ಸಂಕ್ರಾಂತಿಯ ಕೊಡುಗೆ : ಇಳಿಜೀವಗಳಿಗೆ ಸರ್ಕಾರದ ‘ಅನ್ನಪೂರ್ಣ’
ಹೈದರಾಬಾದ್ : ದೇಶದ 80 ಲಕ್ಷಕ್ಕೂ ಹೆಚ್ಚು ಮಂದಿಗೆ ಅನುಕೂಲ ಮಾಡಿಕೊಡಲು 610 ಕೋಟಿ ರುಪಾಯಿ ವೆಚ್ಚದ ವಿಸ್ತುತ ಅನ್ನಪೂರ್ಣ ಆಹಾರ ಭದ್ರತಾ ಯೋಜನೆಯನ್ನು ಕೇಂದ್ರ ಸರ್ಕಾರ ಜನವರಿ 14ರಂದು ಜಾರಿಗೆ ತರಲಿದೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಶುಕ್ರವಾರ ಪ್ರಕಟಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಸಚಿವರು, ಕಳೆದ ಏಪ್ರಿಲ್ನಲ್ಲಿ 100 ಕೋಟಿ ರುಪಾಯಿ ಕೇಂದ್ರ ಸರ್ಕಾರದ ನೆರವಿನಲ್ಲಿ ಜಾರಿಗೆ ಬಂದ ಈ ಯೋಜನೆಯು ವೃದ್ಧಾಪ್ಯ ಪಿಂಚಣಿ ಮೂಲಕ 14 ಲಕ್ಷ ಹಿರಿಯ ನಾಗರಿಕರಿಗೆ ಉಪಯೋಗವಾಗಿದೆ. ಪ್ರಧಾನಿ ವಾಜಪೇಯಿ ಅವರ ಆದೇಶದ ಮೇರೆಗೆ ಈಗ ಇದೇ ಯೋಜನೆಯನ್ನು ವಿಸ್ತರಿಸಿದ್ದು, ಇನ್ನಷ್ಟು ಹಿರೀಕರ ಹೊಟ್ಟೆ ಸಮಸ್ಯೆ ಬಗೆಹರಿಯಲಿದೆ ಎಂದು ನಾಯ್ಡು ಹೇಳಿದರು.
ಈ ಯೋಜನೆಯ ಲಾಭವನ್ನು ಇನ್ನೂ 68 ಲಕ್ಷ ಹಿರಿಯ ನಾಗರಿಕರಿಗೆ ದಕ್ಕಿಸುವ ಉದ್ದೇಶದಿಂದ ಸರ್ಕಾರ ಕೊಡುತ್ತಿರುವ ಸಂಕ್ರಾಂತಿಯ ಕೊಡುಗೆ ಇದು. ಈ ಯೋಜನೆಯಡಿಯಲ್ಲಿ ಜೀವನಕ್ಕೆ ಯಾವುದೇ ದುಡಿಮೆಯಿಲ್ಲದ 65 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರಿಗೆ ಪ್ರತಿ ತಿಂಗಳು 10 ಕೆ.ಜಿ. ಅಕ್ಕಿ ಅಥವಾ ಗೋಧಿ (ಆಯಾ ಪ್ರದೇಶಕ್ಕೆ ಅನುಗುಣವಾಗಿ) ವಿತರಿಸಲಾಗುವುದು ಎಂದರು.
ಅಂತ್ಯೋದಯ ಅನ್ನ ಯೋಜನೆ : ಕೇಂದ್ರದ 2300 ಕೋಟಿ ರುಪಾಯಿ ನೆರವಿನಲ್ಲಿ ಕಡುಬಡವರಿಗೆ ರಿಯಾಯಿತಿ ದರದಲ್ಲಿ ಆಹಾರ ಧಾನ್ಯ ಒದಗಿಸಲು ಅಂತ್ಯೋದಯ ಅನ್ನ ಯೋಜನೆಯನ್ನು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯ ಸದ್ಯದಲ್ಲೇ ಜಾರಿಗೆ ತರಲಿದೆ. ಈ ಯೋಜನೆಯಲ್ಲಿ ಪ್ರತಿ ಅರ್ಹ ಕುಟುಂಬಕ್ಕೆ ತಿಂಗಳಿಗೆ 25 ಕೆ.ಜಿ. ಆಹಾರ ಧಾನ್ಯವನ್ನು ರಿಯಾಯಿತಿ ದರದಲ್ಲಿ (ಕೆ.ಜಿ. ಅಕ್ಕಿಗೆ 3 ರುಪಾಯಿ, ಕೆ.ಜಿ. ಗೋಧಿಗೆ 2 ರುಪಾಯಿ) ಪೂರೈಸಲಾಗುವುದು ಎಂದು ವೆಂಕ--ಯ್ಯ-ನಾ-ಯ್ಡು ತಿಳಿಸಿದರು.
(ಯುಎನ್ಐ)