ಬೆಂಗಳೂರಿನಲ್ಲಿ ಕೋಟ್ಯಧಿಪತಿಯ ಕಗ್ಗೊಲೆ, ಕಾರಣ ನಿಗೂಢ
ಬೆಂಗಳೂರು : ನಗರದ ರಿಯಲ್ ಎಸ್ಟೇಟ್ ವಹಿವಾಟುದಾರ ಹಾಗೂ ಕೋಟ್ಯಧಿಪತಿಯಾಬ್ಬರನ್ನು ದುಷ್ಕರ್ಮಿಗಳಿಬ್ಬರು ಗುಂಡಿಟ್ಟು ಕೊಂದಿರುವ ಘಟನೆ ಶುಕ್ರವಾರ ಸಂಜೆ ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಉದ್ಯಮಿ ವೈ. ಸುಬ್ಬರಾಜು (65) ಅವರನ್ನು ಪರಿಚಯಿಸಿಕೊಳ್ಳುವಂತೆ ನಾಟಕವಾಡಿ, ಕೈಕುಲುಕುವ ನೆಪದಲ್ಲಿ ಹತ್ತಿರ ಬಂದ ದುಷ್ಕರ್ಮಿಗಳು ಬಹಳ ಸಮೀಪದಿಂದ ಗುಂಡುಹಾರಿಸಿ ಕೊಂದಿದ್ದಾರೆ. ಈ ಕೊಲೆಯ ಹಿಂದೆ ಭೂಗತ ಜಗತ್ತಿನ ಕೈವಾಡ ಇದೆ ಎಂದು ಶಂಕಿಸಲಾಗಿದೆ. ಆದರೆ, ಕೊಲೆಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ.
ಶೇಷಾದ್ರಿಪುರದ 1ನೇ ಮುಖ್ಯರಸ್ತೆಯಲ್ಲಿನ ಸುಬ್ಬರಾಜು ಅವರ ರಿಯಲ್ ಎಸ್ಟೇಟ್ ಕಚೇರಿ ಶ್ರೀನಿವಾಸ ಎಂಟರ್ಪ್ರೆೃಸಸ್ಗೆ ಸಂಜೆ 5-50ರ ಸುಮಾರಿನಲ್ಲಿ ಬಂದ ಇಬ್ಬರು ಸುಬ್ಬರಾಜು ಅವರ ಹಣೆಗೆ ಗುಂಡಿಟ್ಟು ಹೊಡೆದಿದ್ದಾರೆ. ಅತಿ ಸಮೀಪದಿಂದ ಗುಂಡು ಹಾರಿಸಿರುವ ಕಾರಣ ಗುಂಡು ಹಣೆಯ ಮೂಲಕ ಹಾದು ಹಿಂದಲೆಯಿಂದ ಹೊರಬಂದಿದೆ.
ಈ ಘಟನೆ ನಡೆದಾಗ ಕಚೇರಿಯಲ್ಲೇ ಸುಬ್ಬರಾಜು ಅವರ ಇಬ್ಬರು ಮಕ್ಕಳಾದ ಶ್ರೀನಿವಾಸ (35) ಹಾಗೂ ಜಗದೀಶ್ವರ ರಾಜು (30) ದುಷ್ಕರ್ಮಿಗಳ ಬೆನ್ನುಹತ್ತಿ ಹಿಡಿಯಲು ಪ್ರಯತ್ನಿಸಿದರಾದರೂ, ಹತ್ತಿರ ಬಂದರೆ ಗುಂಡು ಹಾರಿಸುವುದಾಗಿ ಬೆದರಿಕೆ ಹಾಕಿದ ಪಿಸ್ತೂಲು ಧಾರಿಗಳು ಆಟೋ ರಿಕ್ಷಾ ಏರಿ ಪರಾರಿಯಾದರು.
ಜಗದೀಶ ರಾಜ್ ಅಲ್ಲೇ ಇದ್ದ ಪೊಲೀಸ್ ಪೇದೆಗೆ ವಿಷಯ ತಿಳಿಸಿ ಮತ್ತೊಂದು ಆಟೋದಲ್ಲಿ ದುಷ್ಕರ್ಮಿಗಳನ್ನು ಆನಂದರಾವ್ ವೃತ್ತ, ಮಹಾರಾಣಿ ಕಾಲೇಜು ಮಾರ್ಗವಾಗಿ ಮೌರ್ಯ ಹೊಟೆಲ್ವರೆಗೂ ಹಿಂಬಾಲಿಸಿದರಾದರೂ, ದುಷ್ಕರ್ಮಿಗಳು ಮತ್ತೊಂದು ಆಟೋ ಹತ್ತಿ ತಪ್ಪಿಸಿಕೊಂಡರು.
ಮೊಬೈಲ್ ಪತ್ತೆ : ದುಷ್ಕರ್ಮಿಗಳು ಪರಾರಿಯಾಗಿದ್ದರೂ ಕೂಡ, ತಪ್ಪಿಸಿಕೊಳ್ಳುವ ಯತ್ನದಲ್ಲಿ ಒಬ್ಬ ಕೊಲೆಗಾರನ ಬಳಿ ಇದ್ದ ಮೊಬೈಲ್ ಫೋನ್ ಕಚೇರಿಯ ಎದುರು ಬಿದ್ದಿದ್ದು, ಇದರಿಂದ ಕೊಲೆಗಾರರ ಸುಳಿವು ಸಿಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸ್ ಆಯುಕ್ತ ಮಡಿಯಾಳ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದರು. ಸುಬ್ಬರಾಜ್ ಅವರು, ಹಣಕಾಸಿನ ವಹಿವಾಟೂ ನಡೆಸುತ್ತಿದ್ದರು.