್ರೇಮದ ವಾಕ್‌ಸುಧೆ ಎಲ್ಲರ ಆಂತರ್ಯವನ್ನೂ ತಟ್ಟಿ ಎಬ್ಬಿಸಿತ್ತು. ಹರ್ಷೋದ್ಗಾರ ಮುಗಿಲು ಮುಟ್ಟಿತು. ಸಭಿಕರನ್ನು ಶಾಂತಿಗೊಳಿಸಲು ಸಭಾಧ್ಯಕ್ಷರಾಗಿದ್ದ ಚಾರ್ಲ್ಸ್‌ಬಾನ್‌ ಪರದಾಡಬೇಕಾಯಿತು.

ಶಾಂತವಾದ ಸಭೆಯಲ್ಲಿ ತಮ್ಮ ಕಂಚಿನ ಕಂಠದಿಂದ ಭಾರತದ ಸನಾತನ ಧರ್ಮದ ಹಿರಿಮೆಯನ್ನು ಸಾರಿದ ವಿವೇಕಾನಂದರ ಏಳಿ ಎದ್ದೇಳಿ, ಗುರಿಮುಟ್ಟುವ ತನಕ ನಿಲ್ಲದಿರಿ ಎಂಬ ಆತ್ಮ ವಿಶ್ವಾಸಕ್ಕೆ ನವಚೈತನ್ಯ ನೀಡುವ ಧೀರವಾಣಿ ಇಂದು ಮನೆಮಾತು. 1868ರ ಜನವರಿ 12ರಂದು ನರೇಂದ್ರರಾಗಿ ಜನಿಸಿದ ಈ ತೇಜೋಮೂರ್ತಿ ಇಹಲೋಕವನ್ನು ತ್ಯಜಿಸಿದ್ದು 1902ರ ಜೂನ್‌ 4ರಂದು. ಈ 32 ವರ್ಷಗಳ ಅಲ್ಪಾವಧಿಯಲ್ಲೇ ವಿಶ್ವಪರ್ಯಟನೆ ಮಾಡಿ, ಯುವಜನರಲ್ಲಿ ಚೈತನ್ಯ ತುಂಬಿದ, ವಿಶ್ವಕ್ಕೇ ಭಾರತದ ಹಿರಿಮೆಯನ್ನು ಸಾರಿದ ಮಹಿಮಾನ್ವಿತನ ಕೆಲವು ಅನಿಸಿಕೆಗಳಿವು:

  1. ಇದೊಂದು ದೊಡ್ಡ ಸತ್ಯ. ಶಕ್ತಿಯೇ ಜೀವನ, ದುರ್ಬಲತೆಯೇ ಮರಣ. ಶಕ್ತಿಯೇ ಪರಮಾನಂದ, ಅಖಂಡ ಜೀವನದ ಅಮರತ್ವ. ದುರ್ಬಲತೆಯೇ ಅನವರತ ದುಃಖ, ತಳಮಳ, ದುರ್ಬಲತೆಯೇ ಮರಣ. (ಸ್ವಾ.ವಿ.ಕೃ.ಶ್ರೇಣಿ)
  2. ಯಾರಿಗೆ ಆತ್ಮ ವಿಶ್ವಾಸ ಇಲ್ಲವೋ ಅವನು ನಾಸ್ತಿಕ. (ಸ್ವಾಮಿ ವಿವೇಕಾನಂದ ಕೃತಿ ಶ್ರೇಣಿ)
  3. ಇಲ್ಲ. ಸಾಧ್ಯವೇ ಇಲ್ಲ ಎಂದು ಹೇಳಬೇಡಿ. ಏಕೆಂದರೆ ನಾವು ಅನಾದಿ, ಅನಂತರು. ನಿಮ್ಮ ಸಹಜಸ್ವಭಾವದೊಂದಿಗೆ ಹೋಲಿಸಿದರೆ ಕಾಲದೇಶಗಳೂ ಗಣನೆಗೆ ಬರುವುದಿಲ್ಲ. ನೀವು ಏನನ್ನಾದರೂ, ಯಾವುದನ್ನಾದರೂ ಮಾಡಬಲ್ಲಿರಿ. ನೀವು ಸರ್ವಶಕ್ತರು (ಸ್ವಾ.ವಿ.ಕೃ.ಶ್ರೇಣಿ)
  4. ದೌರ್ಬಲ್ಯಕ್ಕೆ ಪರಿಹಾರ ದೌರ್ಬಲ್ಯವನ್ನು ಕುರಿತು ಆಲೋಚಿಸುವುದಲ್ಲ. ಬದಲಿಗೆ ಶಕ್ತಿಯನ್ನು ಕುರಿತು ವಿಚಾರ ಮಾಡುವುದು ಒಳಿತು. ಜನರಿಗೆ ಆಗಲೇ ಅವರಲ್ಲಿರುವ ಸುಪ್ತ ಶಕ್ತಿಯ ಅರಿವಾಗುವುದು. (ಸ್ವಾ.ವಿ.ಕೃ.ಶ್ರೇಣಿ)
  5. ಅಜ್ಞಾನಾಂದಕಾರದಲ್ಲಿ ತೊಳಲುವುದಕ್ಕಿಂತ ಸಾವೇ ಲೇಸು. ಸೋಲನ್ನು ಒಪ್ಪಿಕೊಂಡು ಬಾಳುವುದಕ್ಕಿಂತ ಸಮರದಲ್ಲಿ ಸಾಯುವುದೇ ಉತ್ತಮ. (ಸ್ವಾ.ವಿ.ಕೃ.ಶ್ರೇಣಿ)
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+