ಶುಲ್ಕ ಹೆಚ್ಚಳ : ಹುಬ್ಬಳ್ಳಿಯಲ್ಲಿ ಸಚಿವ ಹಿಂಡಸಗೇರಿ ಮನೆ ಘೕರಾವ್
ಹುಬ್ಬಳ್ಳಿ : ಶಿಕ್ಷಣ ಶುಲ್ಕ ಹೆಚ್ಚಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರತಿಭಟಿಸಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಜಿಲ್ಲಾ ಉಸ್ತುವಾರಿ ಸಚಿವ ಎ.ಎಂ. ಹಿಂಡಸಗೇರಿ ಅವರನ್ನು ಅವರ ಮನೆಯಲ್ಲೇ ಸೋಮವಾರ ಘೕರಾವ್ ಮಾಡಿದರು.
ಶುಲ್ಕ ಹೆಚ್ಚಳದ ವಿರುದ್ಧ ಪ್ರತಿಭಟನೆ ನಡೆಸಲು ತರಗತಿಗಳನ್ನು ಬಹಿಷ್ಕರಿಸಿದ ಕಾರ್ಯಕರ್ತರು ಮೆರವಣಿಗೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನಿವಾಸಕ್ಕೆ ತೆರಳಿ, ಘೕರಾವ್ ಮಾಡಿದರು. ಶುಲ್ಕ ಹೆಚ್ಚಳ ಹಿಂತೆಗೆದುಕೊಳ್ಳುವ ಸಂಬಂಧ ತಾವು ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಸಚಿವರಿಂದ ಭರವಸೆ ದೊರೆತ ನಂತರ ಪ್ರತಿಭಟನಾಕಾರರು, ಶಾಂತಿಯುತವಾಗಿ ಹಿಂತಿರುಗಿದರು.
ಶಿರಸಿ ವರದಿ : ಇಲ್ಲಿನ ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ತರಗತಿಗಳನ್ನು ಬಹಿಷ್ಕರಿಸಿ, ಸರ್ಕಾರದ ಶಿಕ್ಷಣ ಶುಲ್ಕ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಈ ವಿಷಯವನ್ನು ಇಲ್ಲಿನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ನಾಯಕರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಈ ವಿಷಯವನ್ನು ಕರ್ನಾಟಕ ವಿಶ್ವವಿದ್ಯಾಲಯದ ಅಧಿಕಾರಿಗಳ ಜತೆ ಚರ್ಚಿಸಿ, ಪರಿಹಾರ ದೊರಕಿಸಿಕೊಡುವ ಭರವಸೆಯನ್ನು ಶಿರಸಿ ತಹಶೀಲ್ದಾರ್ ಎಂ. ರಘುನಾಥ್ ನೀಡಿದರು ಎಂದು ವಿದ್ಯಾರ್ಥಿ ಮುಖಂಡರು ತಿಳಿಸಿದ್ದಾರೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ನಾಯಕರು, ಸಹಾಯಕ ಜಿಲ್ಲಾಧಿಕಾರಿ ನವೀನ್ ರಾಜ್ ಸಿಂಗ್ ಅವರಿಗೆ ಈ ಸಂಬಂಧ ಮನವಿ ಪತ್ರವನ್ನೂ ಅರ್ಪಿಸಿದ್ದಾರೆ. (ಯು.ಎನ್.ಐ)