ಕಾಡಿಗೆ ಹೋಗಿದ್ದುದು 10 ಕೋಟಿ ಜನರ ಪ್ರತಿನಿಧಿಯಾಗಿ - ನೆಡುಮಾರನ್
ಬೆಂಗಳೂರು : ಕರ್ನಾಟಕ ಹಾಗೂ ತಮಿಳುನಾಡಿನ 10 ಕೋಟಿ ಜನತೆಯ ಪ್ರತಿನಿಧಿಯಾಗಿ ರಾಜ್ರನ್ನು ವೀರಪ್ಪನ್ ಬಂಧನದಿಂದ ಬಿಡಿಸಿತರಲು ಕಾಡಿಗೆ ಹೋಗಿದ್ದೆನೇ ವಿನಃ ರಾಜ್ಯ ಸರ್ಕಾರಗಳ ಪ್ರತಿನಿಧಿಯಾಗಲ್ಲ ಎಂದು ತಮಿಳು ರಾಷ್ಟ್ರೀಯ ಆಂದೋಲನದ ನಾಯಕ ಪಿ.ನೆಡುಮಾರನ್ ಹೇಳಿದ್ದಾರೆ.
ನಗರದಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಬೆಂಗಳೂರು ತಮಿಳು ಸಂಘಂ ಸಲ್ಲಿಸಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು. ನಾನು ಹಾಗೂ ಸಂಗಡಿಗರು ಕಾಡಿಗೆ ತೆರಳಿದ್ದು ಕೇವಲ ಮಾನವೀಯತೆಯ ದೃಷ್ಟಿಯಿಂದ. ರಾಜ್ ಕರ್ನಾಟಕಕ್ಕೆ ಎಷ್ಟು ಮುಖ್ಯ ಎನ್ನುವುದು ನನಗೆ ಗೊತ್ತು . ಅವರನ್ನು ಮತ್ತೆ ನಾಡಿಗೆ ಸೇರಿಸಿರುವುದು ನನಗೆ ಖುಷಿ ಕೊಟ್ಟಿದೆ ಎಂದರು.
ನಾನು ಸಂಧಾನಕಾರನಾಗಿ ಕಾಡಿಗೆ ಹೋಗುವುದನ್ನು ರಾಜಕೀಯ ಕಾರಣಗಳಿಂದಾಗಿ ಯಾರು ಬಹಿರಂಗವಾಗಿ ವಿರೋಧಿಸಿದ್ದರೋ, ಅವರುಗಳೇ ಕಾಡಿಗೆ ಹೋಗುವಂತೆ ನನ್ನನ್ನು ತೆರೆಮರೆಯಲ್ಲಿ ಒತ್ತಾಯಿಸಿದರು ಹಾಗೂ ಸಂಧಾನಯಾತ್ರೆಯ ಯಶ್ಸಸಿಗೆ ಎಲ್ಲಾ ರೀತಿಯಲ್ಲಿಯೂ ಹಾರೈಸಿದರು ಎಂದು ಹೇಳಿದರು.
ತಮಿಳು ಸಂಘಂನ ಅಧ್ಯಕ್ಷ ಕೆ. ಬಾಲಸುಬ್ರಹ್ಮಣ್ಯಂ ಮಾತನಾಡಿ, ಮಾನವೀಯತೆ ಹಾಗೂ ಭಾರೀ ಆತ್ಮ ವಿಶ್ವಾಸದ ವ್ಯಕ್ತಿ ಎಂದು ನೆಡುಮಾರನ್ರ ವ್ಯಕ್ತಿತ್ವವನ್ನು ಬಣ್ಣಿಸಿದರು. ದಿವಂಗತ ಕೆ. ಕಾಮರಾಜ್ ಹಾಗೂ ಇಂದಿರಾಗಾಂಧಿ ಅವರ ಜೀವಗಳನ್ನು ಉಳಿಸುವಲ್ಲಿ ಈ ಹಿಂದೆ ಮಹತ್ವದ ಪಾತ್ರ ವಹಿಸಿದ್ದ ನೆಡುಮಾರನ್ ಈಗ ರಾಜ್ರನ್ನು ವೀರಪ್ಪನ್ನಿಂದ ಬಿಡಿಸಿಕೊಂಡು ಬಂದಿದ್ದಾರೆ. ಇದು ಅವರ ತತ್ವಾದರ್ಶಗಳಿಗೆ ಸಂದ ಜಯ ಎಂದು ಬಾಲಸುಬ್ರಹ್ಮಣ್ಯಂ ಹೇಳಿದರು.
ವೀರಪ್ಪನ್ನೊಂದಿಗಿನ ಸಂಧಾನ ಪ್ರಕ್ರಿಯೆಯಲ್ಲಿ ನೆಡುಮಾರನ್ ಜೊತೆಯಲ್ಲಿ ಭಾಗಿಗಳಾಗಿದ್ದ ಪ್ರೊ. ಕಲ್ಯಾಣಿ ಹಾಗೂ ಪುದುವೈ ಸುಕುಮಾರನ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಭಾನುವಾರ (ಜ.7) ಅಗ್ನಿ ಪತ್ರಿಕಾ ಬಳಗದ ವತಿಯಿಂದ ನೆಡುಮಾರನ್ ಅವರ ಸನ್ಮಾನ ಕಾರ್ಯಕ್ರಮ ಕನ್ನಡ ಸಂಘಟನೆಗಳ ವಿರೋಧದಿಂದ ರದ್ದಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
(ಯುಎನ್ಐ)
ಮುಖಪುಟ / ಇವತ್ತು... ಈ ಹೊತ್ತು...