ಪ್ರತಿಭಟನೆ : ವಿಜಾಪುರದಲ್ಲಿ ಒಂದು ಟೆಂಪೋ ಟೊಮೊಟೋ ರಸ್ತೆಗೆ
ವಿಜಾಪುರ : ಇದುವರೆಗೂ ಭತ್ತ- ಜೋಳ ಬೆಳೆದ ರೈತ ರಸ್ತೆಗಿಳಿದಿದ್ದಾಯಿತು. ಈಗ ಟೊಮೊಟೋ ಬೆಳೆದವರ ಪಾಡೂ ಅದೇ ಆಗಿದ್ದು, ಹತ್ತಿರಾಗುತ್ತಿರುವ ಸುಗ್ಗಿಯ ದಿನಗಳ ಸವಿ ರೈತನಿಗೇ ಎಳ್ಳಷ್ಟೂ ಸಿಗದಂತಾಗಿದೆ.
ಜಿಲ್ಲೆಯ ಮದಭಾವಿ, ಐನಾಪುರ, ಬುರಣಾಪುರ, ಇಂಚಗೇರಿ, ಅಲಿಯಾಬಾದ್ಗಳಿಂದ ಟೊಮೊಟೋ ಬೆಳೆದು ಕೃಷಿ ಮಾರುಕಟ್ಟೆಗೆ ತರುವ ರೈತನಿಗೆ ಒಂದು ಬೀಡಿಗಾಗುವಷ್ಟೂ ಲಾಭ ಸಿಗುತ್ತಿಲ್ಲ. ಕಳೆದೊಂದು ತಿಂಗಳ ಈ ಸಮಸ್ಯೆ ಭಾನುವಾರ ಮದಭಾವಿಯ ರೈತರನ್ನು ರೊಚ್ಚಿಗೆಬ್ಬಿಸಿದೆ. ಒಂದು ಟೆಂಪೋ ತುಂಬಾ ತುಂಬಿ ತಂದ ಟೊಮೊಟೋಗಳನ್ನೆಲ್ಲಾ ರಸ್ತೆಗೆ ಸುರಿದು, ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಲಿ ಎಂದು ಪ್ರತಿಭಟನೆ ಸೂಚಿಸಿದ್ದಾರೆ.
ಹತ್ತು ಕಿಲೋ ಟೊಮೊಟೊ ಮಂಕರಿ ಕಳೆದೊಂದು ತಿಂಗಳಿಂದ 3 ರಿಂದ 4 ರುಪಾಯಿಗೆ ಬಿಕರಿಯಾಗುತ್ತಿದೆ. ಬೆಳೆದೂರಿಂದ ಮಾರುಕಟ್ಟೆಗೆ ಟೆಂಪೋ ಹತ್ತಿದರೆ, ಟೆಂಪೋದವ ಒಂದು ಮಂಕರಿ ಟೊಮೊಟೋಗೆ 3.50 ರುಪಾಯಿ ವಸೂಲು ಮಾಡುತ್ತಾನೆ. ಟೆಂಪೋದಿಂದ ಮಾಲನ್ನು ಇಳಿಸುವವನಿಗೆ ಒಂದು ಮಂಕರಿಗೆ 50 ಪೈಸೆ ಕೊಡಬೇಕು. ಅಲ್ಲಿಗೆ ರೈತ ಬಂದ ದಾರಿಗೆ ಸುಂಕವಿಲ್ಲ.
ಈಗ ಹತಾಶೆ ಪರಾಕಾಷ್ಠೆಗೆ ತಲುಪಿದೆ. ರೈತರು ಟೊಮೊಟೋವನ್ನು ತಿಪ್ಪೆಗೆ ಬಿಸುಟಿದ್ದಾರೆ. ಮೋರಿಗೆ ಚೆಲ್ಲಿದ್ದಾರೆ. ಪ್ರತಿಭಟನೆಯ ಸಂಕೇತವಾಗಿ ಒಂದು ಟೆಂಪೋ ಟೊಮೊಟೋವನ್ನು ಎಪಿಎಂಸಿ ಯಾರ್ಡ್ನಲ್ಲಿ ರಸ್ತೆಗೆ ಸುರಿದಿದ್ದಾರೆ. ಸರ್ಕಾರದ ಮಂದಿ ಬಂದು ತಮಗೆ ನ್ಯಾಯ ಕೊಡಿಸಲಿ ಎಂಬುದೇ ಈ ರೈತರ ಅಳಲು. ಅದಕ್ಕಾಗಿ ಇದಿರು ನೋಡುತ್ತಲೇ ನಿಂತಿದ್ದಾರೆ.
(ಇನ್ಫೋ ವಾರ್ತೆ)