ಬೆಂಗಳೂರು ಸ್ವಚ್ಛಗೊಳಿಸಲು ಪಾಲಿಕೆಗೆ ಮುಖ್ಯಮಂತ್ರಿ ಗಡುವು
ಬೆಂಗಳೂರು : ನಗರವನ್ನು ಕಸರಹಿತ ಹಾಗೂ ಇಲ್ಲಿನ ಗೋಡೆಗಳನ್ನು ಚೀಟಿರಹಿತವನ್ನಾಗಿಸಲು ಬೆಂಗಳೂರು ಮಹಾನಗರ ಪಾಲಿಕೆಗೆ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಈ ತಿಂಗಳ ಗಡುವನ್ನು ಕೊಟ್ಟಿದ್ದಾರೆ.
ತಮ್ಮ ದೇಹಸ್ಥಿತಿ ಸರಿಯಿಲ್ಲದ ಕಾರಣ ದೆಹಲಿ ಪ್ರವಾಸ ರದ್ದು ಪಡಿಸಿದ ಮುಖ್ಯಮಂತ್ರಿ ಕೃಷ್ಣ ಸ್ವಚ್ಛ ಬೆಂಗಳೂರು ಕಾರ್ಯಕ್ರಮದ ಎರಡನೇ ಕಂತಿನ ರೂಪುರೇಷೆಗಳನ್ನು ಪಾಲಿಕೆ ಅಧಿಕಾರಿಗೊಳೊಂದಿಗೆ ಮಂಗಳವಾರ ಪರಿಶೀಲಿಸಿದರು. ಮುಖ್ಯಮಂತ್ರಿಗಳ ಸಚಿವಾಲಯ ಬಿಡುಗಡೆ ಮಾಡಿದ ಮಾಧ್ಯಮ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಲಾಗಿದೆ.
ಗೋಡೆ ಮೇಲೆ ಅಂಟಿಸಿರುವ ಚೀಟಿಗಳು- ಬರೆದಿರುವ ಬರಹಗಳನ್ನು ಅಳಿಸಿ, ಬ್ಯಾನರ್ಗಳನ್ನು ಕಿತ್ತೆಸೆದು, ಎಲ್ಲೂ ಕಸ ಕಾಣದಂತೆ ಜನವರಿ ತಿಂಗಳೊಳಗೆ ಮಾಡುವಂತೆ ಪಾಲಿಕೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಕೃಷ್ಣ ಆದೇಶಿಸಿದ್ದಾರೆ. ಬೆಳ್ಳಂದೂರು, ಅಲಸೂರು, ನಾಗವಾರ, ಯಡಿಯೂರು ಮತ್ತು ಕೆಂಪಾಂಬುಧಿ ಕೆರೆಗಳ ಅಭಿವೃದ್ಧಿಗೂ ಸಣ್ಣ ನೀರಾವರಿ ಇಲಾಖೆಯಾಂದಿಗೆ ಗಮನ ಹರಿಸುವಂತೆ ಸೂಚಿಸಿದ್ದಾರೆ.
ಜನ ಹಾಗೂ ಮಾಧ್ಯಮಗಳು ಹೇಳಿದ್ದನ್ನು ಪಾಲಿಕೆ ಗಂಭೀರವಾಗಿ ಪರಿಗಣಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದ ಕೃಷ್ಣ , ಬೆಂಗಳೂರು ಕಾರ್ಯ ಪಡೆಯ ಕೆಲಸವನ್ನು ಶ್ಲಾಘಿಸಿದ್ದಾರೆ. ಅದರ ಸಲಹೆಗಳನ್ನು ಅಧಿಕಾರಿಗಳು ಆಚರಣೆಗೆ ತರಬೇಕಷ್ಟೆ. ಪಾಲಿಕೆಯ ಶಾಲೆ ಹಾಗೂ ಆಸ್ಪತ್ರೆಗಳನ್ನು ಅಭಿವೃದ್ಧಿ ಪಡಿಸಲು ಖಾಸಗಿಯವರನ್ನೂ ತೊಡಗಿಸಿಕೊಳ್ಳಬೇಕು ಎಂದಿದ್ದಾರೆ.
(ಯುಎನ್ಐ)