ಕಪಿಲ್ ಮಾಧವನ್ಗೆ ಕಳ್ಳಾಟದ ಇನ್ನಷ್ಟು ವಿಷಯ ಹೇಳಿದ್ದಾರೆ
ನವದೆಹಲಿ : ಬುಧವಾರ ಬಿಸಿಸಿಐನ ಭ್ರಷ್ಟಾಚಾರಿ ವಿರೋಧಿ ದಳದ ವಿಶೇಷ ಆಯುಕ್ತ ಕೆ.ಮಾಧವನ್ ಅವರಿಂದ ವಿಚಾರಣೆಗೊಳಗಾದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್, ಈ ಹಿಂದೆ ಹೇಳದಿದ್ದ ಕೆಲವು ಮಾಹಿತಿಗಳನ್ನು ಕೊಟ್ಟಿದ್ದಾರೆ.
ಕಪಿಲ್ ವಿಚಾರಣೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡ್ತುತಿದ್ದ ಮಾಧವನ್ ಈ ವಿಷಯ ತಿಳಿಸಿದ್ದಾರೆ. ಕಪಿಲ್ ನನಗೆ ಕೆಲ ಹೊಸ ವಿಷಯಗಳನ್ನು ಹೇಳಿದ್ದಾರೆ. ಅಲ್ಲದೆ ಸರ್ಕಾರದ ವರದಿಯಲ್ಲಿ ಏನೇನು ಉಲ್ಲೇಖಿತವಾಗಿದೆಯೋ ಆ ವಿಚಾರಗಳಲ್ಲಿ ಕೆಲ ತಿದ್ದುಪಡಿಯನ್ನೂ ಸೂಚಿಸಿದ್ದಾರೆ ಎಂದರು.
ಆ ಹೊಸ ಹೇಳಿಕೆಗಳೇನು ಎಂಬ ಪ್ರಶ್ನೆಗೆ, ಇಲ್ಲ. ಈಗಲೇ ಅವುಗಳನ್ನು ಹೇಳಲಾರೆ ಎಂದು ಮುಗುಮ್ಮಾಗಿ ನುಣುಚಿಕೊಂಡರು.
ತನಗೆ ಕಳಪೆ ಆಟ ಆಡಲು ಕಪಿಲ್ ಹಣದ ಹೂರಣ ಕೊಡಮಾಡಿದ್ದರು ಎಂದು ಮನೋಜ್ ಪ್ರಭಾಕರ್ ಜಗಜ್ಜಾಹೀರು ಮಾಡಿದ್ದರು. ಈ ಆರೋಪದ ಒತ್ತಡದಲ್ಲೇ ಅತ್ತು ಕರೆದ ಭಾವುಕ ಕಪಿಲ್, ಭಾರತ ಕ್ರಿಕೆಟ್ ತಂಡದ ತಮ್ಮ ಕೋಚ್ ಪದಕ್ಕೆ ನಮಸ್ಕಾರ ಹೇಳಿದ್ದರು. ಸಿಬಿಐ ವರದಿಯಲ್ಲೂ ಕಪಿಲ್ ತಪ್ಪಿತಸ್ಥರೆಂಬ ಯಾವ ಹೇಳಿಕೆಯೂ ಇರಲಿಲ್ಲ.
ನಿಖಿಲ್ ಚೋಪ್ರ ಹಾಗೂ ಕಪಿಲ್ ಮೇಲಿರುವ ಆರೋಪಗಳು ಇನ್ನೂ ಹೊಗೆಯಾಡುತ್ತಿರುವುದರಿಂದ ಬಿಸಿಸಿಐ ಮಾಧವನ್ ಅವರಿಗೆ ಮತ್ತೊಮ್ಮೆ ಕಪಿಲ್ ಹಾಗೂ ವಾಡೇಕರ್ ವಿಚಾರಣೆ ನಡೆಸುವಂತೆ ಸೂಚಿಸಿತ್ತು. ಈ ವಾರಾಂತ್ಯದಲ್ಲಿ ಮಾಧವನ್ ಬಿಸಿಸಿಐಗೆ ಕಪಿಲ್ ಹಾಗೂ ವಾಡೇಕರ್ ವಿಚಾರೆಯ ತಿರುಳಿನ ವರದಿಯನ್ನು ಕೊಡಲಿದ್ದಾರೆ.
(ಇನ್ಫೋ ವಾರ್ತೆ)