ಪ್ರಶಸ್ತಿ ಕಿತ್ತುಕೊಳ್ಳುವ ಮುನ್ನ ಆರೋಪ ರುಜುವಾತು ಪಡಿಸಿ
ನವದೆಹಲಿ : ಅರ್ಜುನ ಪ್ರಶಸ್ತಿಯನ್ನು ಹಿಂದಿರುಗಿಸಲು ನಾನು ಸಿದ್ಧನಾಗಿದ್ದೇನೆ. ಅದಕ್ಕೂ ಮುನ್ನ ನನ್ನ ಮೇಲಿನ ಆರೋಪವನ್ನು ರುಜುವಾತು ಪಡಿಸಿ ಎಂದು ಮ್ಯಾಚ್ಫಿಕ್ಸಿಂಗ್ ಹಗರಣದಲ್ಲಿ ಸಿಬಿಐ ಹೆಸರಿಸಿರುವ ಮಾಜಿ ಕ್ರಿಕೆಟ್ ತಾರೆ ಮನೋಜ್ ಪ್ರಭಾಕರ್ ಕೇಂದ್ರ ಸರ್ಕಾರಕ್ಕೆ ಸವಾಲೆಸೆದಿದ್ದಾರೆ.
ಅರ್ಜುನ ಪ್ರಶಸ್ತಿ ವಾಪಸ್ಸು ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಸೋಮವಾರ ಕ್ರೀಡಾ ಸಚಿವಾಲಯದೆದುರು ಹಾಜರಾಗಲು ನಿರಾಕರಿಸಿದ ಮನೋಜ್, ಮೊದಲು ಆರೋಪ ರುಜುವಾತು ಪಡಿಸಲಿ, ಆನಂತರ ಪ್ರಶಸ್ತಿ ವಾಪಸ್ಸು ಮಾಡುತ್ತೇನೆ ಎಂದು ಸುದ್ದಿಸಂಸ್ಥೆಯಾಂದಕ್ಕೆ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ನಡವಳಿಕೆ ನನಗೆ ಅರ್ಥವಾಗುತ್ತಿಲ್ಲ . ಅವರು ಕೇವಲ ಅರ್ಜುನ ಪ್ರಶಸ್ತಿಯ ಬಗ್ಗೆ ಮಾತನಾಡುತ್ತಿದ್ದಾರೆ. ಮ್ಯಾಚ್ಫಿಕ್ಸಿಂಗ್ ಹಗರಣದಲ್ಲಿ ಸಿಬಿಐ ಹೆಸರಿಸಿರುವ ಕೆಲವು ಆಟಗಾರರಿಗೆ ನೀಡಿರುವ ಪದ್ಮ ಶ್ರೀ ಮತ್ತು ಪದ್ಮ ಭೂಷಣ ಪ್ರಶಸ್ತಿಗಳ ಬಗ್ಗೆ ಏನು ಮಾಡುತ್ತಾರೆ ಎಂದು ಆಟಗಾರರ ಹೆಸರು ಹೇಳದೆಯೇ ಪ್ರಭಾಕರ್ ಪ್ರಶ್ನಿಸಿದ್ದಾರೆ. ಕೇಂದ್ರ ಸರ್ಕಾರ ಅಜರುದ್ದೀನ್ರಿಗೆ ಪದ್ಮಶ್ರೀ ಹಾಗೂ ಕಪಿಲ್ದೇವ್ರಿಗೆ ಪದ್ಮ ಭೂಷಣ ಪ್ರಶಸ್ತಿ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.
(ಇನ್ಫೋ ವಾರ್ತೆ)