ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಉನ್ನತ ಶಿಕ್ಷಣ, ವೃತ್ತಿಯಲ್ಲಿ ಆದ್ಯತೆ
ಬೆಂಗಳೂರು : ಒಂದರಿಂದ ಹತ್ತನೇ ಇಯತ್ತೆವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ವೃತ್ತಿ ಹಾಗೂ ಉನ್ನತ ಶಿಕ್ಷಣದಲ್ಲಿ ಆದ್ಯತೆ ಕೊಡುವ ಆದೇಶವನ್ನು ತಕ್ಷಣ ಹೊರಡಿಸಬೇಕೆಂದು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮುಖ್ಯಕಾರ್ಯದರ್ಶಿಗಳಿಗೆ ಬುಧವಾರ ತಿಳಿಸಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪುರಭವನದಲ್ಲಿ ಆಯೋಜಿಸಿದ್ದ ಧಾರ್ಮಿಕ ಮತ್ತು ಭಾಷಾ ಅಲ್ಪ ಸಂಖ್ಯಾತರಿಗೆ ಕನ್ನಡ ಕಲಿಕೆ ಯೋಜನೆಯನ್ನು ಉದ್ಘಾಟಿಸಿ ಅವರು ಮಾತಾಡುತ್ತಿದ್ದರು. ರಾಜ್ಯದಲ್ಲಿನ ಉರ್ದು ಶಾಲೆಗಳಿಗೆ ಗುತ್ತಿಗೆ ಆಧಾರದ ಮೇಲೆ ಕನ್ನಡ ಅಧ್ಯಾಪಕರನ್ನು ನೇಮಿಸಬೇಕು. ಉನ್ನತ ಶಿಕ್ಷಣ ಹಾಗೂ ವೃತ್ತಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಆದ್ಯತೆ ಕೊಡಬೇಕು. ಈ ಎರಡೂ ಆದೇಶಗಳನ್ನು ರಾಜ್ಯ ಮುಖ್ಯ ಕಾರ್ಯದರ್ಶಿಯವರಿಗೆ ಈ ಸಭೆಯಲ್ಲೇ ನೀಡುತ್ತಿದ್ದೇನೆ ಎಂದರು.
ಈ ಎರಡೂ ಪ್ರಕಟಣೆಗಳಿಂದ ಕನ್ನಡ ಕಲಿಕೆಗೆ ರಾಜ್ಯದಲ್ಲಿ ಒತ್ತು ಸಿಕ್ಕಂತಾಗುತ್ತದೆ. ಬೋಧಿಸುವವರೇ ಇಲ್ಲದಿದ್ದಲ್ಲಿ ಕನ್ನಡ ಕಲಿಯಲು ಹೇಗೆ ಸಾಧ್ಯ? ಕೇವಲ ಸುತ್ತೋಲೆಗಳಿಂದ ಕನ್ನಡ ಭಾಷೆ ಮೇಲೆತ್ತಲು ಸಾಧ್ಯವಿಲ್ಲ ಇದಕ್ಕೆ ಜನರ ಸಹಕಾರ ಅತಿ ಮುಖ್ಯ ಎಂದು ಕೃಷ್ಣ ಅಭಿಪ್ರಾಯ ಪಟ್ಟರು.
ಸರ್ಕಾರ ಈವರೆಗೂ ಕನ್ನಡ ಭಾಷೆ ಬಳಸುವಂತೆ 250 ಸುತ್ತೋಲೆಗಳನ್ನು ಹೊರಡಿಸಿದೆ. ಆದರೆ ಅವೆಲ್ಲಾ ಅನುಷ್ಠಾನಕ್ಕೆ ಬರುತ್ತಿವೆಯೇ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಪ್ರಶ್ನಿಸಿದರು.
ಇದೇ ಸಮಾರಂಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಯೋಜನೆಗಳ ಕೈಪಿಡಿಯನ್ನೂ ಮುಖ್ಯಮಂತ್ರಿ ಕೃಷ್ಣ ಬಿಡುಗಡೆ ಮಾಡಿದರು.
(ಇನ್ಫೋ ವಾರ್ತೆ)