ಕೋಲಾಗೆ ನೀಡಿರುವ ತೆರಿಗೆ ವಿನಾಯಿತಿಯನ್ನು ಸ್ಥಳೀಯರಿಗೂ ನೀಡಿ
(ಮಂಗಳೂರು ಪ್ರತಿನಿಧಿಯಿಂದ)
ಮಂಗಳೂರು : ಬಹುರಾಷ್ಟ್ರೀಯ ಕಂಪನಿ ಕೋಕಾಕೋಲಾದ ಉತ್ಪನ್ನಗಳಿಗೆ ನೀಡಿರುವ ತೆರಿಗೆ ವಿನಾಯಿತಿಯನ್ನು ಸ್ಥಳೀಯರಿಗೂ ವಿಸ್ತರಿಸಬೇಕು ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಲಘು ಪಾನೀಯ ತಯಾರಿಕಾ ಸಂಘದ ಅಧ್ಯಕ್ಷ ಗೋಪಾಲ ಶೆಟ್ಟಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬಹುರಾಷ್ಟ್ರೀಯ ಲಘು ಪಾನೀಯ ತಯಾರಿಕ ಸಂಸ್ಥೆಗಳ ಅಪ್ಪಳಿಸುವಿಕೆಯಲ್ಲಿ ದೇಶೀಯ ಲಘು ಪಾನೀಯ ಘಟಕಗಳು ಕೊಚ್ಚಿ ಹೋಗುತ್ತಿವೆ. ಉಡುಪಿ ಹಾಗೂ ಮಂಗಳೂರು ಜಿಲ್ಲೆಗಳಲ್ಲಿ ಪ್ರಸ್ತುತ 200 ಲಘು ಪಾನೀಯ ತಯಾರಿಕಾ ಘಟಕಗಳದ್ದು ಅವುಗಳಲ್ಲಿ 100 ಘಟಕಗಳು ಕದ ಮುಚ್ಚುವ ಆತಂಕ ಎದುರಿಸುತ್ತಿವೆ. ತೆರಿಗೆ ವಿನಾಯಿತಿ ನೀಡುವುದರಿಂದ ಇಂಥಾ ಘಟಕಗಳು ಉಸಿರಾಡಲು ಸಾಧ್ಯವಾಗಬಹುದು ಎಂದು ಶೆಟ್ಟಿ ಮಂಗಳೂರಿನ ಇಂಡಿಯಾ ಇನ್ಫೋ ಪ್ರತಿನಿಧಿಗೆ ತಿಳಿಸಿದರು.
ಕೆಲವು ಸ್ಥಳೀಯ ಲಘು ಪಾನೀಯ ತಯಾರಕರು ಯಾವುದೇ ಠೇವಣಿ ಪಡೆಯದೆ ತಮ್ಮ ಬಾಟಲಿಗಳನ್ನು ವ್ಯಾಪಾರಿಗಳಿಗೆ ನೀಡುತ್ತಿದ್ದಾರೆ. ಈ ಬಾಟಲಿಗಳಲ್ಲಿ ಕಲಬೆರಕೆ ಮಾಡುತ್ತಿರುವ ಪ್ರಕರಣಗಳು ಸಂಘದ ಗಮನಕ್ಕೆ ಬಂದಿದ್ದು , ಇಂಥಾ ಪ್ರಕರಣಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಗೋಪಾಲಶೆಟ್ಟಿ ಹೇಳಿದರು.
ಮುಖಪುಟ / ಇವತ್ತು... ಈ ಹೊತ್ತು...